ಇಂದು ( ಡಿಸೆಂಬರ್ 24 ) ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ಹನುಮ ಸಂಕೀರ್ತನಾ ಯಾತ್ರೆಗೆ ಕರೆಕೊಟ್ಟಿದ್ದು, ಈ ಯಾತ್ರೆಯಲ್ಲಿ ಹಲವಾರು ಜನರು ಮಾಲೆ ಧರಿಸಿ ಪಾಲ್ಗೊಂಡಿದ್ದಾರೆ. ಈ ಸಂಕೀರ್ತನಾ ಯಾತ್ರೆ ನಿಮಿಷಾಂಬಾ ದೇವಸ್ಥಾನದ ಬಳಿ ಇರುವ ಆಂಜನೇಯ ದೇವಾಲಯದಿಂದ ಆರಂಭಗೊಳ್ಳಲಿದ್ದು ಪುರಸಭೆ ವೃತ್ತದ ಮೂಲಕ ಶ್ರೀ ರಂಗನಾಥ ಸ್ವಾಮಿ ದೇಗುಲದ ಬಳಿ ಅಂತ್ಯಗೊಳ್ಳಲಿದೆ.
ಇನ್ನು ಈ ಯಾತ್ರೆ ಘೋಷಣೆಯಾದಾಗಲೇ ಕೆಲ ಮುಸ್ಲಿಂ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಯಾತ್ರೆಯುದ್ದಕ್ಕೂ ಯಾವುದೇ ಗಲಭೆಗಳು ನಡೆಯಬಾರದು ಎಂಬ ಕಾರಣಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆದರೂ ಸಹ ಜಾಮಿಯಾ ಮಸೀದಿ ಬಳಿ ಮಾಲಾಧಾರಿಗಳು ತಲುಪಿದಾಗ ಪೊಲೀಸರು ಹಾಗೂ ಮಾಲಾಧಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಜಾಮಿಯಾ ಮಸೀದಿ ಬಳಿ ನಿಲ್ಲಲು ಬಿಡದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಳಿಬಂದಿದ್ದು, ಜಾಮಿಯಾ ಮಸೀದಿ ಮುಂದೆ ಮಾಲಾಧಾರಿಗಳು ಜೈ ಹನುಮಾನ್ ಘೋಷಣೆಯನ್ನು ಕೂಗಿ ಮುಂದೆ ಸಾಗಿದ್ದಾರೆ.





