ಇವರು ಬುಡಬುಡಿಕೆಯ ಕುನ್ನಪ್ಪ ಅಲಿಯಾಸ್ ಹನುಮಂತಪ್ಪ. ಕಳೆದ ಎರಡು ಮೂರು ವರ್ಷಗಳಿಂದ ಮೈಸೂರಿನ ಬೀದಿಗಳಲ್ಲಿ ಶಕುನ ಹೇಳುತ್ತ ನಡೆಯುತ್ತಿದ್ದಾರೆ. ಇರುಳ ಹೊತ್ತಲ್ಲಿ ಜಂಟಿಯಾಗಿ ಹಾಲಕ್ಕಿ ಶಕುನ, ಹಗಲು ಹೊತ್ತಲ್ಲಿ ಒಂಟಿಯಾಗಿ ಬುಡಬುಡಿಕೆಯ ಶಾಸ್ತ್ರ ಹೇಳುವುದು ಇವರ ತಲೆತಲಾಂತರದ ವೃತ್ತಿ. ಕಯ್ಯ ತುದಿಯ ಕರ್ಚೀಫಿಗೆ ಕಟ್ಟಿರುವ ಡಮರುಗದಲ್ಲಿ ನೆಲೆಸಿರುವ ತನ್ನ ಕುಲದೇವತೆಯಆಣತಿಯಂತೆ ನಡೆಯುವ ಇವರು ತಮ್ಮ ಶಾಸ್ತ್ರ ಹೇಳುವ ವಿದ್ಯೆಯನ್ನು ಹೊಟ್ಟೆಪಾಡಿಗೆ ಅಂತ ಅಂದುಕೊಂಡಿಲ್ಲ. ಒಂದು ಕಾಲದಲ್ಲಿ ಜಾನಪದ ವೈದ್ಯರಂತೆ, ಪಾರಂಪರಿಕ ಆಪ್ತ ಮನೋಸಲಹೆಗಾರರಂತೆ ಎಲ್ಲರ ಗೌರವ ಪಡೆದುಕೊಂಡೇ ಬದುಕುತ್ತಿದ್ದ ಇವರು ಈ ಕಾಲದಲ್ಲಿ ಹಲವರಿಗೆ ಪಳೆಯುಳಿಕೆಯಂತೆ, ಭಿಕ್ಷಾಟನೆಯವರಂತೆ ಕಾಣಿಸುತ್ತಾರೆ. ಆದರೆ ಇವರ ಮೂಲ ಇರುವುದು ಮಹಾಭಾರತದ ಕಾಲದ ಕೃಷ್ಣನ ಕಥೆಯಲ್ಲಿ ಎಂದು ಈ ಕಾಲದಲ್ಲಿ ಬದುಕುತ್ತಿರುವ ನಮಗೆ ಗೊತ್ತಿಲ್ಲ. ಬುಡಬುಡಿಕೆಯ ಹನುಮಂತಪ್ಪನವರಿಗೆ ಈ ಕುರಿತು ಬೇಸರವೂ ಇಲ್ಲ.