ಬೆಂಗಳೂರು: ಕಳೆದ ಮಾರ್ಚ್ 1ರಿಂದ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ( ಏಪ್ರಿಲ್ 10 ) ಪ್ರಕಟಗೊಂಡಿದೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ಶಿಕ್ಷಣ ಇಲಾಖೆ ಫಲಿತಾಂಶವನ್ನು ಪ್ರಕಟಗೊಳಿಸಿದೆ. ಈ ಬಾರಿ 5,52,690 ( ಶೇ. 81.15 ) ಶೇ. 81.15 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 80.94% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ವಿಜ್ಞಾನ ವಿಭಾಗದಲ್ಲಿ 89.96% ವಿದ್ಯಾರ್ಥಿಗಳು ಹಾಗೂ ಕಲಾ ವಿಭಾಗದಲ್ಲಿ 68.36% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ದಕ್ಷಿಣ ಕನ್ನಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಉಡುಪಿ ಜಿಲ್ಲೆ ಎರಡನೇ ಸ್ಥಾನ ಪಡೆದುಕೊಂಡಿದೆ, ಮೂರನೇ ಸ್ಥಾನದಲ್ಲಿ ವಿಜಯಪುರವಿದ್ದು, ನಾಲ್ಕನೇ ಸ್ಥಾನ ಉತ್ತರ ಕನ್ನಡ ಹಾಗೂ ಐದನೇ ಸ್ಥಾನ ಕೊಡಗು ಜಿಲ್ಲೆಯದ್ದಾಗಿದೆ. ಗದಗ ಕೊನೆಯ ಸ್ಥಾನ ಪಡೆದುಕೊಂಡಿದೆ.
ಈ ಬಾರಿಯ ಪರೀಕ್ಷೆಯಲ್ಲಿ 3.3 ಲಕ್ಷ ವಿದ್ಯಾರ್ಥಿಗಳು ಹಾಗೂ 3.6 ಲಕ್ಷ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಬಾಲಕಿಯರು ( 84.87% ) ಮೇಲುಗೈ ಸಾಧಿಸಿದ್ದರೆ, 76.98% ಬಾಲಕರು ತೇರ್ಗಡೆಯಾಗಿದ್ದಾರೆ. 91 ಸರ್ಕಾರಿ ಕಾಲೇಜುಗಳು ಸೇರಿದಂತೆ ಒಟ್ಟು 463 ಕಾಲೇಜುಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದ್ದು, 35 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ಯಾರು ಟಾಪರ್ಸ್?
ವಿಜ್ಞಾನ ವಿಭಾಗದಲ್ಲಿ 600ಕ್ಕೆ 598 ಅಂಕಗಳನ್ನು ಪಡೆದುಕೊಂಡಿರುವ ಹುಬ್ಬಳ್ಳಿಯ ವಿದ್ಯಾಲಕ್ಷ್ಮಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಕಲಾ ವಿಭಾಗದಲ್ಲಿ 600ಕ್ಕೆ 596 ಅಂಕಗಳನ್ನು ಪಡೆದಿರುವ ಮೇಧಾ ಹಾಗೂ ವಿಜಯಪುರದ ವೇದಾಂತ್ ಟಾಪರ್ ಎನಿಸಿಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 600ಕ್ಕೆ 597 ಅಂಕಗಳನ್ನು ಪಡೆದುಕೊಂಡಿರುವ ತುಮಕೂರಿನ ಜ್ಞಾನವಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.