ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರು ಕೇವಲ ಆತ್ಮಸುಖಕ್ಕಾಗಿ ಬರೆದವರು. ಇವರ ಬರಹಗಳ ಘಮಲನ್ನು ನಾಡಿನುದ್ದಕ್ಕೂ ಕಾವ್ಯ ರಸಿಕರು ಅನುಭವಿಸಿದ್ದಾರೆ. ಆದರೆ ಇವರ ಬದುಕಿನ ಏಳುಬೀಳುಗಳನ್ನು ಕಂಡವರು ಬಹಳ ಕಡಿಮೆ. ಕೇವಲ ಕಂಡದ್ದು ಮಾತ್ರವಲ್ಲ; ಕಂಡು ಅನಭವಿಸಿದವರು ಕವಿಯ ಮಗ ಕೆ.ಎನ್.ಮಹಾಬಲ. ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರಾಗಿರುವ ಮಹಾಬಲ ಅವರ ಪುಸ್ತಕ ‘ನನ್ನ ಅಪ್ಪ ಕೆಎಸ್ನ’ ಇಂತಹ ಅಪರೂಪದ ನೆನಪುಗಳ ಹೊತ್ತಗೆ. (ಬಹುರೂಪಿ ಪ್ರಕಾಶನ ದೂರವಾಣಿ: ೭೦೧೯೧೮೨೭೨೯).
‘ಸೋಫಾದ ಕೆಳಗಿತ್ತು ವಾಕಿಂಗ್ ಸ್ಟಿಕ್’ ಎಂಬ ಬರಹದಲ್ಲಿ ಒಂದು ಪ್ರಸಂಗ ಬರುತ್ತದೆ. ಮೈಸೂರಿನಲ್ಲಿ ಮಹಾಬಲ ಅವರ ಮನೆಯಲ್ಲಿ ಕೆ. ಎಸ್.ನ ಅವರ ನಡಿಗೆ ಬೆತ್ತ ಮಿಸ್ ಆಗಿಹೋಯಿತು. ಮಹಾಬಲ ಅವರ ತಮ್ಮ ತಂದೆಗೆ ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಹಾದಿಯ ಚನ್ನಪಟ್ಟಣದಲ್ಲಿ ಮತ್ತೊಂದು ನಡಿಗೆ ಬೆತ್ತವನ್ನು ಕೊಡಿಸಿದರು. ಸರಿ ಆದರೆ ಕೆ.ಎಸ್.ನ ಅವರಿಗೆ ಇವರ ಮನೆಯಲ್ಲಿ ಉಳಿದುಬಿಟ್ಟ ವಾಕಿಂಗ್ ಸ್ಟಿಕ್ ಬಗೆಗೆ ಮೋಹ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ : ಕೇರಳದ ಸಂತೋಷ್ಕುಮಾರ್ ಹೆಸರು ತಳುಕು
ಏಕೆಂದರೆ ಅದು ಕೆ.ವಿ.ಸುಬ್ಬಣ್ಣನವರು ಪ್ರೀತಿಯಿಂದ ಕೆ.ಎಸ್.ನ, ಅವರಿಗೆ ಕೊಟ್ಟಿದ್ದು. ಆ ವಾಕಿಂಗ್ ಸ್ಟಿಕ್ ಸಿಕ್ಕರೂ ಮಹಾಬಲ ಅವರು ಅಪ್ಪನಿಗೆ ಸದಾ ಒಂದು ನೆಪ ಒಡ್ಡಿ ಕೊಡಲಿಲ್ಲ. ಕಾರಣ ಅದರ ಮೇಲೆ ಇವರಿಗೂ ಮೋಹ ಬೆಳೆದುಕೊಂಡಿತ್ತು. ಕೊನೆಗೂ ಕೆ.ಎಸ್.ನ. ಅವರು ಜಾರಿಬಿದ್ದು ಆಸ್ಪತ್ರೆಯಲ್ಲಿ ಇದ್ದಾಗಲೂ ಅದನ್ನು ನೆನಪು ಮಾಡಿಕೊಂಡು ತರಿಸಿಕೊಂಡೇಬಿಟ್ಟರು. ಆ ವಾಕಿಂಗ್ ಸ್ಟಿಕ್ ಮನೆಗೆ ಬಂದ ದಿನ ‘ಲೇ ವಾಕಿಂಗ್ ಸ್ಟಿಕ್ ಬಂತು’ ಎಂದು ಹರ್ಷಪಟ್ಟಿದ್ದರು. ಅಮ್ಮ, ಆಗಲಿ ಗಸಗಸೆ ಪಾಯಸ ಮಾಡೋಣ ಎಂದರು.
ಪಾಯಸಗಳಲ್ಲಿ ಗಸಗಸೆ ಪಾಯಸ ನಮ್ಮ ತಂದೆಯವರಿಗೆ ತುಂಬಾ ಇಷ್ಟವಾದದ್ದು. ನಮ್ಮ ತಂದೆಯವರು ನಿಧನರಾದ ಸಮಯದಲ್ಲೂ ಆ ವಾಕಿಂಗ್ ಸ್ಟಿಕ್ ವಿರಾಜಿಸುತ್ತಿತ್ತು ಎಂದು ಮುಗಿಯುವ ಆ ಬರಹ ನಮಗೇ ಗೊತ್ತಿಲ್ಲದೆ ಒಂದು ನಿಟ್ಟುಸಿರನ್ನು ತರುತ್ತದೆ.
(ಮಂಡ್ಯದ ಲೇಖಕಿ ಶುಭಶ್ರೀಪ್ರಸಾದ್ ಅವರ ಹೊಸ ಪುಸ್ತಕ ‘ಹೊತ್ತಗೆ ಹಿಡಿವ ಹೊತ್ತು’ ಕೃತಿಯಿಂದ. ಪ್ರಕಾಶಕರು: ಪರಿಚಯ ಪ್ರಕಾಶನ.ದೂರವಾಣಿ: ೯೯೧೬೮೯೪೪೧೭ )





