ಬೆಂಗಳೂರು: ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೊ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ವಾಪಸ್ ಆಗಿದ್ದು, ಬೆಂಗಳೂರಿನ ದೇವನಹಳ್ಳಿ ಸಮೀಪದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ರಾಜ್ಯದಲ್ಲಿ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆ ದಿನ ( ಏಪ್ರಿಲ್ 26 ) ಮತ ಚಲಾಯಿಸಿದ ಬಳಿಕ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಹಲವು ಬಾರಿ ಭಾರತಕ್ಕೆ ಮರಳುವ ಟಿಕೆಟ್ ಬುಕ್ ಮಾಡಿ ಕೊನೆ ಕ್ಷಣದಲ್ಲಿ ವಿಮಾನ ಹತ್ತದೇ ಕಣ್ಣಾ ಮುಚ್ಚಾಲೆ ಆಟವನ್ನಾಡಿ ಇದೀಗ ಕೊನೆಗೂ ಎಲ್ಹೆಚ್ 784 ವಿಮಾನದ ಜಿ8 ಸೀಟ್ನಲ್ಲಿ ಕುಳಿತು ಜರ್ಮನ್ನ ಮ್ಯೂನಿಕ್ನಿಂದ ಬೆಂಗಳೂರಿಗೆ ಮಧ್ಯರಾತ್ರಿ ಸುಮಾರು 12.48ರ ಸಮಯಕ್ಕೆ ಬಂದಿಳಿದಿದ್ದು, ಪ್ರಜ್ವಲ್ ಮೇಲೆ ಲುಕ್ಔಟ್ ನೋಟಿಸ್ ಇದ್ದದ್ದರಿಂದ ಇಮಿಗ್ರೇಷನ್ ಅಧಿಕಾರಿಗಳು ಮೊದಲು ವಶಕ್ಕೆ ಪಡೆದು ನಂತರ ಎಸ್ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಶರಣಾಗಿರುವ ಪ್ರಜ್ವಲ್ ಅವರನ್ನು ಎಸ್ಐಟಿ ಅಧಿಕಾರಿಗಳು ಬೆಳಗ್ಗೆ ಆರೋಗ್ಯ ತಪಾಸಣೆಗೆ ಒಳಪಡಿಸಿದ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದು, ನಂತರ ತಮ್ಮ ವಶಕ್ಕೆ ಕೇಳಲಿದ್ದಾರೆ.