Mysore
23
overcast clouds
Light
Dark

ಅಭಿಮನ್ಯುವಿನ ಉತ್ತರಾಧಿಕಾರಿ ಅಶ್ವತ್ಥಾಮ ಇನ್ನಿಲ್ಲ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಭಾಗವಹಿಸುವ ಆನೆ ತಂಡದ ಕ್ಯಾಪ್ಟನ್‌ ಅಭಿಮನ್ಯುವಿನ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದ್ದ ಅಶ್ವತ್ಥಾಮ ಎಂಬುವ ಆನೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತು ಜನ ಮೆಚ್ಚುಗೆ ಪಡೆದಿದ್ದ ಕ್ಯಾಪ್ಟನ್‌ ಅರ್ಜುನ(ಆನೆ)ನ ಸಾವಿನ ನೋವು ಮಾಸುವ ಮುನ್ನವೇ ದಸರಾ ಜಂಬೂಸವಾರಿ ಆನೆ ಪಡೆಯ ಅಶ್ವತ್ಥಾಮ ಎಂಬ ಆನೆ ಸಾವು ಆಘಾತವನ್ನುಂಟು ಮಾಡಿದೆ.

ನಾಗರಹೊಳೆಯ ಭೀಮನಕಟ್ಟೆ ಆನೆ ಕ್ಯಾಂಪ್‌ನಲ್ಲಿದ್ದ ಅಶ್ವತ್ಥಾಮ, ಆಹಾರವನ್ನು ಅರಸಿ ತೆರಳಿದ್ದ ವೇಳೆ ವಿದ್ಯುತ್‌ ತಂತಿ ತಗುಲಿ ಸಾವನ್ನಪ್ಪಿರುವುದು ತಿಳಿದು ಬಂದಿದೆ.

ಸೋಲರ್‌ ತಂತಿಗಳ ಮೇಲೆ ವಿದ್ಯುತ್‌ ತಂತಿ ಬಿದ್ದಿದ್ದು, ಅಶ್ವತ್ಥಾಮ ಆನೆ ಅದನ್ನು ತುಳಿದ ಪರಿಣಾಮ ಆನೆ ಸ್ಥಳದಲ್ಲೇ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಶ್ವತ್ಥಾಮ ಬಂದಿದ್ದು ಇಲ್ಲಿಂದ : 2017ರಲ್ಲಿ ಹಾಸನದ ಸಕಲೇಶ್ಪುರದಲ್ಲಿ ಅಶ್ವತ್ಮಥಾಮನನ್ನು ಸೆರೆ ಹಿಡಿಯಲಾಗಿತ್ತು. ತನ್ನ ಶಾಂತ ಹಾಗೂ ತಾಳ್ಮೆ ಸ್ವಾಭಾವದಿಂದ ಮಾವುತರ ಅಚ್ಚುಮೆಚ್ಚಿನ ಆನೆಯಾಗಿತ್ತು. ಬಳಿಕ ಮೊಟ್ಟಮೊದಲಬಾರಿಗೆ 2021ರಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಭಾಗವಹಿಸಿತ್ತು. ನಂತರ 2022ರಲ್ಲಿ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಮೂಲಕ ಜನಮೆಚ್ಚುಗೆ ಪಡೆಯುವಲ್ಲಿ ಅಶ್ವತ್ಥಾಮ ಯಶಸ್ವಿಯಾಯಿತು.

ಇದೀಗ ಅಶ್ವತ್ಥಾಮನ ಸಾವಿನ ಸುದ್ದಿ ತಿಳಿದು ಅರಣ್ಯಾ ಸಿಬ್ಬಂದಿ ಹಾಗೂ ಪ್ರಾಣಿಪ್ರಿಯರು ಮರುಕ ಪಟ್ಟಿದ್ದಾರೆ.