ಕೋಲಾರ: ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರದಲ್ಲೇ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಏ.9ರಂದು ನಡೆಯಲಿರುವ ಜೈ ಭಾರತ್ ಸಮಾವೇಶ ಆಯೋಜನೆ ಸಂಬಂಧ ಶನಿವಾರ ನಗರ ಹೊರವಲಯದ ನಂದಿನಿ ಪ್ಯಾಲೇಸ್ ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರು ಗದ್ದಲ ಎಬ್ಬಿಸಿದರು. ಕೆಲವರು ಕೈಮುಗಿದು ಬೇಡಿಕೊಂಡರೆ ಇನ್ನು ಕೆಲವರು ಕಾಲಿಗೆ ಬಿದ್ದರು.
ಎಲ್ಲರೂ ವೇದಿಕೆ ಮುಂಭಾಗಕ್ಕೆ ಬಂದು ‘ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ’ ಎಂದು ಘೋಷಣೆ ಕೂಗಿದರು. ಗಲಾಟೆ ಕಡಿಮೆಯಾಗದ ಕಾರಣ ವೇದಿಕೆಯಿಂದ ಸಿದ್ದರಾಮಯ್ಯ ಮುಂದೆ ಬಂದು ಸುಮ್ಮನಿರುವಂತೆ ಗದರಿದರು.





