ರವೀಂದ್ರ ಗುರುರಾಜ ಕಾಟೋಟಿ
ನಾನು ಪಂ. ರಾಜೀವ್ ತಾರಾನಾಥ್ ಅವರನ್ನು ಮೊದಲು ನೋಡಿದ್ದು ಬೆಳಗಾವಿಯಲ್ಲಿ. ೧೯೮೦ರ ದಶಕದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸಮ್ಮೇಳನದಲ್ಲಿ ಅವರ ಸರೋದ್ ವಾದನ ಆಯೋಜನೆ ಆಗಿತ್ತು. ಆಗಿನ ನನ್ನ ಸಂಗೀತದ ತಿಳಿವಳಿಕೆ ಗ್ರಹಿಕೆಗಳು ಅಷ್ಟಾಗಿ ಇರದೇ ಇದ್ದರೂ ಒಂದು ವಿಶಿಷ್ಟ ಛಾಪು ಮನದಲ್ಲಿ ಮೂಡಿತು. ಆನಂತರ ಕೆಲವು ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾದ ಕಾರ್ಯಕ್ರಮಗಳಲ್ಲಿ ಅವರ ವಾದನ ಕೇಳಿದ್ದು ಬಿಟ್ಟರೆ, ‘ಆಗಂತುಕ’ ಸಿನೆಮಾದಲ್ಲಿ ಅವರ ಸಂಗೀತ ಸಂಯೋಜನೆ – ಇವಿಷ್ಟು ನನಗೆ ಲಭಿಸಿದ್ದು.
೨೦೦೦ ಇಸವಿಯಲ್ಲಿ ನಾನು ಬೆಂಗಳೂರಿಗೆ ಬಂದಾದ ಮೇಲೆ ನನ್ನ ಮಿತ್ರ ಡಾ. ಉದಯರಾಜ್ ಕರ್ಪೂರ ಅವರ ಜೊತೆ ಪಂ. ತಾರಾನಾಥರ ಮನೆಗೆ ಹೋಗುವ ಅವಕಾಶ ಲಭಿಸಿತು. ಮೊದಲ ಭೇಟಿಯಲ್ಲೇ ಅವರ ವ್ಯಕ್ತಿತ್ವ ನನ್ನ ಮನಸ್ಸನ್ನು ಇನ್ನಿಲ್ಲದಂತೆ ಆವರಿಸಿತು. ತುಂಬಾ ಪ್ರೀತಿ, ಆದರಗಳಿಂದ ಮಾತನಾಡಿ ನನ್ನ ಸಂಗೀತಾಭ್ಯಾಸ, ತಯಾರಿಯ ಪೂರ್ವಾಪರಗಳನ್ನು ವಿಚಾರಿಸಿದರು. ಅನೇಕ ಬಾರಿ ಅವರ ಖಾಸಗಿ ರಿಯಾಜ್ಗೆ ಸಾಕ್ಷಿಯಾಗಲು ಅವಕಶ ಸಿಕ್ಕಿತು. ಪ್ರತೀ ಭೇಟಿಯಲ್ಲೂ ಮಾತು, ಸಂಗೀತ, ರಿಯಾಜ್, ಊಟ- ತಿನಿಸು, ಮೌನ, ಹರಟೆ, ನಗು, ವಿಷಾದ, ಹಳೆಯ ನೆನಪುಗಳಲ್ಲಿ ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದರು.
ವಿಶೇಷವಾಗಿ ತಮ್ಮ ಗುರುಗಳಾದ ಉಸ್ತಾದ್ ಅಲಿ ಅಕ್ಬರ್ ಖಾನ್ ಸಾಹೇಬರ ಕುರಿತಾಗಿ ಅಸಂಖ್ಯಾ ಸಂಗತಿಗಳನ್ನು, ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರು. ತಮ್ಮ ಗುರುಭಕ್ತಿ, ವಾದ್ಯ- ವಾದನದೊಂದಿಗಿನ ತಾದಾತ್ಮ್ಯ. ನಿತ್ಯ ಶೋಧನೆ – ಅನ್ವೇಷಣೆಯ ತವಕ, ಸಂಗೀತದ ಕುರಿತಾದ ಬದ್ಧತೆ – ಸೌಂದರ್ಯ ದೃಷ್ಟಿಗಳಿಂದ ಅವರ ವ್ಯಕ್ತಿತ್ವ ನಿರುಪಮವಾಗಿ ಕಂಡಿತು.
ಸಂಗೀತವನ್ನು ಗ್ರಹಿಸುವುದು ಮತ್ತು ಅದನ್ನು ನೋಡುವುದು, ಅಷ್ಟೇ ಅಲ್ಲ; ಜೀವನಾನುಭವಗಳನ್ನು ಸಂಗೀತಕ್ಕೆ ಸಮನ್ವಯಿಸುವುದು ಮುಂತಾದವುಗಳಲ್ಲಿ ಅವರ ವಿಚಾರಗಳು ವಿಶಿಷ್ಟವೆನಿಸಿತು. ವಾದನದಲ್ಲಿಯಂತೂ ನಾದ, ಸ್ವರ ಪುಂಜ, ರಾಗವಿಸ್ತಾರ, ಲಯಕಾರಿ ತಂತ್ರಗಾರಿಕೆ, ಅಭಿವ್ಯಕ್ತಿ – ಪ್ರತಿಯೊಂದರಲ್ಲೂ ತಮ್ಮ ಗುರುಗಳ ಹೆಜ್ಜೆ ಗುರುತುಗಳನ್ನು ತೋರ್ಪಡಿಸುತ್ತಾ, ತಮ್ಮ ಸ್ವಂತಿಕೆಯನ್ನೂ ಮೆರೆಯುತ್ತಿದ್ದರು. ಅನೇಕ ಸಾರಿ ಸರೋದವೇ ಮೂರ್ತಿವೆತ್ತಂತೆ ಕಾಣುತ್ತಿದ್ದರು. ಅವರ ನಿಧನದ ಸುದ್ದಿ ಕೇಳಿದ ಮನಸು ಕೆಳಕಂಡ ಸಾಲುಗಳನ್ನು ಹೇಳಿಕೊಂಡಿತು: ರೋದಿಸುವ ಸರೋದದ ಸ್ವಗತ- ಇನ್ನೆಲ್ಲಿ ಹುಡುಕಲಿ ಮೀಟುವ ಆಪ್ಯಾಯತೆ, ತಂತಿಯ ತೀಡುವ ನಿಖರತೆ, ಭೋರ್ಗರೆವ ನಾದವೊಮ್ಮೆ, ಮಂಜುಳ ನಿನಾದವೊಮ್ಮೆ , ಶಬ್ದ-ನಿಃಶಬ್ದಗಳ ಆಟದಲಿ ಮೂಡುವ ನಾದ ಸಾಕಾರ, ಭಾವ ನಿರಾಕಾರ





