Mysore
29
overcast clouds

Social Media

ಮಂಗಳವಾರ, 11 ಆಗಸ್ಟ್ 2026
Light
Dark

ಏಕಪಾತ್ರಾಭಿನಯ ಬಿಜೆಪಿಗರಿಗೆ ಮಾತ್ರ ಸಾಧ್ಯ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಏಕಪಾತ್ರಾಭಿನಯದ ಬಿಜೆಪಿಗರು ಚೀನಾ ಅತಿಕ್ರಮಣ ಮಾಡಿದಾಗ ರಕ್ಷಣಾ ತಜ್ಞರಾಗುತ್ತಾರೆ, ಬೆಲೆ ಏರಿಕೆಗೆ ಆರ್ಥಿಕ ತಜ್ಞರಾಗುತ್ತಾರೆ, ಮೋದಿ ವಿದೇಶ ಪ್ರವಾಸಕ್ಕೆ ಹೋದರೆ ವಿದೇಶಾಂಗ ತಜ್ಞರಾಗುತ್ತಾರೆ! ಈ ಏಕಪಾತ್ರಾಭಿನಯ ಬಿಜೆಪಿಗರಿಗೆ ಮಾತ್ರ ಸಾಧ್ಯ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಜಿ ಸಚಿವ ಮಾಧುಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಮಾಜಿ ಸಚಿವರಾದ ಮಾಧುಸ್ವಾಮಿ ಅವರು ಪ್ರಿಯಾಂಕ್ ಖರ್ಗೆ ಅವರನ್ನು ಗುರಿ ಮಾಡಿಕೊಂಡು ಟ್ವಿಟ್ಟರ್ ಮೂಲಕ ಮಾಡಿದ್ದ ಆಪಾದನೆಗಳಿಗೆ ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ಪಕ್ಷದ ಏಕಪಾತ್ರಾಭಿನಯದ ವೇಷಗಳನ್ನು ತೆರೆದಿಟ್ಟಿದ್ದಾರೆ.

ನಾನು ನನ್ನ ಪಕ್ಷದ ವಕ್ತಾರನಾಗಿದ್ದೇನೆ, ಜನರ ಆಶೀರ್ವಾದದಿಂದ ಸಚಿವ ಸ್ಥಾನದ ಜವಾಬ್ದಾರಿ ಹೊತ್ತಿದ್ದೇನೆ, ಸರ್ಕಾರದ ಪರವಾಗಿ, ನಾಡಿನ ಜನರ ಪರವಾಗಿ ಕೆಲಸ ಮಾಡುವುದು ನನ್ನ ಕರ್ತವ್ಯವಾಗಿದೆ ಎಂದಿದ್ದಾರೆ.

ಬಿಜೆಪಿಗರಿಗೆ ಕರ್ತವ್ಯದ ಬಗ್ಗೆ ಅಜ್ಞಾನವಿದ್ದರೆ ನಾನು ಹೊಣೆಗಾರನಲ್ಲ! ಬಿಜೆಪಿಗೆ ಕರ್ತವ್ಯದ ಅರಿವು ಇಲ್ಲದಿದ್ದರಿಂದಲೇ ಹೀನಾಯ ಸೋಲಿಗೆ ಗುರಿಯಾಗಿದ್ದು ಎಂದು ಟೀಕಿಸಿದ್ದಾರೆ.

ಬಿಜೆಪಿ ಆಡಳಿತದ ಇಬ್ಬರು ಮುಖ್ಯಮಂತ್ರಿಗಳ ಅವಧಿಯಲ್ಲಿ ಯಾರು ಶಾಡೋ ಸಿಎಂ ಆಗಿದ್ದರು, ಯಾರು ಸೂಪರ್‌ ಸಿಎಂ ಆಗಿದ್ದರು ಎನ್ನುವುದು ಜಗತ್ತಿಗೆ ತಿಳಿದ ವಿಚಾರ, ಬಿಜೆಪಿಗೆ ತಿಳಿದಿಲ್ಲವೆಂದರೆ ಯತ್ನಾಳರ ಹಾಗೂ ರೇಣುಕಾಚಾರ್ಯರ ಮಾತುಗಳನ್ನು ರಿವೈಂಡ್ ಮಾಡಿ ಕೇಳಿಸಿಕೊಳ್ಳಲಿ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಸೋತು ವಿರೋಧ ಪಕ್ಷದಲ್ಲಿ ಕೂತಿದ್ದರೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುವ ಕನಿಷ್ಠ ಹೊಣೆಗಾರಿಕೆ ಪ್ರದರ್ಶಿಸಲು ಸಾಧ್ಯವಾಗಿಲ್ಲ ಬಿಜೆಪಿಗೆ. ಅಧಿವೇಶನ ಶುರುವಾಗಿ, ರಾಜ್ಯಪಾಲರ ಬಾಷಣವಾಗಿ, ಬಜೆಟ್ ಮಂಡನೆಯಾಗಿ, ಬಜೆಟ್ ಮೇಲಿನ ಚರ್ಚೆಯೂ ಆಯ್ತು, ಆದರೆ ಒಬ್ಬ ವಿರೋಧ ಪಕ್ಷದ ನಾಯಕ ಸಿಗದಿರುವುದು ಬಿಜೆಪಿಯ ರಾಜಕೀಯ ಹಾಗೂ ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದು ವ್ಯಂಗ್ಯವಾಡಿದ್ದಾರೆ.

ಹೈಕಮಾಂಡ್ ನಾಯಕರಿಂದ ತಿರಸ್ಕಾರಕ್ಕೊಳಪಟ್ಟ ಬಿಜೆಪಿ, ವಿಪಕ್ಷ ನಾಯಕನ ಆಯ್ಕೆಯ ವಿಚಾರದಲ್ಲಿ ಬೊಗಸೆಯಷ್ಟಾದರೂ ಗೌರವವನ್ನು ಪಡೆದು ನಂತರ ನನ್ನ ಬಗ್ಗೆ ಮಾತಾಡಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!