ಡಾ.ಚೈತ್ರ ಸುಖೇಶ್
ಪ್ರಾಣಾಯಾಮ ಎಂಬುದು ಯೋಗದ ಒಂದು ಅಭ್ಯಾಸವಾಗಿದೆ. ಇದರಲ್ಲಿ ನಾವು ನಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಬೇಕಾಗುತ್ತದೆ. ಅಂದರೆ ಇದು ಒಂದು ಪ್ರಕಾರದ ಉಸಿರಾಟದ ವ್ಯಾಯಾಮ. ಪ್ರಾಣ ಅಥವಾ ಉಸಿರಾಟವನ್ನು ಹತೋಟಿಯಲ್ಲಿಡುವುದೇ ಪ್ರಾಣಾಯಾಮ.
ಪ್ರಾಣಾಯಾಮದ ಆರೋಗ್ಯ ಉಪಯೋಗಗಳು
ಪ್ರಾಣಾಯಾಮವು ಶ್ವಾಸಕೋಶಗಳ ಆರೋಗ್ಯಕ್ಕೆ ಉತ್ತಮವಾಗಿದ್ದು, ಇದನ್ನು ಮಾಡುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ. ಅಲ್ಲದೆ ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಸಹಕಾರಿಯಾಗಿದೆ.
ಪ್ರಾಣಾಯಾಮದಿಂದ ಮಾನಸಿಕ ಖಿನ್ನತೆಯನ್ನು ದೂರ ಮಾಡಿ ಮನಸ್ಸಿನ ಏಕಾಗ್ರತೆಯನ್ನು ಉತ್ತಮಪಡಿಸಿಕೊಳ್ಳಬಹುದು. ಜೊತೆಗೆ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲುಹೆಚ್ಚು ಪರಿಣಾಮಕಾರಿಯಾಗಿದೆ.
ಪ್ರಾಣಾಯಾಮ ಮಾಡುವುದರಿಂದ ದೇಹದ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು. ಅಲ್ಲದೆ ರಕ್ತ ಪರಿಚಲನೆ ಸುಧಾರಣೆ ಆಗುವ ಜೊತೆಗೆ ರಕ್ತದಲ್ಲಿನ ಆಮ್ಲಜನಕ ಮಟ್ಟ ಹೆಚ್ಚಾಗುತ್ತದೆ.
ಪ್ರಾಣಾಯಾಮದ ವಿಧಗಳು:
ನಾಡಿಶೋಧನಾ ಪ್ರಾಣಾಯಾಮ:
ನಾಡಿಶೋಧನಾ ಪ್ರಾಣಾಯಾಮದಲ್ಲಿ ಮೂಗಿನ ಎಡ ಹೊಳ್ಳದ ಮೂಲಕ ಉಸಿರನ್ನು ತೆಗೆದುಕೊಂಡು, ಸ್ವಲ್ಪ ಸಮಯ ಹಿಡಿದಿಟ್ಟು ನಂತರ ಮೂಗಿನ ಬಲ ಹೊಳ್ಳದ ಮೂಲಕ ನಿಧಾನವಾಗಿ ಬಿಡಬೇಕು. ಹೀಗೆ ಮಾಡುವುದರಿಂದ ಮಾನಸಿಕ ಒತ್ತಡ, ಆತಂಕ, ಖಿನ್ನತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
ಭಸ್ತ್ರಿಕಾ ಪ್ರಾಣಾಯಾಮ:
ಭಸ್ತ್ರಿಕಾ ಪ್ರಾಣಾಯಾಮದಲ್ಲಿ ಉಸಿರನ್ನು ಮೂಗಿನ ಎರಡೂ ಹೊಳ್ಳೆಯಿಂದ ಒಮ್ಮೆಲೇ ವೇಗವಾಗಿ ತೆಗೆದುಕೊಂಡು, ಸ್ವಲ್ಪ ಹೊತ್ತು ಹಿಡಿದಿಟ್ಟು ವೇಗವಾಗಿ ಬಿಡುಗಡೆ ಮಾಡಬೇಕು. ಇದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು. ಜೊತೆಗೆ ತೂಕ ಇಳಿಕೆಗೆ ಹೆಚ್ಚು ಪರಿಣಾಮಕಾರಿಯಾಗಿದೆ. ಅಲ್ಲದೆ ಅಸ್ತಮ ತೊಂದರೆಯಿಂದ ಬಳಲುವವರಿಗೆ ಇದು ಉತ್ತಮ ಚಿಕಿತ್ಸಾ ವಿಧಾನ ಎಂದರೆ ತಪ್ಪಾಗಲಾರದು.
ಕಪಾಲಭಾತಿ ಪ್ರಾಣಾಯಾಮ:
ಕಪಾಲಭಾತಿ ಪ್ರಾಣಾಯಾಮವು ಅತ್ಯಂತ ಸರಳ ಪ್ರಾಣಾಯಾಮವಾಗಿದ್ದು, ಮೂಗಿನ ಎರಡೂ ಹೊಳ್ಳೆಗಳಿಂದ ಆಳವಾಗಿ ಉಸಿರನ್ನು ತೆಗೆದುಕೊಂಡು, ಒಕ್ಕಳನ್ನು ಬೆನ್ನು ಮೂಳೆಯ ಕಡೆಗೆ ಎಳೆದುಕೊಳ್ಳಬೇಕು ನಂತರ ಕಿಬ್ಬೊಟ್ಟೆಯ ಸ್ನಾಯುಗಳನ್ನು ನಿಧಾನವಾಗಿ ಬಿಡುಗಡೆ ಮಾಡಬೇಕು. ಹೀಗೆ ಮಾಡುವುದರಿಂದ ಅಸ್ತಮವನ್ನು ಕಡಿಮೆ ಮಾಡಬಹುದು. ಜೊತೆಗೆ ಸೈನಸೈಟಿಸ್ ತೊಂದರೆಯಿಂದ ಬಳಲುವವರಿಗೆ ಇದು ಹೆಚ್ಚು ಪರಿಣಾಮಕಾರಿಯಾಗಿದ್ದು, ಜೀರ್ಣಕ್ರಿಯೆಯನ್ನು ಉತ್ತಮಪಡಿಸುವ ಮೂಲಕ ಮಲಬದ್ಧತೆಯನ್ನು ನಿವಾರಿಸಲು ಸಹಕಾರಿಯಾಗಿದೆ.
ಶೀತ್ಕರಿ ಪ್ರಾಣಾಯಾಮ:
ಶೀತ್ಕರಿ ಪ್ರಾಣಾಯಾಮದಲ್ಲಿ ನಾಲಿಗೆಯನ್ನು ಹೊರಕ್ಕೆ ತಂದು ಕೊಳವೆ ಆಕಾರದಲ್ಲಿ ಸುತ್ತಿ, ಉಸಿರನ್ನು ಒಳಗೆ ತೆಗೆದುಕೊಳ್ಳಬೇಕು. ನಂತರ ಉಸಿರನ್ನು ಹಿಡಿದಿಟ್ಟುಕೊಳ್ಳಬೇಕು. ನಂತರ ನಿಧಾನವಾಗಿ ಬಿಡಬೇಕು. ಈ ಪ್ರಾಣಾಯಾಮವನ್ನು ಬೇಸಿಗೆಯಲ್ಲಿ ಮಾಡಬೇಕು. ಇದು ದೇಹವನ್ನು ತಂಪಾಗಿಸಲು ಸಹಾಯ ಮಾಡುವ ಜೊತೆಗೆ ಬಾಯಾರಿಕೆಯನ್ನೂ ಕಡಿಮೆ ಮಾಡುತ್ತದೆ. ಅಲ್ಲದೆ ರಕ್ತದೊತ್ತಡ ಕಡಿಮೆ ಮಾಡುವ ಜೊತೆಗೆ ಒತ್ತಡ, ಕೋಪ, ಆತಂಕ, ಮಾನಸಿಕ ಖಿನ್ನತೆಯನ್ನು ನಿವಾರಿಸುತ್ತದೆ. ಅಜೀರ್ಣವನ್ನು ಕೂಡ ನಿವಾರಿಸುತ್ತದೆ.
ಸೂರ್ಯಭೇದನ ಪ್ರಾಣಾಯಾಮ:
ಸೂರ್ಯಭೇದನ ಪ್ರಾಣಾಯಾಮವನ್ನು ಮಾಡುವಾಗ ಮೂಗಿನ ಹೊಳ್ಳೆಯಿಂದ ಉಸಿರನ್ನು ತೆಗೆದುಕೊಂಡು, ಕೆಲಕಾಲ ಹಿಡಿದಿಟ್ಟು ನಂತರ ಎಡ ಮೂಗಿನಿಂದ ಬಿಡುಗಡೆ ಮಾಡಬೇಕು. ಹೀಗೆ ಮಾಡುವುದರಿಂದ ತಲೆನೋವಿನ ತೊಂದರೆಗಳು ಕಡಿಮೆಯಾಗುವ ಜೊತೆಗೆ ವಾಯುಪ್ರಕುಪಿತ ಜಠರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿದ್ದು, ವೃದ್ಧಾಪ್ಯವನ್ನು ಮುಂದೂಡುತ್ತದೆ. ಉಸಿರಾಟದ ಸಮಸ್ಯೆಗಳಿಗೂ ಇದು ಹೆಚ್ಚು ಪರಿಣಾಮಕಾರಿ.
ಚಂದ್ರಭೇದನ ಪ್ರಾಣಾಯಾಮ:
ಚಂದ್ರಭೇದನ ಪ್ರಾಣಾಯಾಮದಲ್ಲಿ ಎಡ ಮೂಗಿನ ಹೊಳ್ಳೆಯಿಂದ ಉಸಿರನ್ನು ತೆಗೆದುಕೊಂಡು, ಉಸಿರನ್ನು ತಡೆಹಿಡಿಯಬೇಕು. ನಂತರ ಮೂಗಿನ ಬಲ ಹೊಳ್ಳೆಯಿಂದ ಬಿಡಬೇಕು. ಹೀಗೆ ಮಾಡುವುದರಿಂದ ಉದ್ವೇಗ, ಒತ್ತಡ ಮುಂತಾದ ಮಾನಸಿಕ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಲು ಉಪಯುಕ್ತವಾಗಿದೆ





