Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ಆಸ್ಪತ್ರೆಗೆ ಹೋಗಲು 7 ಕಿಮೀ ನಡೆದ ಗರ್ಭಿಣಿ, ಬಿಸಿಲಿನ ತಾಪದಿಂದ ಸಾವು

ಪಾಲ್ಘಾರ್: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಮೇ ತಿಂಗಳಲ್ಲಿ ಬಿಸಿಲಿನ ಝಳ ಇನ್ನೂ ಹೆಚ್ಚಾಗಿದೆ. ಹೊರಗಡೆ ಓಡಾಡುವುದು ಕಷ್ಟವಾಗಿದೆ. ಬಿಸಿಲಿನ ಝಳ ತಾಳಳಾರದೇ, ಆರೋಗ್ಯದಲ್ಲಿ ವ್ಯತ್ಯಾಸವಾಗಿ ಸಾವನ್ನಪ್ಪಿರುವ ಘಟನೆಗಳೂ ವರದಿಯಾಗಿದೆ.

ಮಹಾರಾಷ್ಟ್ರದ ಫಲ್ಘಾರ್ ಜಿಲ್ಲೆಯಲ್ಲೂ ಇಂತದ್ದೇ ಘಟನೆ ನಡೆದಿದೆ. ಇಲ್ಲಿನ 21 ವರ್ಷದ ಗರ್ಭಿಣಿಯೊಬ್ಬರು, ತಮ್ಮ ಊರಿನಿಂದ 7 ಕಿಮೀ ದೂರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ತಪಾಸಣೆಗಾಗಿ ರಣ ಬಿಸಿಲಿನಲ್ಲಿ ನಡೆದುಕೊಂಡು ಹೋಗಿದ್ದಾರೆ. ಅಲ್ಲಿಂದ ವಾಪಸ್ ಬರುವಾಗ ಸೂರ್ಯಾಘಾತ (Sun Stroke) ನಿಂದ ಮೃತಪಟ್ಟಿದ್ದಾರೆ.

ಈ ಘಟನೆ ಬಗ್ಗೆ ಜಿಲ್ಲಾ ಸಿವಿಲ್ ಸರ್ಜನ್ ಡಾ ಸಂಜಯ್ ಬೋಡಾಡೆ ಪ್ರತಿಕ್ರಿಯಿಸಿ, “ಆಕೆ 9 ತಿಂಗಳ ಗರ್ಭಿಣಿಯಿದ್ದರು. ನಿಯಮಿತವಾಗಿ ಪ್ರಾಥಮಿಕ ಕೇಂದ್ರಕ್ಕೆ ತಪಾಸಣೆಗಾಗಿ ಬರುತ್ತಿದ್ದರು. ಎಂದಿನಂತೆ ಬಿಸಿಲಿನಲ್ಲಿ 7 ಕಿಮೀ ನಡೆದುಕೊಂಡು ಬಂದಿದ್ದಾರೆ. ಚಿಕಿತ್ಸೆ ಪಡೆದು ವಾಪಸ್ ತೆರಳುವಾಗ 3.5 ಕಿಮೀ ನಡೆದುಕೊಂಡು ಹೋಗಿದ್ದಾರೆ.

ಅಲ್ಲಿ ಅವರಿಗೆ ಸನ್ ಸ್ಟ್ರೋಕ್ ಆಗಿದೆ. ಕೂಡಲೇ ಪ್ರಾಥಮಿಕ ಕೇಂದ್ರದಲ್ಲಿ ವೈದ್ಯರು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ದಹಾನುವಿನ ಧುಂಡಲವಾಡಿಯಲ್ಲಿರುವ ವಿಶೇಷ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ದುರಾದೃಷ್ಟವಶಾತ್, ಮಾರ್ಗಮಧ್ಯೆ ಆಕೆ ಆಂಬ್ಯುಲೆನ್ಸ್‌ನಲ್ಲಿ ಸಾವನ್ನಪ್ಪಿದ್ದಾಳೆ ಮತ್ತು ಭ್ರೂಣವನ್ನೂ ಕಳೆದುಕೊಂಡಿದ್ದಾಳೆ” ಎಂದಿದ್ದಾರೆ.

ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿಲ್ಲ ಮತ್ತು ಕಳಸ ಪಿಎಚ್‌ಸಿ ವೈದ್ಯರು ತಕ್ಷಣ ಗಮನ ಹರಿಸಿದ್ದರು. ಆಕೆಯ “ಅರೆ ಕೊಮೊರ್ಬಿಡ್ ಸ್ಥಿತಿ” ಯಿಂದ ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾರಣ, ಅವರು ಅವಳನ್ನು ವಿಶೇಷ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಅವರು ಹೇಳಿದರು.

ತಾಪಮಾನ ಹೆಚ್ಚಿದ್ದರಿಂದ ಮಹಿಳೆ 7 ಕಿಮೀ ನಡೆದಿದ್ದರಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಪರಿಣಾಮವಾಗಿ, ಸನ್‌ ಸ್ಟ್ರೋಕ್ ಆಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಪಲ್ಘಾರ್ ಜಿಲ್ಲಾ ಪರಿಷದ್ ಅಧ್ಯಕ್ಷ ಪ್ರತಿಕ್ರಿಯಿಸಿ, “ಗರ್ಭಿಣಿಯಾಗಿದ್ದ ಆಕೆ ಅನಿಮಿಯಾದಿಂದ ಬಳಲುತ್ತಿದ್ದರು. ಅಲ್ಲಿನ ಆಶಾ ಕಾರ್ಯಕರ್ತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತರುತ್ತಾರೆ. ವೈದ್ಯರು ಪರೀಕ್ಷಿಸಿ ಔಷಧಗಳನ್ನು ಕೊಟ್ಟರೂ ವ್ಯರ್ಥವಾಯಿತು. ಜೊತೆಗೆ ಈ ಪ್ರಾಥಮಿಕ ಕೇಂದ್ರದಲ್ಲಿ ಐಸಿಯು ವ್ಯವಸ್ಥೆ ಇಲ್ಲ. ಇದ್ದಿದ್ದರೆ ಉಳಿಸಿಕೊಳ್ಳಬಹುದಾಗಿತ್ತು. ಇದನ್ನು ಇಲ್ಲಿಗೇ ಬಿಡುವುದಿಲ್ಲ. ಉನ್ನತ ಮಟ್ಟದವರೆಗೆ ಕೊಂಡೊಯ್ದು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ’ ಹೇಳಿದರು.

ಪದೇ ಪದೇ ಇಂತಹ ಘಟನೆಗಳು ವರದಿ

ಸರಿಯಾದ ಚಿಕಿತ್ಸೆ ಸಿಗದೇ, ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿಯ ಸಾವು ವರದಿಯಾಗುತ್ತಲೇ ಇರುತ್ತದೆ. ರಾಜ್ಯದ ವಿಚಾರಕ್ಕೆ ಬರುವುದಾದರೆ, ಹೆರಿಗೆ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕಾಗಿ ಚಿಕಿತ್ಸೆ ಸಿಗದೇ ಅವಳಿ ಮಕ್ಕಳಿಗೆ ಜನ್ಮ ನೀಡುವ ಸಂದರ್ಭದಲ್ಲಿ ಗರ್ಭಿಣಿ ಸಾವನ್ನಪ್ಪಿರುವ ಮನಕಲಕುವ ಘಟನೆ ತುಮಕೂರಿನಲ್ಲಿ ನಡೆದಿತ್ತು. ಇದು ಜನಾಕ್ರೋಶಕ್ಕೆ ಕಾರಣವಾಗಿತ್ತು. ಈ ಕಹಿ ಮರೆಯಾಗುವ ಮುನ್ನ, ಮತ್ತೊಂದು ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನಲ್ಲಿ ಹೆಚ್ಚಿನ ಚಿಕಿತ್ಸೆ ಸಿಗದೇ, ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಹೆರಿಯಾಗಿದೆ. ಮಗು ಸಾವನ್ನಪ್ಪಿದೆ.

ಹೆರಿಗೆಗೆಂದು ಯಾದಗಿರಿ ಜಿಲ್ಲಾಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!