Mysore
32
few clouds

Social Media

ಶುಕ್ರವಾರ, 20 ಫೆಬ್ರವರಿ 2026
Light
Dark

ಮಂಡ್ಯ: ಜೂನ್‌ 30 ರಿಂದ ಮೈಶುಗರ್ ಆರಂಭ: 14 ದಿನಗಳಿಗೊಮ್ಮೆ ರೈತರಿಗೆ ಹಣ ಪಾವತಿ

ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ(ಮೈಶುಗರ್‌) 2023-23ನೇ ಸಾಲಿನ ಕಬ್ಬು ಅರೆಯುವಿಕೆ ಕಾರ‍್ಯವನ್ನು ಜೂನ್ 30ರಿಂದ ಆರಂಭಿಸಲಾಗುವುದು. ಕಬ್ಬು ಪೂರೈಸಿದರೆ ರೈತರಿಗೆ ನಿಯಮದಂತೆ 14 ದಿನಗಳಿಗೊಮ್ಮೆ ಹಣ ಪಾವತಿಸಲಾಗುವುದು ಎಂದು ಮೈಶುಗರ್‌ ವ್ಯವಸ್ಥಾಪಕ ನಿರ್ದೇಶಕ ಅಪ್ಪಾ ಸಾಹೇಬ್‌ ಚನ್ನಪ್ಪಗೌಡ ಪಾಟೀಲ್‌ ತಿಳಿಸಿದರು.

‘ಕಬ್ಬು ಅರೆಯಲು ಕಾರ್ಖಾನೆಯಲ್ಲಿ ಎಲ್ಲ ರೀತಿಯಿಂದಲೂ ಸರ್ವಸನ್ನದ್ಧವಾಗಿದೆ. ಯಾವುದೇ ತಾಂತ್ರಿಕ ದೋಷಗಳಿಲ್ಲ. ಎಲ್ಲ ಯಂತ್ರೋಪಕರಣಗಳನ್ನು ದುರಸ್ತಿ, ಓವರ್‌ಆಯಿಲ್‌ ಮಾಡಲಾಗಿದೆ. ಕಬ್ಬು ಕಟಾವು ಕಾರ್ಮಿಕರ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ಕಬ್ಬು ಸಾಗಾಣಿಕೆಗೆ, ಟ್ರ್ಯಾಕ್ಟರ್‌, ಲಾರಿಗಳನ್ನು ಗೊತ್ತುಪಡಿಸಲಾಗಿದೆ,’’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘‘ಕಬ್ಬು ಕಟಾವು ಮಾಡುವವರು, ಸಾಗಣೆದಾರರಿಗೆ ವಾರಕ್ಕೊಮ್ಮೆ ಹಣ ಪಾವತಿಸಲಾಗುವುದು. ಕಳೆದ ವರ್ಷ 12 ತಾಸುಗಳ ಕಾಲ ಕಾರ್ಖಾನೆಯನ್ನು ನಿರಂತರ ಚಾಲನೆ ಮಾಡಿ 1800 ಟನ್‌ ಕಬ್ಬು ಅರೆದು ಪರಿಶೀಲನೆ ಮಾಡಲಾಗಿದೆ. ಹೀಗಾಗಿ ಈ ವರ್ಷ ಕಾರ್ಖಾನೆಯು ನಿತ್ಯ 5000 ಟನ್‌ ಕಬ್ಬು ಅರೆಯುವ ಸಾಮರ್ಥ್ಯವಿದ್ದರೂ ಪ್ರತಿದಿನ 3000 ರಿಂದ 3500 ಟನ್‌ ಕಬ್ಬು ಅರೆಯಲು ಗುರಿ ಹೊಂದಲಾಗಿದೆ,’’ ಎಂದರು.

191 ಕೋಟಿ ರೂ. ಹೊಣೆಗಾರಿಕೆ
‘‘ಸೆಸ್ಕ್‌ಗೆ ಪಾವತಿಸಬೇಕಾದ 40 ಕೋಟಿ ರೂ. ವಿದ್ಯುತ್‌ ಬಾಕಿ ಕೆಎಸ್‌ಐಡಿಸಿ ಬಾಕಿ 90 ಕೋಟಿ ರೂ., ಆದಾಯ ತೆರಿಗೆ 37 ಕೋಟಿ ರೂ. ಸೇರಿದಂತೆ ಒಟ್ಟು 191 ಕೋಟಿ ರೂ.ಗಳನ್ನು ಸರಕಾರದ ನಾನಾ ಸಂಸ್ಥೆಗಳಿಗೆ ಮೈಶುಗರ್‌ ಪಾವತಿಸಬೇಕಿದೆ. ಮೈಶುಗರ್‌ನಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್‌ ಮಾರಾಟದಿಂದ ಸೆಸ್ಕ್‌ ಬಾಕಿಯನ್ನು ಕಡಿಮೆ ಮಾಡಲು ಆಲೋಚಿಸಲಾಗಿದೆ,’’ ಎಂದು ಹೇಳಿದರು.

ಕಳೆದ ವರ್ಷ ಜಿಲ್ಲೆಯ ಬೇರೆ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆ ಆರಂಭಿಸಿದಾಗ ನಾವು ಮೈಶುಗರ್‌ ದುರಸ್ತಿ ಕಾರ‍್ಯ ಕೈಗೊಂಡಿದ್ದೆವು, ಜತೆಗೆ, ಯಂತ್ರೋಪಕರಣಗಳ ಸಮಸ್ಯೆ ಹೆಚ್ಚಾಗಿತ್ತು. ಅದೆಲ್ಲವನ್ನೂ ಪರಿಹರಿಸಿಕೊಳ್ಳುವಲ್ಲಿ ವಿಳಂಬವಾಯಿತು. ಹೀಗಾಗಿ ಹಿಂದಿನ ವರ್ಷ 1 ಲಕ್ಷ ಟನ್‌ ಕಬ್ಬನ್ನಷ್ಟೇ ಅರೆಯಲು ಸಾಧ್ಯವಾಯಿತು. ಆದರೆ, ಈ ವರ್ಷ 5.50 ಲಕ್ಷ ಟನ್‌ ಕಬ್ಬನ್ನು ರೈತರಿಂದ ಒಪ್ಪಿಗೆ ಮಾಡಿಕೊಳ್ಳಲಾಗಿದ್ದು, ಕನಿಷ್ಟ 4 ಲಕ್ಷ ಟನ್‌ ಕಬ್ಬು ಅರೆಯುವ ಗುರಿ ಹೊಂದಲಾಗಿದೆ ಎಂದರು.

ಪ್ರಸ್ತುತ ಪ್ರಮುಖ ಯಂತ್ರೋಪಕರಣಗಳನ್ನು ಮೂಲ ತಯಾರಿಕಾ ಕಂಪನಿಗಳಿಗೆ(ಪೂನಾ, ಕೊಲ್ಲಾಪುರ ಇತರ) ಕಳುಹಿಸಿ ದುರಸ್ತಿಮಾಡಿಸಿ, ಪರೀಕ್ಷಿಸಲಾಗಿದೆ. ಶೇ.90ರಷ್ಟು ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ. ಏನೇ ಸಮಸ್ಯೆ ಎದುರಾದರೂ ಅದನ್ನು ಸ್ಥಳದಲ್ಲೇ ಪರಿಹರಿಸಲು ನಮ್ಮಲ್ಲಿ ತಾಂತ್ರಿಕ ತಂಡ ಸಿದ್ಧವಾಗಿದೆ. ಈಗಾಗಲೇ ಕಳೆದೆರಡು ದಿನಗಳಿಂದ ಟ್ರಯಲ್‌ ರನ್‌ ಕೂಡ ನಡೆಯುತ್ತಿದ್ದು, ಜೂನ್ 30 ರಿಂದ ಅಧಿಕೃತವಾಗಿ ಕಬ್ಬು ಅರೆಯುವಿಕೆ ಆರಂಭಿಸಲಾಗುವುದು.

ಸಹ ವಿದ್ಯುತ್‌ ಘಟಕದ ಸಾಮರ್ಥ್ಯ ಇಳಿಕೆ
ಮೈಶುಗರ್‌ನಲ್ಲಿನ ಸಹ ವಿದ್ಯುತ್‌ ಘಟಕವು 30 ಮೆಗಾವ್ಯಾಟ್‌ ಸಾಮರ್ಥ್ಯದ್ದಾಗಿದೆ. ಆದರೆ, ಅದರ ಸಾಮರ್ಥ್ಯಕ್ಕನುಗುಣವಾಗಿ ಕಬ್ಬು ಅರೆಯುವಿಕೆ ಸಾಧ್ಯವಿಲ್ಲ. ಕಬ್ಬಿನ ಕೊರತೆಯಾಗಲಿದೆ. ಹೀಗಾಗಿ ಸಹ ವಿದ್ಯುತ್‌ ಘಟಕದ ಟರ್ಬೈನ್‌ನ್ನು ಬ್ಯಾಕ್‌ ಪ್ರೆಷರ್‌ ಆಗಿ ಪರಿವರ್ತಿಸಿ, 20 ರಿಂದ 24 ಮೆಗಾವ್ಯಾಟ್‌ಗೆ ಇಳಿಸಲಾಗಿದೆ. ಇದರಿಂದ ಕಡಿಮೆ ಪ್ರಮಾಣದಲ್ಲಿ ಕಬ್ಬು ಪೂರೈಕೆದರೂ ಸಹ ವಿದ್ಯುತ್‌ ಘಟಕವನ್ನು ಚಾಲನೆ ಮಾಡಬಹುದು.

ನಿರೀಕ್ಷೆಯಂತೆ ನಿತ್ಯ ಮೂರ್ನಾಲ್ಕು ಸಾವಿರ ಟನ್‌ ಕಬ್ಬನ್ನು ಕ್ರಷಿಂಗ್‌ ಮಾಡಿದರೆ, ಕಾರ್ಖಾನೆಗೆ ಬೇಕಾದ 6-7 ಮೆಗಾವ್ಯಾಟ್‌ ವಿದ್ಯುತ್‌ನ್ನು ಬಳಸಿಕೊಂಡು, ಉಳಿದಿದ್ದನ್ನು ಸೆಸ್ಕ್‌ಗೆ ಪೂರೈಸಬಹುದು. ಆಗ ಸೆಸ್ಕ್‌ನಿಂದಲೇ ನಮಗೆ ವಿದ್ಯುತ್‌ ಮಾರಾಟ ಮೊತ್ತ ಪಾವತಿಯಾಗುತ್ತದೆ. ಆಗ ಸೆಸ್ಕ್‌ ವಿದ್ಯುತ್‌ ಬಾಕಿ ಮೇಲಿನ ಹೊರೆಯೂ ಕಡಿಮೆಯಾಗಲಿದೆ ಎಂದು ಅಪ್ಪಾ ಸಾಹೇಬ್‌ ಚನ್ನಪ್ಪಗೌಡ ಪಾಟೀಲ್‌ ವಿವರಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!