ಗಣಿತ ಮೇಷ್ಟ್ರ ಹುಲಿ ಮುದ್ದು
ಬೀರಿಹುಂಡಿ ಶಾಲೆಯ ಶಿವಶಂಕರ್ ಸರ್ ಎಂದರೆ ಅಚ್ಚುಮೆಚ್ಚು ನನ್ನ ಪ್ರೀತಿಯ ಮೇಷ್ಟ್ರು
ಸಮಾಜ ಎಲ್ಲರನ್ನೂ ಗೌರವಿಸುತ್ತದೆ. ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವರು ಶಿಕ್ಷಕರು. ಅದರಲ್ಲಿಯೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಂತದಲ್ಲಿ ದೊರಕುವ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಪ್ರೀತಿ, ಗೌರವ. ನನ್ನ ಪಾಲಿಗೆ ಬೀರಿಹುಂಡಿಯ ಸರ್ಕಾರಿ ಪ್ರೌಢಶಾಲೆಯ ಲೆಕ್ಕದ ಮೇಷ್ಟ್ರಾಗಿದ್ದ ಶಿವಶಂಕರ್ (ಸಿಎಸ್) ಎಂದರೆ ಲೆಕ್ಕಕ್ಕೆ ಇಡಲಾಗದಷ್ಟು ಪ್ರೀತಿ, ಆದರ.
ಶಿವಶಂಕರ್ ಸರ್ ನಡಿಗೆಯಲ್ಲಿದ್ದ ಗಾಂಭೀರ್ಯ, ಮಾತಿನಲ್ಲಿದ್ದ ಗೈರತ್ತು ಯಾರನ್ನೂ ನಡುಗಿಸುವಂತದ್ದು. ವಿದ್ಯಾರ್ಥಿಗಳಾಗಿದ್ದ ನಮಗೆ ಅವರ ಬಗ್ಗೆ ಕೇಳಿಯೇ ಭಯ. ಮೊದಲೇ ಗಣಿತದ ಮೇಷ್ಟ್ರು, ಅರ್ಥವಾಗದ ವಿಚಾರದಲ್ಲಿ ಎಷ್ಟು ಪೆಟ್ಟು ತಿನ್ನಬೇಕೋ ಎನ್ನುವ ಭಯ.
ಕಲಿಯುವ ಆಸಕ್ತಿ ಇದ್ದ ಎಲ್ಲರಿಗೂ ಸಿಎಸ್ ಎಂದರೆ ಪ್ರೀತಿ. ಅವರು ಗದರುತ್ತಿದ್ದರು, ಬೆತ್ತದ ರುಚಿ ತೋರಿಸುತ್ತಿದ್ದರು. ಆದರೆ ಅದರ ಹಿಂದಿದ್ದ ಪ್ರೀತಿ ಇಂದಿಗೂ ನನ್ನ ಮತ್ತು ನಮ್ಮಂತವರ ಅಂತರಾಳದಲ್ಲಿ ಶಾಶ್ವತ ಸ್ಥಾನ ಪಡೆದಿದೆ.
ಹಿಂದೆಲ್ಲಾ ಸ್ಪರ್ಧೆಗಳಿಗೆ ಒಡ್ಡಿಕೊಳ್ಳದೇ ಇದ್ದ ನನ್ನನ್ನು ಒಮ್ಮೆ ಮೂರು ಕಾಲಿನ ಓಟದ ಸ್ಪರ್ಧೆಯಲ್ಲಿ ಭಾಗವಹಿಸು ಎಂದು ಸ್ನೇಹಿತನೊಂದಿಗೆ ಎಳೆದು ಮೈದಾನಕ್ಕೆ ಬಿಟ್ಟರು. ಸ್ಪರ್ಧೆಯಲ್ಲಿ ಗೆದ್ದೆ, ಬಹುಮಾನವನ್ನು ಪಡೆದೆ. ಅದೇ ನಾನು ಪಡೆದ ಮೊದಲ ಬಹುಮಾನ. ಅದು ಕೊಟ್ಟ ಸಂತೋಷಕ್ಕೆ ಮಿತಿ ಇಲ್ಲ.
ಪ್ರೌಢಶಾಲೆ ಮುಗಿಸಿ ಹೊರಬಿದ್ದ ಮೇಲೆ ಅವರೂ ಬೇರೆ ಬೇರೆ ಶಾಲೆಗಳಿಗೆ ವರ್ಗವಾದರು. ಹಲವಾರು ಬಾರಿ ಭೇಟಿಯಾಗಬೇಕು ಎಂದು ಅನ್ನಿಸಿದರೂ ನನ್ನ ವಯೋಮಿತಿ, ಪರಿಮಿತಿಗಳ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಇಂದಿನಂತೆ ಅಂದು ಸಂಪರ್ಕ ಸುಲಭ ಸಾಧ್ಯವಾಗಿರಲಿಲ್ಲವಲ್ಲಾ? ಹೀಗಿದ್ದರೂ ಒಂದೆರಡು ಬಾರಿ ಅವರ ಆಕಸ್ಮಿಕ ಭೇಟಿಯಾಗಿದೆ. ಅದೇ ಪ್ರೀತಿಯಿಂದ ನನ್ನನ್ನು ಮಾತನಾಡಿಸಿದ್ದಾರೆ. ಅವರ ಹುಲಿ ಮುದ್ದು ನನ್ನಲ್ಲಿ ಈಗಲೂ ಬೆಚ್ಚಗಿದೆ.
ಜಗತ್ತಿನಲ್ಲಿ ಇರುವ ದೊಡ್ಡ ಶಿಕ್ಷಕರ ಬಳಗದಲ್ಲಿ ನೀವೊಬ್ಬರ ಸಾಮಾನ್ಯ ಶಿಕ್ಷಕರು ಎನ್ನಿಸಿಕೊಂಡಿರಬಹುದು ಸಿಎಸ್ ಸರ್, ಆದರೆ ನನ್ನಂಥವರ ಪಾಲಿಗೆ ನೀವು ದೊಡ್ಡ ನಕ್ಷತ್ರ. ಬೆಲೆ ಕಟ್ಟಲಾಗದ ಮೇರು ಪರ್ವತ.
![ಅವಿನಾಶ್ ಎಂ. ಜಿ.ಬಿ. ಸರಗೂರು](https://andolana.in/wp-content/uploads/2022/08/IMG-20220822-WA0013.jpg)