Mysore
20
overcast clouds
Light
Dark

ದಸರಾ ಆನೆಗಳ ದುರಂತ ಸಾವು: ದ್ರೋಣ, ಬಲರಾಮರ ಸಾಲಿಗೆ ಸೇರಿದ ಅರ್ಜುನ

ಮೈಸೂರು : ದಸರಾ ಆನೆಗಳೆಂದರೆ ಮೈಸೂರಿನ ಜನತೆಗೆ ಪ್ರೀತಿ ಅಭಿಮಾನದ ಜತೆ ಪೂಜ್ಯಭಾವ. ಹತ್ತೂವರೆ ಅಡಿ ಎತ್ತರ, 7000 ಕಿಲೋ ತೂಕದ್ದೆನ್ನಲಾದ ಜಯಮಾರ್ತಾಂಡ ಆನೆಯ ಹೆಸರಿನಲ್ಲಿ ಮೈಸೂರಿನ ಅರಮನೆ ಮುಂದೆ ಮಹಾದ್ವಾರ ನಿರ್ಮಿಸಲಾಗಿದೆ.

ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿನಲ್ಲಿ ದಸರೆಗೆ ಚಾಲನೆ ನೀಡಿದ ಬಳಿಕ ಮೊಟ್ಟ ಮೊದಲು ಅಂಬಾರಿ ಹೊತ್ತಿದ್ದು ಇದೇ ಆನೆ. 1857ರಿಂದ 1902ರ ತನಕ ಬರೋಬ್ಬರಿ 45 ವರ್ಷಗಳ ಕಾಲ ಈ ಆನೆ ದಸರಾ ಮೆರವಣಿಗೆಯಲ್ಲಿ ಮಹಾರಾಜರನ್ನು ಹೊತ್ತು ಸಾಗಿತ್ತು. ಈ ಆನೆಯ ನಂತರ ವಿಜಯಬಹದ್ದೂರ್, ನಂಜುಂಡ, ರಾಮಪ್ರಸಾದ್, ಮೋತಿಲಾಲ್, ಸುಂದರ್ ರಾಜ್, ಐರಾವತ, ಬಿಳಿಗಿರಿ, ರಾಜೇಂದ್ರ, ಗಜೇಂದ್ರ, ದ್ರೋಣ, ಅರ್ಜುನ, ಅಭಿಮನ್ಯು ಹೆಸರಿನ  12ಕ್ಕೂ ಹೆಚ್ಚು ಆನೆಗಳು ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತು ಸಾಗಿವೆ.

ದಸರಾ ಆನೆಗಳ ದುರಂತ ಸಾವು : ಅಂಬಾರಿ ಹೊತ್ತ ಆನೆಗಳ ಪೈಕಿ ದ್ರೋಣ, ಬಲರಾಮ ಮತ್ತು ಅರ್ಜುನ ಸೇರಿ ಕನಿಷ್ಠ ಮೂರು ಆನೆಗಳು ದುರಂತ ಸಾವು ಕಂಡಿವೆ. ಬಲರಾಮ, ಅರ್ಜುನ ಇದೇ ವರ್ಷ ಗತಿಸಿರುವುದು ದು:ಖದ ಬೆಳವಣಿಗೆ. ಇದಲ್ಲದೆ 13 ವರ್ಷಗಳ ಕಾಲ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡ ಶ್ರೀರಾಮ ಹೆಸರಿನ ಆನೆ ಮತ್ತು ಭವಿಷ್ಯದ ಅಂಬಾರಿ ಆನೆಯಾಗಿ ಗುರುತಿಸಿಕೊಂಡಿದ್ದ ಗೋಪಾಲಸ್ವಾಮಿ ಎಂಬ ಎರಡು ಆನೆಗಳು ಕಾದಾಟದಲ್ಲಿ ಅಕಾಲ ಮೃತ್ಯು ಕಂಡ ಆನೆಗಳು.

ದ್ರೋಣ : ಜಯಮಾರ್ತಾಂಡ, ಬಿಳಿಗಿರಿ ಆನೆಗಳ ಬಳಿಕ ಅತ್ಯಂತ ಬಲಿಷ್ಠ ಆನೆಯಾಗಿ ಗುರುತಿಸಿಕೊಂಡಿದ್ದ ದ್ರೋಣ 10.25 ಅಡಿ ಎತ್ತರದ ಆನೆ. ಸುಮಾರು 6400 ಕೆ.ಜಿ. ತೂಕ ಇದ್ದ ಈ ಆನೆ ಸತತ 18 ವರ್ಷಗಳ ಕಾಲ ಅಂಬಾರಿಗೆ ಬೆನ್ನುಕೊಟ್ಟ ಖ್ಯಾತಿ ಹೊಂದಿತ್ತು. 1998 ರಲ್ಲಿ ಬಳ್ಳೆ ಶಿಬಿರದಲ್ಲಿ ಮೇಯಲು ಹೊರಟ ಈ ಆನೆ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ದುರಂತ ಅಂತ್ಯ ಕಾಣದೇ ಹೋಗಿದ್ದರೆ ಇನ್ನಷ್ಟು ವರ್ಷಗಳ ಕಾಲ ಅಂಬಾರಿ ಹೊರುವ ಅವಕಾಶವಿತ್ತು.

ಬಲರಾಮ ಆನೆ : ಅತ್ಯಂತ ಸಾಧು ಸ್ವಭಾವದ ಬಲರಾಮ 1999 ರಿಂದ 2011ರ ವರೆಗೆ ನಿರಂತರವಾಗಿ ಅಂಬಾರಿ ಹೊತ್ತಿದ್ದ ಆನೆ. ಅಂಬಾರಿ ಸೇವೆಯಿಂದ ನಿವೃತ್ತಿ ಪಡೆದ ಬಳಿಕ ಬಲರಾಮನನ್ನು ಹುಣಸೂರು ತಾಲ್ಲೂಕಿನ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಾಲನೆ ಮಾಡಲಾಗುತ್ತಿತ್ತು. ಕಳೆದ ವರ್ಷ ( 2022) ಬಲರಾಮನನ್ನು ಮೇಯಲು ಬಿಟ್ಟಿದ್ದ ಸಮಯದಲ್ಲಿ ಶಿಬಿರದ ಹೊಲದ ಕಡೆ ತೆರಳಿದ್ದಾಗ ಹೊಲದ ಮಾಲೀಕ ಕಾಡಾನೆ ಎಂದು ತಿಳಿದು ಬಲರಾಮನ ಮೇಲೆ ಗುಂಡು ಹಾರಿಸಿದ್ದ. ಈ ಘಟನೆಯ ಬಳಿಕ ಬಲರಾಮನ ಆರೋಗ್ಯದಲ್ಲಿ ಚೇತರಿಕೆ ಕಂಡರೂ ಸರಿಯಾಗಿ ಆಹಾರ ಸೇವಿಸಲಾಗದೆ ಇದೇ ವರ್ಷ ( 2023) ಮೃತಪಟ್ಟಿದೆ.

ಗೋಪಾಲಸ್ವಾಮಿ : ಭವಿಷ್ಯದ ದಸರಾ ಆನೆ ಎಂದು ಬಿಂಬಿತವಾಗಿದ್ದ ಗೋಪಾಲಸ್ವಾಮಿ ಕಳೆದ ವರ್ಷ ( 2022) ನವೆಂಬರ್ ತಿಂಗಳಲ್ಲಿ ಹುಣಸೂರಿನ ಹನಗೋಡು ಭಾಗದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿತ್ತು. ನೋಡಲು ಅತ್ಯಂತ ಆಕರ್ಷಕವಾಗಿದ್ದ ಈ ಆನೆ

ಆಭಿಮನ್ಯು ನಂತರ ದಸರಾ ಮುನ್ನಡೆಸುವ ಆನೆ ಎಂದು ಬಿಂಬಿತವಾಗಿತ್ತು. 14 ಬಾರಿ ದಸರಾ ಮಹೋತ್ಸವಲ್ಲಿ ಭಾಗವಹಿಸಿದ್ದ ಈ ಆನೆಗೆ ಒಂದೆರಡು ಬಾರಿ ಮರದ ಅಂಬಾರಿಯನ್ನು ಹಾಕಿ ತಾಲೀಮು ಕೂಡಾ ನಡೆಸಲಾಗಿತ್ತು. ಧೈರ್ಯಶಾಲಿ ಗೋಪಾಲಸ್ವಾಮಿಯನ್ನು ಹುಲಿ ಹಾಗೂ ಕಾಡು ಪ್ರಾಣಿಗಳ ಕಾರ್ಯಚರಣೆಗೆ ಬಳಸಲಾಗುತ್ತಿತ್ತು. ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಲ್ಲಿ ವಾಸವಿದ್ದ ಗೋಪಾಲಸ್ವಾಮಿಯನ್ನು ಕಳೆದ ವರ್ಷ ಶಿಬಿರದಿಂದ ಕಾಡಿಗೆ ಬಿಟ್ಟಿದ್ದ ಸಮಯದಲ್ಲಿ ಕಾಡಾನೆಯ ಜೊತೆ ಕಾದಾಟಕ್ಕೆ ಇಳಿದಿತ್ತು. ಈ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗೋಪಾಲಸ್ವಾಮಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿತ್ತು.

ಶ್ರೀರಾಮ : ಸುಮಾರು ಐದು ವರ್ಷಗಳ ಕಾಲ ರಾಜಮನೆತನದ ಆಶ್ರಯದಲ್ಲಿ ಅರಮನೆಯಲ್ಲಿ ಪಾಲನೆ ಕಂಡ ಈ ಶ್ರೀರಾಮ 13 ವರ್ಷಗಳ ಕಾಲ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು. ಅಕಾಲ ಸಾವಿನ ಮುನ್ನ ಗಜಪಡೆಯಲ್ಲಿ ನಿಶಾನೆ ಆನೆಯಾಗಿ ಕಾರ್ಯ ನಿರ್ವಹಿಸುತ್ತಿತ್ತು ಅರಮನೆಯ ಪಟ್ಟದ ಆನೆ ಗಜೇಂದ್ರನೇ ಈ ಆನೆಯ ಸಾವಿಗೆ ಕಾರಣವಾಗಿದ್ದು ವಿಪರ್ಯಾಸ. 2015ರ ಡಿಸೆಂಬರ್ ತಿಂಗಳಲ್ಲಿ ಕೆ. ಗುಡಿ ಶಿಬಿರದಲ್ಲಿ ಮದವೇರಿದ್ದ ಗಜೇಂದ್ರ ಆನೆಯ ತಿವಿತಕ್ಕೆ ಒಳಗಾಗಿ ಶ್ರೀರಾಮ ಮೃತಪಟ್ಟಿದ್ದ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ