Mysore
20
overcast clouds
Light
Dark

ಸಂವಿಧಾನ ಪಾಲನೆ ಮಾಡದಿದ್ದರೆ ದೇಶದಲ್ಲಿ ಸರ್ವಾಧಿಕಾರತ್ವದ ಹಿಟ್ಲರಿಜಂ ಜಾರಿಯಾಗಲಿದೆ: ಸಿಎಂ

ಬೆಂಗಳೂರು:  ಸಂವಿಧಾನ ಪಾಲನೆ ಮಾಡದೇ ಇದ್ದರೆ ದೇಶದಲ್ಲಿ ಸರ್ವಾಧಿಕಾರತ್ವದ ಹಿಟ್ಲರಿಜಂ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ನೆಲಮಂಗಲದ ಕ್ಷೇಮದಾಮದಲ್ಲಿ ನೂತನ ಶಾಸಕರಿಗಾಗಿ ಆಯೋಜಿಸಲಾಗಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಹಿಟ್ಲರ್ 2 ಕೋಟಿ ಜನರನ್ನು ಕೊಂದು ಹಾಕಿದ. ತಾನು ಹೇಳಿದ್ದೇ ನ್ಯಾಯ ಎಂದು ನಡೆದುಕೊಂಡ. ತನ್ನ ವಿರುದ್ಧವಾಗಿರುವ ಯಹೂದಿ ಸಮುದಾಯದ 58 ಲಕ್ಷ ಜನರನ್ನು ಕೊಂದರೆ, ಬಾಕಿ ಉಳಿದ ಒಂದೂವರೆ ಕೋಟಿ ಜನ ತಮ್ಮದೇ ದೇಶದ ಜರ್ಮನಿಯರಾಗಿದ್ದರು ಎಂದು ಹೇಳಿದರು.

ಯಾರು ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರು ಉತ್ತಮ ಶಾಸಕರಾಗಲು, ಸಂಸದರಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲು ಸಂವಿಧಾನವನ್ನು ಓದಿ ಅದರ ಮೂಲಭೂತ ತತ್ವ ಮತ್ತು ಉದ್ದೇಶಗಳನ್ನು ಅರಿತುಕೊಳ್ಳಿ. ಸದನದ ನಿಯಮಾವಳಿಗಳನ್ನು ನಾವೇ ಮಾಡಿದ್ದೇವೆ. ಅದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡರೆ ಜನರ ಸಮಸ್ಯೆಗಳನ್ನು ನಿಯಮಬದ್ದವಾಗಿ ಸದನದ ಮುಂದೆ ಮಂಡಿಸಬಹುದು. ಸಂವಿಧಾನಕ್ಕೆ ವಿರುದ್ಧವಾದ ಕಾನೂನು-ಕಾಯ್ದೆಗಳನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನದ ಓದು ಅತ್ಯಗತ್ಯ ಎಂದರು.

ಪ್ರತಿಯೊಬ್ಬರು ಸಂವಿಧಾನವನ್ನು ಓದಿಕೊಳ್ಳಬೇಕು. ಅದನ್ನು ಪಾಲನೆ ಮಾಡಬೇಕು. ಅದರಲ್ಲೂ ಶಾಸಕರು ಸಂವಿಧಾನ ಪಾಲನೆಗೆ ಆದ್ಯತೆ ನೀಡಲೇಬೇಕು. ಸಂವಿಧಾನ ವಿರೋಧಿ ಮತ್ತು ಜನರಿಗೆ ಪೂರಕವಲ್ಲದ ಕಾನೂನುಗಳನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡುವುದು ಸಾಮಾನ್ಯ.ವಿಧಾನಮಂಡಲದ ಚರ್ಚೆಯಲ್ಲಿ ಭಾಗವಹಿಸುವಾಗ ಬೀದಿಯಲ್ಲಿ ಮಾತನಾಡಿದಂತೆ ನಡೆದುಕೊಳ್ಳಬಾರದು. ನಿಖರವಾದ ಅಂಕಿ ಅಂಶ ಮತ್ತು ಜನರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಚರ್ಚೆ ಮಾಡಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಚರ್ಚೆಯ ಗುಣಮಟ್ಟ ಕಡಿಮೆಯಾಗಿದೆ. ಕಷ್ಟಪಟ್ಟು ಶಾಸಕರಾಗಿ ಆಯ್ಕೆಯಾಗುತ್ತಾರೆ. ವಿಧಾನಸೌಧದ ಮೆಟ್ಟಿಲು ತುಳಿಯುತ್ತಿದ್ದಂತೆ ಸಭೆಯ ಅವೇಶನಕ್ಕೆ ಬರದೆ ಹೊರಗುಳಿಯುತ್ತಾರೆ. ಇದು ಸರಿಯಲ್ಲ. ಕಲಾಪ ನಡೆಯುವಾಗ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಮಂತ್ರಿಗಳ ಭೇಟಿ ಎಂದು ನೆಪ ಹೇಳಬಾರದು.

ಎಲ್ಲವನ್ನೂ ಓದಿನಿಂದಲೇ ಅರಿತುಕೊಳ್ಳಲು ಸಾಧ್ಯವಿಲ್ಲ. ಕೆಲವೊಂದನ್ನು ಕೇಳಿ ತಿಳಿದುಕೊಳ್ಳಬೇಕಾಗುತ್ತದೆ. 1994ರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ನನ್ನನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದರು. ನಾನು ಅರ್ಥಶಾಸ್ತ್ರ ಓದಿಲ್ಲ. ಬೇರೆ ಖಾತೆ ಕೊಡಿ ಎಂದು ಕೇಳಿದ್ದೆ. ನಂಬಿಕಸ್ಥರು ಬೇಕು ಎಂದು ನನಗೆ ಜವಾಬ್ದಾರಿ ನೀಡಿದರು.

ಆ ವೇಳೆ ವ್ಯಾಪಕ ಟೀಕೆಗಳು ಬಂದವು. 100 ಕುರಿ ಲೆಕ್ಕ ಹಾಕಲು ಬರದವನು ಹಣಕಾಸು ನಿರ್ವಹಣೆ ಮಾಡಲು ಸಾಧ್ಯವೇ ಎಂದು ಲೇವಡಿ ಮಾಡಲಾಯಿತು. ನನಗೆ ಬಜೆಟ್, ವಿತ್ತಿಯ ಕೊರತೆ, ಖರ್ಚು ವೆಚ್ಚಗಳು ಯಾವ ಮಾಹಿತಿಯೂ ಇರಲಿಲ್ಲ. ಆರ್ಥಿಕ ತಜ್ಞ ರ ಜೊತೆ ಚರ್ಚಿಸಿ 1995ರಲ್ಲಿ ಬಜೆಟ್ ಮಂಡಿಸಿದಾಗ ಹಿಂದು ಪತ್ರಿಕೆ ಮ್ಯಾಜಿಕ್ ಬಜೆಟ್ ಎಂದು ಸಂಪಾದಕೀಯ ಬರೆದು ಮೆಚ್ಚುಗೆ ವ್ಯಕ್ತಪಡಿಸಿತ್ತು ಎಂದರು.

ಪ್ರಸ್ತುತ ದಿನಗಳಲ್ಲಿ ಚುನಾವಣೆ ನಡೆಸುವುದು ಕಷ್ಟ. ಹಣ ಬೇಕೇ ಬೇಕು. ಆದರೆ ಹಣದ ಬಲದಿಂದಲೇ ಗೆಲ್ಲುತ್ತೇವೆ ಎಂಬ ನಂಬಿಕೆ ಸಾಧುವಲ್ಲ. ಜನಸಾಮಾನ್ಯರ ಜೊತೆ ಬೆರೆಯದವರು ಜನರ ಬೆವರನ್ನು ಕಂಡು ಅಸಹ್ಯ ಪಡುವವರು ಮತ್ತೆ ಆಯ್ಕೆಯಾಗುವುದು ಕಷ್ಟಸಾಧ್ಯ. ಪ್ರಸಕ್ತ ವಿಧಾನಸಭೆಯಲ್ಲಿ 8 ಬಾರಿ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದ ಜನಾರ್ಧನರೆಡ್ಡಿ, ಅಲ್ಲಮ ಪ್ರಭುಪಾಟೀಲ ಸೇರಿ 70 ಮಂದಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ ಎಂದು ಹೇಳಿದರು.

ಚುನಾವಣೆ ಮುಗಿದ ಮೇಲೆ ಪಕ್ಷ ಬೇಧ ಮರೆತು ಕೆಲಸ ಮಾಡಬೇಕು. ಮತ ಹಾಕಿದವರು, ಹಾಕದಿದ್ದವರಿಗೂ ನೀವು ಶಾಸಕರಾಗಿರುತ್ತೀರಿ. ನಾನು ಕಾಂಗ್ರೆಸಿಗರಿಗೆ ಮಾತ್ರ ಮುಖ್ಯಮಂತ್ರಿಯಲ್ಲ. ಎಲ್ಲರಿಗೂ ಮುಖ್ಯಮಂತ್ರಿ. ಈ ಮನೋಭಾವದಿಂದಲೇ ಕೆಲಸ ಮಾಡಬೇಕು. ಶಾಸಕರು ಬಜೆಟ್ ವಿಧಾನಮಂಡಲದ ನಿಯಮಾವಳಿಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಸವಣ್ಣನವರ ಬಜೆಟ್: ಶಾಸಕರು ಸಂಸದರು ಬಜೆಟ್ ಅಂದರೆ ಏನೆಂದು ಅರ್ಥ ಮಾಡಿಕೊಳ್ಳಬೇಕು. 12ನೇ ಶತಮಾನದಲ್ಲಿ ಕಾಯಕಯೋಗಿ ಬಸವಣ್ಣನವರು ಬಜೆಟ್ ಬಗ್ಗೆ ಹೇಳಿದ್ದಾರೆ. ಕಾಯಕ ಮತ್ತು ದಾಸೋಹ ಬಜೆಟ್ ನ ಪ್ರಮುಖ ಸಂಗತಿಗಳು. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ಹಂಚಿಕೆ. ಬಜೆಟ್ ಅಂದರೆ ಇಷ್ಟೆ, ಎಲ್ಲಿಂದ ಉತ್ಪಾದನೆ ಬರುತ್ತದೆ ಅದನ್ನು ಸಮಾಜದ ಯಾರಿಗೆ ಹಂಚುತ್ತೇವೆ ಎನ್ನುವುದೇ ಬಜೆಟ್ ನ ಮೌಲ್ಯ ಎಂದು ವಿವರಿಸಿದರು.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್, ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ, ವಸತಿ ಸಚಿವರಾದ ಜಮೀರ್ ಅಹಮದ್ ಖಾನ್, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಉಪಸ್ಥಿತರಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ