Mysore
29
broken clouds

Social Media

ಶನಿವಾರ, 16 ಮೇ 2026
Light
Dark

ಅನ್ನ ಭಾಗ್ಯ ಯೋಜನೆ: ಜು.1ರ ಬದಲು ಆಗಸ್ಟ್ 1ರಿಂದ ಜಾರಿ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಹಾಗೂ ಬಹುತೇಕ ಜನಸಾಮಾನ್ಯರು ಕಾತುರದಿಂದ ನಿರೀಕ್ಷಿಸುತ್ತಿರುವ ಅನ್ನಭಾಗ್ಯ ಯೋಜನೆಯು ಈ ಮೊದಲು ಪ್ರಕಟಿಸಿದ್ದಂತೆ ಜು. 1ರ ಬದಲಿಗೆ ಆ. 1ರಿಂದ ಆರಂಭವಾಗಲಿದೆ ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರವು ಹಿಂದೆ ಅನ್ನಭಾಗ್ಯ ಯೋಜನೆಯು ಜು. 1ರಿಂದ ಜಾರಿಗೊಳಿಸುವುದಾಗಿ ಹೇಳಿತ್ತು. ಆದರೆ, ಕೇಂದ್ರದಿಂದ ಆಹಾರ ಭದ್ರತೆ ಕಾಯ್ದೆಯಡಿ ಸರಬರಾಜು ಆಗುತ್ತಿದ್ದ ಅಕ್ಕಿಯನ್ನು ನಿಲ್ಲಿಸಿದ ಕಾರಣ, ಅನ್ಯ ರಾಜ್ಯಗಳಿಂದ ಅಕ್ಕಿ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು. ಈಗಾಗಲೇ ಛತ್ತೀಸ್ ಗಢ ಹಾಗೂ ಪಂಜಾಬ್ ರಾಜ್ಯಗಳು ಅಕ್ಕಿ ಕೊಡುವುದಾಗಿ ಒಪ್ಪಿವೆ. ಛತ್ತೀಸ್ ಗಢದಿಂದ 1.4 ಮೆಟ್ರಿಕ್ ಟನ್ ಅಕ್ಕಿ ತರಿಸಿಕೊಳ್ಳುವ ಬಗ್ಗೆ ಮಾತುಕತೆಗಳು ನಡೆದಿವೆ ಎಂದು ಸಚಿವರು ತಿಳಿಸಿದರು.

ತೊಡಕುಗಳೇನು?

ಅನ್ನಭಾಗ್ಯ ಯೋಜನೆಗೆ ಮೂರು ತೊಡಕುಗಳು ಇದ್ದು ಸದ್ಯಕ್ಕೆ ಅವು ನಿವಾರಣೆಯಾಗದ ಕಾರಣ ಯೋಜನೆಯ ಜಾರಿಯಲ್ಲಿ ವಿಳಂಬವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಅವುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

  • ತೊಡಕು 1 – ಸದ್ಯಕ್ಕೆ ಛತ್ತೀಸ್ ಗಡ ರಾಜ್ಯದ ಜೊತೆಗೆ ಮಾತುಕತೆ ನಡೆಯುತ್ತಿದೆ. ಅಕ್ಕಿ ಪಡೆಯುವ ಬಗ್ಗೆ ಅಲ್ಲಿನ ಆಹಾರ ಸಚಿವರ ಜೊತೆಗೆ ವಿವಿಧ ಮಟ್ಟದ ಸಭೆಗಳು ಜರುಗಿವೆ. ಈ ಸಭೆಗಳು ಫಲಪ್ರದವಾಗಿ, ನಮ್ಮಿಂದ ಅವರಿಗೆ ಹಣ ಸಂದಾಯವಾಗಿ, ಅವರು ನಮಗೆ ಸದ್ಯಕ್ಕೆ ಬೇಕಾಗಿರುವ 1.4 ಮೆಟ್ರಿಕ್ ಟನ್ ಅಕ್ಕಿಯನ್ನು ಕಳಿಸಿದಾಗ ನಮಗೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಬೇಕಿದೆ ಎಂದು ಸಚಿವರು ತಿಳಿಸಿದರು.
  • ತೊಡಕು 2 – ಶಾಶ್ವತವಾಗಿ ಅಕ್ಕಿಯನ್ನು ಸರಬರಾಜು ಮಾಡುವಂಥ ಮೂಲವನ್ನು ಸರ್ಕಾರ ಹುಡುಕುತ್ತಿದೆ. ಈಗ ಸರ್ಕಾರ, ತನ್ನದೇ ಆದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ಖರೀದಿ ಮಾಡುವ ಯೋಚನೆ ಮಾಡ್ತಿದ್ದೇವೆ. ಕೇಂದ್ರದ ಸಂಸ್ಥೆಗಳಿವೆ, NCCF, ನಾಫೆಡ್, ಕೇಂದ್ರೀಯ ಭಂಡಾರ ಮುಖಾಂತರ ಖರೀದಿ ಮಾಡುತ್ತೇವೆ ಎಂದರು.ಅದಕ್ಕೆ ಕೊಂಚ ಸಮಯ ಬೇಕು ಎಂದು ಸಚಿವರು ತಿಳಿಸಿದರು.
  • ತೊಡಕು 3 – ಸಾಮಾನ್ಯವಾಗಿ ಕೇಂದ್ರ ಸರ್ಕಾರ ಆಹಾರ ಭದ್ರತೆ ಕಾಯ್ದೆಯಡಿ ನೀಡಲಾಗುತ್ತಿರುವ ಅಕ್ಕಿಯನ್ನು ಸರಬರಾಜು ಮಾಡುವುದಾಗಿ ಒಪ್ಪಿ, ಆನಂತರ ಹಠಾತ್ತಾಗಿ ಅದನ್ನು ನಿಲ್ಲಿಸಿದೆ. ಈಗ ಸಿದ್ದರಾಮಯ್ಯನವರು ಕೇಂದ್ರ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಿ ಈ ವಿಚಾರವನ್ನು ಪ್ರಸ್ತಾಪ ಮಾಡಿ, ಅಕ್ಕಿ ವಿತರಣೆ ಮಾಡುವಂತೆ ಮನವಿ ಮಾಡಿದ್ದಾರೆ. ಅದಕ್ಕಿನ್ನೂ ಕೇಂದ್ರದಿಂದ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ, ಅದೂ ಸಹ ಯೋಜನೆಯನ್ನು ಮೊದಲೇ ತಿಳಿಸಿದ ದಿನಾಂಕದಂದು ಶುರು ಮಾಡದೇ ಇರಲು ಮತ್ತೊಂದು ಕಾರಣವಾಗಿದೆ.
  • ಕಡೆಗೊಂದು ಭರವಸೆಯ ನುಡಿ

    ಅಗತ್ಯ ಅಕ್ಕಿಯನ್ನು ಅಲ್ಲಿಂದ ಅಕ್ಕಿಯನ್ನು ಸರಬರಾಜು ಮಾಡಿಕೊಂಡು ಜನರಿಗೆ ಕೊಡುತ್ತೇವೆ. ಛತ್ತೀಸ್‌ಗಡದವರು 1.5 ಲಕ್ಷ ಟನ್ ಅಕ್ಕಿ ಕೊಡ್ತೇವೆ ಅಂದಿದ್ದಾರೆ. ತೆಲಂಗಾಣದವ್ರು ಗೋಧಿ ಕೊಡುತ್ತೇವೆ ಸಚಿವ ಮುನಿಯಪ್ಪ ಹೇಳಿದ್ದಾರೆ. ಪಂಜಾಬ್ ರಾಜ್ಯದವರು ಕೂಡಾ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ಈ ರಾಜ್ಯಗಳಿಂದ ನಮಗೆ ಸಾಗಾಟಕ್ಕೆ ಸಾರಿಗೆ ವೆಚ್ಚ ಜಾಸ್ತಿ ಆಗಲಿದೆ. ಕೇಂದ್ರದ ಸಂಸ್ಥೆಗಳಾದರೆ ಅವರೇ ತರಿಸಿಕೊಂಡು ನಮಗೆ ಡೆಲಿವರಿ ಕೊಡುತ್ತಾರೆ ಎಂದರು. ಈ ವಾರದಲ್ಲೇ ರೇಟ್ ಫಿಕ್ಸ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ಕೇಂದ್ರ ಆಹಾರ ಸಚಿವ ಖಡಕ್ ಮಾತು

    ಕೇಂದ್ರ ಆಹಾರ ಸಚಿವ ಪಿಯೂಶ್ ಗೋಯೆಲ್ ಅವರು ನವದೆಹಲಿಯಲ್ಲಿ ಜೂ. 21ರಂದು ಸುದ್ದಿಗೋಷ್ಠಿ ನಡೆಸಿ, “ನಾವು ಕರ್ನಾಟಕ ಮಾತ್ರವಲ್ಲ ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಸೇರಿ ಹಲವಾರು ರಾಜ್ಯಗಳಿಂದ ಬಂದಿರುವ ಅಕ್ಕಿ ಪೂರೈಕೆ ಬೇಡಿಕೆಯನ್ನ ನಿರಾಕರಿಸಿದ್ದೇವೆ ಎಂದು ತಿಳಿಸಿದ್ದಾರೆ.

  • “ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇದೆ. ಆದರೆ, ಅದನ್ನು ರಿಯಾಯಿತಿ ದರದಲ್ಲಿ ಕೊಡುವ ಅಕ್ಕಿಯಾಗಿದೆ. ನಾವು 140 ಕೋಟಿ ಮಂದಿಗೆ ಅದನ್ನು ಸರಬರಾಜು ಮಾಡಬೇಕಿದ್ದು, ವಿವಿಧ ರಾಜ್ಯ ಸರ್ಕಾರಗಳ ಯೋಜನೆಗಳಿಗೆ ನಾವು ಅಕ್ಕಿ ಕೊಡುತ್ತಾ ಹೋದರೆ, ದೇಶದ ಉಳಿತ ರಾಜ್ಯಗಳಿಗೆ ಹಂಚಲು ಅಕ್ಕಿಯೇ ಇರುವುದಿಲ್ಲ’’ ಎಂದು ಹೇಳಿದ್ದಾರೆ.

    ಆದರೆ, ಈ ಮಾತನ್ನು ರಾಜ್ಯ ಕಾಂಗ್ರೆಸ್ ನಾಯಕರು ಒಪ್ಪುತ್ತಿಲ್ಲ. ನೀವು ಈಗಾಗಲೇ ಕೊಡುತ್ತಿದ್ದ ಅಕ್ಕಿಯನ್ನೇ ಮುಂದುವರಿಸಿ. ಅದನ್ನು ನಿಲ್ಲಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!