Mysore
23
overcast clouds
Light
Dark

ರಾಜಕಾರಣಕ್ಕೆ ಜಾಗೃತ ಯುವ ಜನತೆ

• ಹನಿ ಉತ್ತಪ್ಪ

ಅಲ್ಲೊಂದು ಕಡೆ ವಸತಿನಿಲಯ ದಿನಾಚರಣೆಗಾಗಿ ರಾಜಕಾರಣಿಗಳನ್ನು ಕರೆಸುವಂತಿಲ್ಲ ಎಂದು ಜಗಳ ನಡೆದು, ವಾತಾವರಣ ತಣ್ಣಗಾಗಿದ್ದಷ್ಟೇ. ಮತ್ತೆ ಇಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸುತ್ತಿದ್ದರೆ, ರಾಜಕಾರಣಿಗಳು ಏಕೆ ಬರಬೇಕು? ಎಂದು ವಿದ್ಯಾರ್ಥಿಗಳು ಅಧ್ಯಾಪಕರನ್ನು ಪ್ರಶ್ನೆ ಮಾಡಲು ಶುರುವಿಟ್ಟಿದ್ದರು. ಇದೆಲ್ಲದರ ನಡುವೆ, ಮೊನ್ನೆ ಮಂಗಳವಾರ ಬಂದ ಚುನಾವಣೆಯ ಫಲಿತಾಂಶದಲ್ಲಿ ರಾಜಕಾರಣಿಯ ಮಗಳೊಬ್ಬಳು ಚಿಕ್ಕ ವಯಸ್ಸಿನಲ್ಲಿ ಲೋಕಸಭಾ ಕ್ಷೇತ್ರಕ್ಕೆ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಳು.

ಇಂದಿನ ಯುವಜನತೆಗೆ ರಾಜಕೀಯದ ಅರಿವಿಲ್ಲ, ಚುನಾವಣೆ ಬೇಕಿಲ್ಲ ಹೀಗೆ ಅನೇಕ ‘ಇಲ್ಲ’ ಎನ್ನುವುದನ್ನು ಕೇಳುತ್ತಲಿರುತ್ತೇವೆ. ಮೈಸೂರಿನಲ್ಲಿರುವ ಹೊರ ರಾಜ್ಯದ ಯುವಕನ ಬಳಿ ಚುನಾವಣಾ ಗುರುತಿನ ಚೀಟಿಯೇ ಇಲ್ಲ! ಚಿಕ್ಕಂದಿನಿಂದ ದುಡಿಮೆಗಾಗಿ ಊರೂರ ಅಲೆದಾಟದೊಳಗೆ ಎಲ್ಲಿಯೂ ನೆಲೆಯೂರಲು ಸಾಧ್ಯವಾಗಿಲ್ಲ ಎಂಬ ಅಸಹಾಯಕ ಸ್ಥಿತಿ. ಆದರೆ, ರಾಜಕೀಯಕ್ಕೆ ಸಂಬಂಧಿಸಿದಂತೆ ಏನಾಗುತ್ತಿದೆ ಎಂಬುದರ ವಿಶ್ಲೇಷಣೆಯನ್ನು ಬೆರಗಾಗುವ ಹಾಗೆ ನೀಡುತ್ತಾನೆ.

ಕಾಶ್ಮೀರದಿಂದ ಬಂದು ಉನ್ನತ ವ್ಯಾಸಂಗ ಮಾಡುತ್ತಿರುವ ಆಕೆ ಚುನಾವಣೆ ಬಂದಾಗ ಭಯಪಟ್ಟಿದ್ದಳು. ಅವಳಿರುವ ಊರಿನಲ್ಲಿ ಆಕ್ರಮಣದ ಭೀತಿಯಿಂದಾಗಿ ಚುನಾವಣೆಯ ದಿನ ಮತ ಚಲಾವಣೆ
ಮಾಡುವುದಕ್ಕಿರಲಿ, ಅಗತ್ಯ ವಸ್ತುಗಳ ಸಲುವಾಗಿಯೂ ಹೊರಗೆ ಕಾಲಿಡುವಂತಿಲ್ಲ. ದಿನೇ ದಿನೇ ಹಾಳಾಗುತ್ತಿರುವ ಪ್ರಕೃತಿಯನ್ನು ಉಳಿಸುವುದಕ್ಕಾಗಿ ಲಡಾಖ್‌ನಲ್ಲಿ ನಿರಂತರ ಹೋರಾಟ ಮಾಡುತ್ತಿದ್ದಾರೆ. ಹಾಗಾಗಿ ಲಡಾಖ್‌ನಲ್ಲಿ ಶೆರಿನ್‌ಗೂ ಮತದಾನ ಮಾಡುವ ಮನಸ್ಸಿರಲಿಲ್ಲ. ಈ ರಾಜಕೀಯ ದವರು ತಮ್ಮ ವೋಟುಗಳಿಗಾಗಿ ಏನು ಬೇಕಾದರೂ ಮಾಡುತ್ತಾರೆಂದು ತಿಂಗಳ ಹಿಂದಷ್ಟೇ ಹೇಳಿದ್ದಳು.

ಇತ್ತೀಚೆಗೆ ಯುವ ಮತದಾರರನ್ನು ಕುರಿತ ಸಂದರ್ಶನ ಕಾರ್ಯಕ್ರಮ ಯೂಟ್ಯೂಬ್‌ನಲ್ಲಿ ಸಿಕ್ಕಿತು. ರಾಜಕೀಯದ ಬಗ್ಗೆ ಅವರಿಗಿರುವ ಅರಿವು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಧರ್ಮದ ಹೆಸರಿನಲ್ಲಿ ಬಿತ್ತಲಾದ ವಿಷ ಬೀಜಗಳು, ಜಾತಿಯವರನ್ನು ಒಗ್ಗೂಡಿಸುವ ಕಸರತ್ತು, ಭಾವನಾತ್ಮಕವಾಗಿ ಜನರನ್ನು
ಸೆಳೆಯುವ ಪಕ್ಷದೊಂದಿಗೆ ತಮ್ಮನ್ನು ಗುರುತಿಸಿಕೊಂಡ, ರಾಜಕೀಯದಲ್ಲಿ ನಾನೊಂದು ಬದುಕು ಕಟ್ಟಿಕೊಳ್ಳಬೇಕು ಎಂದು ಹಾತೊರೆಯುವ ಯುವಕರೂ ಇದ್ದಾರೆ. ನಮಗೆ ಯಾವ ಪಕ್ಷಗಳ ಸಹವಾಸವೂ ಬೇಡ, ಎಡ ಬಲಗಳ ತಿಕ್ಕಾಟವೂ ಬೇಡ ಎನ್ನುವ ಯುವ ಮನಸ್ಸುಗಳೂ ಇದ್ದಾವೆ.
ಪ್ರಯತ್ನವನ್ನು ಉದಾಹರಣೆಯ ಸಮೇತ ವಿಶ್ಲೇಷಿಸುತ್ತಾ ವಿದ್ಯಾರ್ಥಿಗಳೆಲ್ಲ ಮಾತಿಗಿಳಿದಿದ್ದರು.
ಪಾರದರ್ಶಕ ನಾಯಕರನ್ನು ಈಗಿನ ಕಾಲದಲ್ಲಿ ಭೂತಕನ್ನಡಿ ಹಿಡಿದು ಹುಡುಕಿದರೂ ಸಿಗುವುದಿಲ್ಲ, ಆದರೆ ಇದ್ದದರಲ್ಲಿ ಪರವಾಗಿಲ್ಲ ಎನ್ನುವವರಿಗೆ ಮತ ನೀಡಬೇಕು ಎಂಬ ಪಜ್ಜೆಯಿಂದ ಮತ ಚಲಾಯಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಪ್ರಜಾಪ್ರಭುತ್ವವೂ ಇಂದು ಗೆದ್ದಿದೆ. ನಾಯಕರ ನಡೆ ಸರ್ಕಾರ ತೆಗೆದುಕೊಂಡ
ನಿರ್ಧಾರಗಳ ಕುರಿತು ಪ್ರಶ್ನಿಸುವ, ಸುಲಭಕ್ಕೆ ಯಾವುದನ್ನೂ ಒಪ್ಪದ ಯೋಚನಾಶಕ್ತಿ ಇವತ್ತಿಗೂ ಯುವಜನತೆಯಲ್ಲಿದೆ.

ಮೊದಲ ವೋಟು ಸೆಲ್ಟಿಯಲ್ಲೇ ಕಳೆದುಹೋಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದರು. ವೈರುಧ್ಯವಾಗಿ ‘ತನ್ನ ಮತ ದೇಶಕ್ಕಾಗಿ ಎನ್ನುತ್ತಾ ಹುಡುಗನೊಬ್ಬ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡಿದ್ದು ಅಚ್ಚರಿಯನ್ನು ಮೂಡಿಸಿತ್ತು. ರಾಜಕೀಯ ಅರಿವು ಯುವಜನತೆಯಲ್ಲಿ ಕುಂದುತ್ತಿದೆ ಎನ್ನುತ್ತಿರುವ ಬೆನ್ನಲ್ಲೇ ಭರವಸೆ ನೀಡಬಲ್ಲ ಯುವ ಪ್ರಜೆಗಳು ಕಾಣಿಸುತ್ತಿದ್ದಾರೆ.