Mysore
23
clear sky

Social Media

ಭಾನುವಾರ, 19 ಏಪ್ರಿಲ 2026
Light
Dark

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಅನಧಿಕೃತ ಕ್ಯಾಂಟೀನ್ ತೆರವಿಗೆ ಆದೇಶ

ಮೈಸೂರು: ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜು ಆವರಣದಲ್ಲಿ ಅವಧಿ ಮೀರಿದ ಬಳಿಕವೂ ಅಕ್ರಮವಾಗಿ ನಡೆಸುತ್ತಿದ್ದ ಕ್ಯಾಂಟೀನ್ ತೆರವುಗೊಳಿಸುವಂತೆ ಕರ್ನಾಟಕ ಸಾರ್ವಜನಿಕ ಆವರಣಗಳ ಸಕ್ಷಮ ಪ್ರಾಧಿಕಾರಗಳ ಜಿಲ್ಲಾ ನ್ಯಾಯಾಲಯವು ಆದೇಶ ನೀಡಿದೆ.

ದೇವರಾಜ ಮೊಹಲ್ಲಾದ ಗರಡಿ ರಸ್ತೆ ನಿವಾಸಿ ಎಚ್.ಪಿ.ಪ್ರಭಾವತಿ ಎಂಬವರು ೨೧,೩೦೦ ರೂ. ಭದ್ರತಾ ಠೇವಣಿಯೊಂದಿಗೆ ಕಾಲೇಜು ಆವರಣದಲ್ಲಿ ತಿಂಗಳಿಗೆ ೭,೧೦೦ ರೂ. ಬಾಡಿಗೆಯಂತೆ ಕ್ಯಾಂಟೀನ್ ನಡೆಸಲು ೨೦೧೭ರಿಂದ ೨೦೨೨ರ ವರೆಗೆ ಕರಾರು ಮಾಡಿಕೊಳ್ಳಲಾಗಿತ್ತು. ಆದರೆ, ೫೮ ತಿಂಗಳ ಬಾಡಿಗೆ ಬದಲಿಗೆ ಕೇವಲ ೨೬ ತಿಂಗಳ ಬಾಡಿಗೆ ನೀಡಲಾಗಿತ್ತು. ಅಲ್ಲದೆ, ೫೨ ತಿಂಗಳ ವಿದ್ಯುತ್ ಬಿಲ್ ೨.೬ ಲಕ್ಷ ರೂ. ಪಾವತಿಸದೆ ಕರಾರು ಉಲ್ಲಂಘನೆ ಮಾಡಲಾಗಿತ್ತು.

ವಿಧಿಸಿದ ಷರತ್ತುಗಳ ಅನ್ವಯ ಪ್ರಾಂಶುಪಾಲರ ನಿರ್ಧಾರವೇ ಅಂತಿಮ. ಆದರೆ, ಇದನ್ನು ಮರೆಮಾಚಿ ಬಾಡಿಗೆದಾರರಾದ ಎಚ್.ಪಿ.ಪ್ರಭಾವತಿ ಅವರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ, ನ್ಯಾಯಾಲಯದ ಆದೇಶದ ನಡುವೆಯೂ ಒಪ್ಪಂದ ಉಲ್ಲಂಘಿಸಿ ಹಸ್ತಾಂತರ ಮಾಡಿರಲಿಲ್ಲ.

ಜತೆಗೆ, ಕೋವಿಡ್-೧೯ರ ಸಂಕಷ್ಟದ ಸಮಯದಲ್ಲಿ ವಿನಾಯಿತಿ ನೀಡಿದ್ದರೂ ವಿನಾಕಾರಣ ಹಸ್ತಾಂತರ ಮಾಡದೆ ತೊಂದರೆ ನೀಡಿದ್ದರು. ಈ ವಿಷಯವನ್ನು ಮನಗಂಡ ಕರ್ನಾಟಕ ಸಾರ್ವಜನಿಕ ಆವರಣಗಳ ಅನಧಿಕೃತ ಅನುಭವದಾರರನ್ನು ಒಕ್ಕಲೆಬ್ಬಿಸುವ ಕಾಯಿದೆ ೧೯೭೪ರ ಸಕ್ಷಮ ಪ್ರಾಧಿಕಾರಗಳ ನ್ಯಾಯಾಲಯವು, ಪ್ರಕರಣವನ್ನು ಇತ್ಯರ್ಥಪಡಿಸಿ ಕಾಲೇಜು ಕ್ಯಾಂಟಿನ್ ಅನ್ನು ತತಕ್ಷಣವೇ ತೆರವುಗೊಳಿಸಿ ಬಾಡಿಗೆ ಬಾಕಿ ೨,೪೩,೮೦೦ ರೂ. ಮತ್ತು ವಿದ್ಯುತ್ ಹಾಗೂ ನೀರಿನ ಬಾಕಿ ೨.೬೦ ಲಕ್ಷ ರೂ. ಸೇರಿದಂತೆ ಒಟ್ಟಾರೆ ೫,೦೩,೮೦೦ ರೂ. ಅನ್ನು ಕೂಡಲೇ ಪಾವತಿಸು ವುದಲ್ಲದೇ, ಕೂಡಲೇ ಕ್ಯಾಂಟೀನ್ ತೆರವು ಮಾಡುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ಕಾಲೇಜು ಪ್ರಾಂಶುಪಾಲರಾದ ಡಾ.ಡಿ.ರವಿ ಮತ್ತು ಸರ್ಕಾರಿ ವಕೀಲರಾದ ಉಮೇಶ್ ಕುಮಾರ್ ಅವರ ಸತತ ಕಾನೂನು ಹೋರಾಟದ ಫಲವಾಗಿ ವಿದ್ಯಾರ್ಥಿಗಳ ಪರವಾದ ಆದೇಶ ಬಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!