Mysore
23
overcast clouds

Social Media

ಶುಕ್ರವಾರ, 03 ಜುಲೈ 2026
Light
Dark

ರೈತರಿಗೆ 9 ಗಂಟೆ ಉಚಿತ ವಿದ್ಯುತ್‌ಗೆ ಕ್ರಮ: ಜನಾರ್ದನ ರೆಡ್ಡಿ

ಹಿರಿಯೂರು: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ ಮಹಿಳೆಯರ ಖಾತೆಗೆ ತಿಂಗಳಿಗೆ 2500, ರೈತರಿಗೆ ನಿರಂತರ 9 ಗಂಟೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುವುದು’ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಭರವಸೆ ನೀಡಿದರು.

ತಾಲ್ಲೂಕಿನ ಐಮಂಗಲ ಮತ್ತು ಸೊಂಡೆಕೆರೆ ಗ್ರಾಮದಲ್ಲಿ ಭಾನುವಾರ ತಮ್ಮ ಪಕ್ಷದ ಅಭ್ಯರ್ಥಿ ಗನ್ನಾಯಕನಹಳ್ಳಿ ಎಚ್. ಮಹೇಶ್ ಪರವಾಗಿ ಏರ್ಪಡಿಸಿದ್ದ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು.

‘ರಾಷ್ಟ್ರೀಯ ಪಕ್ಷಗಳು ಇದುವರೆಗೂ ಜನತೆಗೆ ಹುಸಿ ಭರವಸೆಗಳನ್ನು ನೀಡುವ ಮೂಲಕ ಹಣವನ್ನು ಕೊಳ್ಳೆ ಹೊಡೆಯುತ್ತಿವೆ. ಅಭಿವೃದ್ಧಿ ಬಗ್ಗೆ ಕೇಂದ್ರದ ನಾಯಕರಿಗೆ ಗಮನವಿಲ್ಲ. ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ನೀರಾವರಿ ವಿಚಾರದಲ್ಲಿ ಆಗಿರುವ ಅಭಿವೃದ್ಧಿ ನಮ್ಮಲ್ಲಿ ಏಕೆ ಆಗುತ್ತಿಲ್ಲ. ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದಲ್ಲಿ ಮಾತ್ರ ಸರ್ವತೋಮುಖ ಅಭಿವೃದ್ಧಿ ಎಂಬುದನ್ನು ನೆರೆಯ ರಾಜ್ಯಗಳನ್ನು ನೋಡಿ ಮತದಾರರು ತೀರ್ಮಾನಿಸಬೇಕು’ ಎಂದು ಮನವಿ ಮಾಡಿದರು.

‘ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಬಸವೇಶ್ವರರ ಹೆಸರಿನಲ್ಲಿ ರೈತ ಭರವಸೆಯ ಕೇಂದ್ರ ಆರಂಭಿಸಿ ರಾಜ್ಯದಾದ್ಯಂತ ಬಡರೈತರಿಗೆ ವರ್ಷಕ್ಕೆ ₹ 15 ಸಾವಿರ ನೀಡುತ್ತೇವೆ. ಜಮೀನು ಅಭಿವೃದ್ಧಿಗೆ ₹ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ, ಬೆಳೆ ವಿಮೆ ಕಂತನ್ನು ರೈತರ ಬದಲು ತಮ್ಮ ಪಕ್ಷದ ವತಿಯಿಂದ ಭರಿಸುತ್ತೇವೆ. ಒಮ್ಮೆ ಅವಕಾಶ ಕೊಡಿ’ ಎಂದು ಮನವಿ ಮಾಡಿದರು.

‘ಐಮಂಗಲ ಹೋಬಳಿಯ ಚಿಕ್ಕಸಿದ್ದವ್ವನಹಳ್ಳಿ, ಭರಂಪುರ ಕೆರೆಗಳಿಗೆ ಕಾಯಕಲ್ಪ, ವಿವಿ ಸಾಗರ ಪ್ರದೇಶವನ್ನು ಸುಂದರ ಪ್ರವಾಸಿ ತಾಣವನ್ನಾಗಿಸುತ್ತೇವೆ. ಇಡೀ ತಾಲ್ಲೂಕಿನ ಬರಡು ಭೂಮಿಗೆ ನೀರು ಕೊಡುವ ಕೆಲಸ ಮಾಡಲಾಗುವುದು’ ಎಂದರು.

ಪಕ್ಷದ ಅಭ್ಯರ್ಥಿ ಎಚ್. ಮಹೇಶ್, ಹರಳಯ್ಯ ಗುರುಪೀಠದ ಬಸವಹರಳಯ್ಯ ಸ್ವಾಮೀಜಿ ಮಾತನಾಡಿದರು. ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಹೇಮಲತಾ, ಪ್ರಸಾದನಾಯ್ಕ, ಜಯಶೀಲರೆಡ್ಡಿ, ಕಾಂತಯ್ಯ, ರಾಧಾಕೃಷ್ಣ, ಬಿ. ತಿಪ್ಪೇಸ್ವಾಮಿ, ಸುಶೀಲಮ್ಮ ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!