Mysore
23
overcast clouds

Social Media

ಶನಿವಾರ, 15 ಆಗಸ್ಟ್ 2026
Light
Dark

ಚಿಲ್ಲರೆ ರಾಜಕಾರಣ ಕಾಂಗ್ರೆಸ್‌ ಡಿಎನ್‌ಎ ನಲ್ಲೇ ಇದೆ : ಪ್ರಹ್ಲಾದ್‌ ಜೋಶಿ

ಹುಬ್ಬಳ್ಳಿ : ನೂತನ ಸಂಸತ್ ಭವನ ವಿಚಾರವಾಗಿ ರಾಷ್ಟ್ರಪತಿ ಹೆಸರಲ್ಲಿ ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡುತ್ತಿದೆ. ಚಿಲ್ಲರೆ ರಾಜಕಾರಣ ಮಾಡುವುದು ಕಾಂಗ್ರೆಸ್‌ನ ಡಿಎನ್‌ಎನಲ್ಲಿಯೇ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕಿಡಿಕಾರಿದ್ದಾರೆ.

ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿಂದು ನಡೆದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೂತನ ಸಂಸತ್‌ ಭವನ ಶಿಲಾನ್ಯಾಸ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದಲಿತರೆಂಬ ಕಾರಣಕ್ಕೆ ಆಹ್ವಾನಿಸಲಿಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ನವರು ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರಿಗೆ ಏಕೆ ಬೆಂಬಲ ನೀಡಿರಲಿಲ್ಲ? ಸೋಲುತ್ತೇವೆಂದು ಗೊತ್ತಿದ್ದರೂ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು. ಅದು ಚಿಲ್ಲರೆ ರಾಜಕಾರಣ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಆಧುನಿಕ ವ್ಯವಸ್ಥೆಗೆ ತಕ್ಕಂತೆ ನೂತನ ಸಂಸತ್ ಭವನ ನಿರ್ಮಿಸಲಾಗಿದೆ. ಆದರೆ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್‌ ನೂತನ ಸಂಸತ್ ಭವನವನ್ನು ಮೋದಿ ಮಲ್ಟಿಫ್ಲೆಕ್ಸ್ ಎಂದು ಕೇವಲವಾಗಿ ಹೇಳಿಕೆ ನೀಡಿದ್ದಾರೆ. ವಿಶ್ವವೇ ಈ ಭವನ ಮೆಚ್ಚಿಕೊಳ್ಳುತ್ತಿದೆ, ಒಳ್ಳೆಯ ಕೆಲಸವನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಅವರ ಕೆಳಮಟ್ಟದ ಮನಸ್ಥಿತಿ ಏನೆಂಬುದು ಇದರಿಂದ ಅರ್ಥವಾಗುತ್ತದೆ. ಜನರೇ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದಿದ್ದಾರೆ.

2011ರಲ್ಲಿ ಕಾಂಗ್ರೆಸ್ ಸರ್ಕಾರ ಜಾತಿಗಣತಿ ಮಾಡಲಿಲ್ಲ. ಆದರೀಗ ರಾಹುಲ್ ಗಾಂಧಿ ಈ ಬಗ್ಗೆ ಮಾತನಾಡುತ್ತಿದ್ದಾರೆ‌. ಅತಿವೃಷ್ಟಿ , ಅನಾವೃಷ್ಟಿಯಾದರೂ ಪ್ರಧಾನಿ ಮೋದಿ ಅವರನ್ನು ತೆಗಳುತ್ತಾರೆ. ಅವರ ಜನಪ್ರಿಯತೆ ಸಹಿಸಿಕೊಳ್ಳಲಾಗದೇ ಕನಸಲ್ಲೂ ನೆನಪು ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ನೀಡಿ 33% ಮಹಿಳಾ ಮೀಸಲಾತಿ ಕಲ್ಪಿಸಲಾಗುತ್ತದೆ. ಕಾಂಗ್ರೆಸ್ ಈ ಹಿಂದೆಯೂ ಮೀಸಲಾತಿ ಕಲ್ಪಿಸಿಲ್ಲ, ಮುಂದೆಯೂ ಕಲ್ಪಿಸುವುದಿಲ್ಲ. ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಮಹಿಳಾ ಮೀಸಲಾತಿ ಜಾರಿ 100% ಖಚಿತ, ಆದ್ರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಅಷ್ಟೇ ಎಂದು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!