Mysore
17
few clouds

Social Media

ಭಾನುವಾರ, 15 ಫೆಬ್ರವರಿ 2026
Light
Dark

ಹೊರಗಿನ ಹುಡುಕಾಟಕ್ಕೆ ವಿಜ್ಞಾನವಾದರೆ ಅಂತರಂಗಕ್ಕೆ ಆಧ್ಯಾತ್ಮ : ಇಸ್ರೋ ಅಧ್ಯಕ್ಷ ಸೋಮನಾಥ್‌

ತಿರುವನಂತಪುರಂ : ವಿಕ್ರಂ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್‌ ಎಂದು ಪ್ರಧಾನಿ ಮೋದಿ ನಾಮಕರಣ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಇಸ್ರೋ (ISRO) ಅಧ್ಯಕ್ಷ ಸೋಮನಾಥ್‌ ಹೇಳಿದ್ದಾರೆ.

ಚಂದ್ರಯಾನ-3 ಯಶಸ್ವಿಯಾದ ಬಳಿಕ ಕೇರಳದ ತಿರುವನಂತಪುರಂನಲ್ಲಿರುವ ಪೌರ್ಣಮಿಕಾವು-ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಸೋಮನಾಥ್‌ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ವಿಕ್ರಂ ಲ್ಯಾಂಡರ್‌ ಚಂದ್ರನನ್ನು ಸ್ಪರ್ಶಿಸಿದ ಜಾಗಕ್ಕೆ ಶಿವಶಕ್ತಿ ಎಂದು ನಾಮಕರಣ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆ ಸ್ಥಳಕ್ಕೆ ಹೆಸರಿಡುವ ಹಕ್ಕು ರಾಷ್ಟ್ರಕ್ಕೆ ಇದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ನಮಗೆಲ್ಲರಿಗೂ ಸರಿಹೊಂದುವ ರೀತಿಯಲ್ಲಿ ಶಿವಶಕ್ತಿ ಅರ್ಥವನ್ನು ವಿವರಿಸಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ. ಚಂದ್ರಯಾನ–2 ಪತನವಾಗಿದ್ದ ಸ್ಥಳವನ್ನು ತಿರಂಗಾ ಪಾಯಿಂಟ್‌ ಎಂದು ಹೆಸರನ್ನು ಇರಿಸಿದ್ದಾರೆ. ಎರಡೂ ಭಾರತೀಯ ಧ್ವನಿಯ ಹೆಸರುಗಳಾಗಿವೆ. ನಾವು ಏನು ಮಾಡುತ್ತಿದ್ದೇವೆ ಎಂಬುದರ ಮಹತ್ವ ನಮಗೆ ತಿಳಿದಿರಬೇಕು ಎಂದು ಹೇಳಿದರು.

ನಾನೊಬ್ಬ ಅನ್ವೇಷಕ. ನಾನು ಚಂದ್ರನನ್ನು ಅನ್ವೇಷಿಸುತ್ತೇನೆ. ಆಂತರಂಗದ ಜಾಗವನ್ನು ಅನ್ವೇಷಿಸುತ್ತೇನೆ. ಹೊರಗಿನ ಹುಡುಕಾಟಕ್ಕೆ ವಿಜ್ಞಾನ. ಅಂತರಂಗದ ಹುಡುಕಾಟಕ್ಕೆ ಆಧ್ಯಾತ್ಮ. ನಾನು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ ಮತ್ತು ಅನೇಕ ಗ್ರಂಥಗಳನ್ನು ಓದುತ್ತೇನೆ. ಈ ಬ್ರಹ್ಮಾಂಡದಲ್ಲಿ ನಮ್ಮ ಅಸ್ತಿತ್ವ ಮತ್ತು ನಮ್ಮ ಪ್ರಯಾಣದ ಅರ್ಥವನ್ನು ಕಂಡುಹಿಡಿಯಲು ನಾನು ಪ್ರಯತ್ನಿಸುತ್ತೇನೆ. ಇದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಹೊರಗಡೆ ವಿಜ್ಞಾನ ಮಾಡಿದರೆ ಅಂತರಂಗಕ್ಕೆ ದೇವಸ್ಥಾನಗಳಿಗೆ ಬರುತ್ತೇನೆ ಎಂದು ಹೇಳಿದರು.

ಮಿಷನ್‌ನ ಪ್ರಸ್ತುತ ಸ್ಥಿತಿಯ ಬಗ್ಗೆ ಕೇಳಿದ್ದಕ್ಕೆ, ಎಲ್ಲವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಚಂದ್ರಯಾನ 3, ಲ್ಯಾಂಡರ್, ರೋವರ್ ತುಂಬಾ ಆರೋಗ್ಯಕರವಾಗಿದ್ದು, ಬೋರ್ಡ್‌ನಲ್ಲಿರುವ ಎಲ್ಲಾ ಐದು ಉಪಕರಣಗಳನ್ನು ಸ್ವಿಚ್ ಆನ್ ಮಾಡಲಾಗಿದೆ. ಇವುಗಳು ಸುಂದರವಾದ ಡೇಟಾವನ್ನು ನೀಡುತ್ತಿದೆ. ಇನ್ನೂ ಹತ್ತು ದಿನಗಳು ಉಳಿದಿವೆ. ವಿವಿಧ ವಿಧಾನಗಳ ಸಂಪೂರ್ಣ ಸಾಮರ್ಥ್ಯದೊಂದಿಗೆ ನಾವು ಎಲ್ಲಾ ಪ್ರಯೋಗಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!