Mysore
25
overcast clouds
Light
Dark

ಡಿ.ಕೆ ಶಿವಕುಮಾರ್ ಅಯೋಗ್ಯ ಡಿಸಿಎಂ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಡಿಕೆಶಿ ಓರ್ವ ನೀರಿನ ಕಳ್ಳ, ನಮ್ಮ ರಾಜ್ಯದ ರೈತರಿಗೆ ದ್ರೋಹ ಮಾಡಿ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ, ನಮ್ಮ ರಾಜ್ಯದ ರೈತರಿಗೆ ಮೋಸ ಮಾಡಿದ್ದಾರೆ, ಡಿಕೆಶಿ ಒಬ್ಬ ಅಯೋಗ್ಯ ಉಪಮುಖ್ಯಮಂತ್ರಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

ಮಾಧ್ಯಮದವರ ಜೊತೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಂದಿನಿಂದ ಇಂದಿನವರೆಗೆ ಗುಂಪುಗಾರಿಕೆ, ಅವ್ಯವಹಾರ, ವರ್ಗಾವಣೆ ದಂಧೆಗಳೇ ಕಾಂಗ್ರೆಸ್ ಪಕ್ಷದ ನೂರು ದಿನಗಳ ಸಾಧನೆಯಾಗಿದ್ದು ಬೇರೆ ಅಭಿವೃದ್ಧಿ ಕಾರ್ಯಗಳು ಯಾವುದೂ ನಡೆಯಲಿಲ್ಲ. ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಅದರಾಚೆಗೆ ಏನು ನಡೆದಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನ ಚೇಲಾಗಳು ಡಿಕೆಶಿಗೆ ಅವಮಾನ ಮಾಡಲೆಂದೇ ಮೂರು ಡಿಸಿಎಂಗಳ ಬೇಡಿಕೆ ಇಟ್ಡಿದ್ದಾರೆ, ಮೂರು ಡಿಸಿಎಂಗೆ ಹೋಗುತ್ತದೋ, ಐದು ಡಿಸಿಎಂ ಗೆ ಹೋಗುತ್ತದೋ ಗೊತ್ತಿಲ್ಲ, ಕಾಂಗ್ರೆಸ್ ನ ಗುಂಪುಗಾರಿಕೆಯೇ ಅವರ 100 ದಿನದ ಸಾಧನೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯವರೆಗೆ ಈ ಸರ್ಕಾರ ಇರುತ್ತದೋ ಇಲ್ಲವೋ ಗೊತ್ತಿಲ್ಲ, ಗುಂಪುಗಾರಿಕೆ, ಅವ್ಯವಹಾರ, ವರ್ಗಾವಣೆ ದಂಧೆ ನಡೆಯುತ್ತಿದೆ ನಮ್ಮ ಸರಕಾರ ಇದ್ದಾಗ 40% ಸರಕಾರ ಅಂತಿದ್ದರು ಆದರೆ ಯಾವುದೇ ಒಬ್ಬ ಒಂದೇ ಒಂದು ಸಾಕ್ಷಿ‌ ಕೊಡಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ ಭ್ರಷ್ಟಾಚಾರ ನಡೆಯುತ್ತಿದೆ, ಒಬ್ಬೊಬ್ಬ ಅಧಿಕಾರಿಯಿಂದಲೂ‌ ಲಂಚ ಪಡೆಯುತ್ತಿದ್ದಾರೆ ಇದನ್ನು ಅವರ ಪಕ್ಷದ ಶಾಸಕರೇ ಆರೋಪ ಮಾಡುತ್ತಿದ್ದಾರೆ. 40% ಕ್ಕಿಂತ ಹೆಚ್ಚಿನ ಲಂಚವನ್ನು ಸಿದ್ದರಾಮಯ್ಯ, ಅವರ ಮಗ ಯತೀಂದ್ರ ಪಡೆಯುತ್ತಿದ್ದಾರೆ. ಈ ಬಗ್ಗೆ ಬೇಕಾದರೆ ನಾನು‌ ಸಾಕ್ಷಿ ಒದಗಿಸುತ್ತೇನೆ, ನಿವೃತ್ತ ನ್ಯಾಯಾಧೀಶರು ಅಥವಾ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಎಂದು ಸವಾಲ್ ಹಾಕಿದರು.

ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಆಗುತ್ತಿಲ್ಲ, ಒಂದು ಬುಟ್ಟಿ ಮಣ್ಣು ರಸ್ತೆಗೆ ಬಿದ್ದಿಲ್ಲ, ಪ್ರತಿ ಕ್ಷೇತ್ರಕ್ಕೆ 2 ಕೋಟಿ ರೂ ಕೊಡ್ತೀವಿ ಅಂದಿದ್ರು 50 ಲಕ್ಷ ರೂ ಬಿಡುಗಡೆ ಮಾಡುವುದಾಗಿ ಆದೇಶ ಕೊಟ್ಟಿದ್ದಾರೆ. ಅಭಿವೃದ್ಧಿ ಕಾರ್ಯ ನಡೆಯದಿದ್ದರೆ ಹೋರಾಟ ಅನಿವಾರ್ಯ ಎಂದು ಹೇಳಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ