Mysore
28
overcast clouds

Social Media

ಭಾನುವಾರ, 14 ಜೂನ್ 2026
Light
Dark

ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ: ಮತ್ತೊಂದು ಟೋಲ್ ಕೇಂದ್ರ ಶೀಘ್ರ ಆರಂಭ!

ಬೆಂಗಳೂರು: ಉದ್ಘಾಟನೆಯಾದಾಗಿನಿಂದ ಒಂದಿಲ್ಲೊಂದು ಸಮಸ್ಯೆ, ವಿವಾದಗಳಲ್ಲಿ ಸಿಲುಕುತ್ತಲೇ ಇರುವ ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇತ್ತೀಚೆಗೆ, ಇದೇ ಟೋಲ್ ಹೆಚ್ಚಳ ಮಾಡಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಈಗ ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ವಸೂಲಿ ಕೇಂದ್ರವನ್ನು ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಸಿದ್ಧತೆಗಳನ್ನು ಆರಂಭಿಸಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಬಳಿಯಿರುವ ಗಣಂಗೂರುನಲ್ಲಿ ಟೋಲ್ ಕೇಂದ್ರ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಪ್ರಾಯಶಃ ಕೆಲವೇ ದಿನಗಳಲ್ಲೇ ಟೋಲ್ ಸಂಗ್ರಹಣೆ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ, ಈ ಬಗ್ಗೆ ಜನರಿಂದ ಅಸಮಾಧಾನ ಹೊರಬೀಳಲಾರಂಭಿಸಿದೆ.

ದರ ಎಷ್ಟು?: ಏಕಮುಖ ಸಂಚಾರದ ವಿವರ ಹೀಗಿದೆ. ಕಾರು, ಜೀಪು, ವ್ಯಾನ್ ಗಳಿಗೆ ತಲಾ 155 ರೂ.ಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ. ಲಘು ವಾಣಿಜ್ಯ ವಾಹನಗಳಿಗೆ ತಲಾ 250 ರೂ.ಗಳ ಶುಲ್ಕ ಪಡೆಯಲಾಗುತ್ತದೆ. ಲಘು ಸರಕು ವಾಹನ (ಮಿನಿ ಬಸ್ ಇತ್ಯಾದಿ) ತಲಾ 250 ರೂ. ವಿಧಿಸಲಾಗುತ್ತದೆ. ಎರಡು ಆ್ಯಕ್ಸೆಲ್ ಇರುವ ಟ್ರಕ್ ಹಾಗೂ ಬಸ್ಸುಗಳಿಗೆ 525 ರೂ., ಮೂರು ಆ್ಯಕ್ಸೆಲ್ ಇರುವ ವಾಣಿಜ್ಯ ವಾಹನಕ್ಕೆ 575 ರೂ., ಬಹು ಆ್ಯಕ್ಸೆಲ್ ವಾಹನ ಅಂದರೆ 4ರಿಂದ 6 ಆ್ಯಕ್ಸೆಲ್ ಇರುವ ವಾಹನಕ್ಕೆ 625 ರೂ.ಗಳ ಶುಲ್ಕ ನಿಗದಿಪಡಿಸಲಾಗಿದೆ.

ಇತ್ತೀಚೆಗಷ್ಟೇ ಪರಿಷ್ಕರಣೆಯಾಗಿದ್ದ ಶುಲ್ಕ; ಮೈಸೂರು – ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಈಗಾಗಲೇ ಎರಡು ಟೋಲ್ ವಸೂಲಿ ಕೇಂದ್ರಗಳಿವೆ. ಬೆಂಗಳೂರಿನಿಂದ ಹೊರಡುವಾಗ ರಾಮನಗರದ ಬಳಿಯ ಕಣಮಿಣಿಕೆ ಬಳಿಯೇ ಶುಲ್ಕ ವಸೂಲಾತಿ ಕೇಂದ್ರವಿದೆ. ಇಲ್ಲಿ ಈ ಮೊದಲು ಕಾರು, ಜೀಪು, ವ್ಯಾನ್ ಗಳಿಗೆ 135 ರೂ. ಇತ್ತು. ಮಿನಿ ಬಸ್ ಗಳಿಗೆ 220 ರೂ. ಇತ್ತು. ಟ್ರಕ್ ಮತ್ತು ಬಸ್ಸುಗಳಿಗೆ 460 ರೂ.ಗಳಿದ್ದವು. ವಾಣಿಜ್ಯ ವಾಹನಗಳಿಗೆ ಏಕಮುಖ ಸಂಚಾರಕ್ಕೆ 500 ರೂ.ಗಳನ್ನು ಚಾರ್ಜ್ ಇತ್ತು.

ಇತ್ತೀಚೆಗಷ್ಟೇ ಈ ಶುಲ್ಕವನ್ನು ಹೆಚ್ಚಿಸಲಾಗಿತ್ತು. ಕಾರು, ಜೀಪು, ವ್ಯಾನುಗಳಿಗೆ 135 ರೂ.ಗಳಿಂದ 165 ರೂ.ಗಳಿಗೆ, ಮಿನಿ ಬಸ್ ಗಳಿಗೆ 220 ರೂ.ಗಳಿಂದ 270 ರೂ.ಗಳನ್ನು, ಟ್ರಕ್ – ಬಸ್ಸುಗಳಿಗೆ 460 ರೂ.ಗಳಿಂದ 565 ರೂ.ಗಳಿಗೆ ಏರಿಕೆಯಾಗಿತ್ತು. ವಾಣಿಜ್ಯ ವಾಹನಗಳು 500 ರೂ.ಗಳಿಂದ 615 ರೂ.ಗಳಿಗೆ ಏರಿಕೆಯಾಗಿತ್ತು.

ಜನರ ಅಸಮಾಧಾನಕ್ಕೆ ಕಾರಣವೇನು?: ಬೆಂಗಳೂರು – ಮೈಸೂರು ಹೆದ್ದಾರಿಯ ಅಪೂರ್ಣ ಕಾಮಗಾರಿಯು, ಹೆದ್ದಾರಿಯ ಕೆಲವಾರು ಸ್ಥಳಗಳು ಅಪಘಾತದ ಹಾಟ್ ಸ್ಪಾಟ್ ಗಳಾಗಿ ಬದಲಾಗುತ್ತಿರುವುದು, ಮತ್ತು ಆ ಬಗ್ಗೆ ಯಾವುದೇ ರೀತಿಯ ನಿವಾರಣೋಪಾಯಗಳನ್ನು ಕಲ್ಪಿಸದೇ ಇರುವುದಕ್ಕೆ ಸಾರ್ವಜನಿಕರು ತೀವ್ರವಾದ ಆಕ್ಷೇಪ ಹೊರಹಾಕುತ್ತಿದ್ದಾರೆ. ಅಲ್ಲದೆ, ಇಡೀ ಹೆದ್ದಾರಿ ನಿರ್ಮಾಣದ ಪ್ಲಾನಿಂಗ್ ಅನ್ನು ಅವೈಜ್ಞಾನಿಕವಾಗಿ ರೂಪಿಸಲಾಗಿದೆ ಎಂಬುದು ಹಲವಾರು ಜನರ ಆರೋಪ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!