ಸೂರ್ಯ ಪುತ್ರ
ಆತನ ಹೆಸರು ದೀಪಕ್. ಮಲ್ಟಿ ನ್ಯಾಷನಲ್ ಕಂಪೆನಿ ಉದ್ಯೋಗಿ. ಕೇರಳದ ಕಣ್ಣೂರಿನ ರೈಲ್ವೇ ಸ್ಟೇಷನ್ ಪಕ್ಕದಿಂದ ಜನ ತುಂಬಿಕೊಂಡಿದ್ದ ಬಸ್ಸೊಂದನ್ನು ಹತ್ತುತ್ತಾನೆ. ಸರಿಯಾಗಿ ನಿಂತುಕೊಳ್ಳಲೂ ಜಾಗವಿಲ್ಲದ ಬಸ್ಸಿನಲ್ಲಿ ಹೇಗೋ ಅಡ್ಜಸ್ಟ್ ಮಾಡ್ಕೊಂಡು ನಿಂತಿದ್ದವನಿಗೆ ತನ್ನ ಬೆನ್ನ ಹಿಂದೆ ನಡೆಯುವ ಯಾವ ವಿಷಯವೂ ತಿಳಿದಿರಲಿಲ್ಲ. ಆತನಿಗೆ ತಾನು ಹೀಗೊಂದು ಅಪವಾದದಲ್ಲಿ ಸಿಲುಕಿದ್ದು ತಿಳಿದದ್ದೇ ವೈರಲ್ ಪೋಸ್ಟ್ ನೋಡಿದ ನಂತರ!
ದೀಪಕ್ನ ಹಿಂದೆ ನಿಂತಿದ್ದ ಶಿಂಜಿಯಾ ಮುಸ್ತಫ ಎನ್ನುವಾಕೆ ಆತನಿಗೆ ಅಂಟಿಕೊಂಡಂತೆ ನಿಂತು ೯೦ ಸೆಕೆಂಡಿನೊಳಗಿನ ವಿಡಿಯೋ ಒಂದನ್ನು ಮಾಡಿ ನಂತರ ಅದಕ್ಕೆ ‘ಲೈಂಗಿಕ ಕಿರುಕುಳದ ಕುರಿತು ಜಾಗೃತರಾಗಿ’ ಎಂದು ವಾಯ್ಸ್ ಓವರ್ ಕೊಟ್ಟು ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳುತ್ತಾಳೆ. ಅದು ಯಾವ ಪರಿಯಾಗಿ ವೈರಲ್ ಆಗುತ್ತದೆಯೆಂದರೆ ದೀಪಕ್ನ ಚಾರಿತ್ರ್ಯಹರಣ ಮಾಡುವಂತಹ ಕಮೆಂಟ್ಗಳು ಬರತೊಡಗುತ್ತವೆ. ಬಹಳಷ್ಟು ಜನರ ಜಾಲತಾಣದ ಖಾತೆಗಳಲ್ಲಿ ಹಂಚಿಕೆಯಾಗುತ್ತದೆ. ಈ ಅವಮಾನ ಸಹಿಸಿಕೊಳ್ಳಲಾಗದೆ ದೀಪಕ್ ನೇಣಿಗೆ ಶರಣಾಗುತ್ತಾನೆ.
ಕಾರಣ ತಿಳಿದಾಗ ಕೇರಳವನ್ನೂ ಸೇರಿಸಿಕೊಂಡಂತೆ ಇಡೀ ದೇಶದ ಜನತೆ ಶಿಂಜಿಯಾ ವಿರುದ್ಧ ತಿರುಗಿ ಬೀಳುತ್ತದೆ. ಆಕೆಯನ್ನು ಬಂಧಿಸುವಂತೆ ಸಾರ್ವಜನಿಕರು ಮನವಿ ಮಾಡುತ್ತಾರೆ. ಆಕೆಯನ್ನು ಬಂಽಸಿದ್ದೂ ಆಯಿತು. ಆದರೆ ‘ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬ ಗಾದೆ ಮಾತಿನಂತೆ ಶಿಂಜಿಯಾಳ ಕ್ರೀಪ್ ವಿಡಿಯೋ ದಾಹಕ್ಕೆ ಬಲಿಯಾಗಿದ್ದು ಮಾತ್ರ ದೀಪಕ್ ಎಂಬ ಮುಗ್ಧ ಜೀವ. ಕೇವಲ ಒಂದು ಕ್ರೀಪ್ ವಿಡಿಯೋದಿಂದ ಇಷ್ಟೆಲ್ಲ ಆಯಿತೇ ಎಂದು ಕೇಳಿದರೆ ಖಂಡಿತಾ ಹೌದು.
ಯಾಕೆಂದರೆ ಕ್ರೀಪ್ ವಿಡಿಯೋ ಹುಟ್ಟಿಸುವ ಮಾನಸಿಕ ಒತ್ತಡ, ಭಯದ ಪರಿಣಾಮ ಸಣ್ಣದೇನಲ್ಲ. ‘ಕ್ರೀಪ್’ ಎಂಬುದಕ್ಕೆ ಹರಡುವುದು ಎಂದರ್ಥವಿದ್ದು, ವೈರಲ್ ಮಾಡುವುದಕ್ಕಾಗಿಯೇ ಸೃಷ್ಟಿಸುವ ವಿಡಿಯೋಗಳೂ ಕ್ರೀಪ್ ವಿಡಿಯೋ ಸಾಲಿಗೆ ಸೇರುತ್ತದೆ. ಇಲ್ಲಿ ಹೇಳುವ ವಿಷಯದಲ್ಲಿ ಸತ್ಯ ಇರಲೇಬೇಕೆಂಬ ಕಟ್ಟುಪಾಡಿಲ್ಲ. ವಿಡಿಯೋವನ್ನು ಅತೀ ಹೆಚ್ಚು ಜನರು ವೀಕ್ಷಿಸುವುದಷ್ಟೇ ಉದ್ದೇಶವಾಗಿರುತ್ತದೆ. ಒಮ್ಮೆ ಇಂತಹ ವಿಡಿಯೋ ಪೋಸ್ಟ್ ಮಾಡಿಬಿಟ್ಟರೆ ಅಲ್ಲಿಗೆ ಕೆಲಸ ಮುಗಿಯಿತು. ನಂತರ ಜಾಲತಾಣಗಳಲ್ಲಿ ವಿಡಿಯೋ ವೀಕ್ಷಿಸುವವರು ಲೈಕ್ಸ್, ಕಮೆಂಟ್ಸ್, ಶೇರ್ ಮಾಡಿದಷ್ಟು ಜನಪ್ರಿಯತೆ ಹೆಚ್ಚುತ್ತಾ ಹೋಗುತ್ತದೆ. ಇಲ್ಲಿ ಜನಪ್ರಿಯತೆಯೇ ಮಾನದಂಡ!
ಇಂತಹ ಕ್ರೀಪ್ ವಿಡಿಯೋಗಳಿಂದ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಅನಾಹುತಗಳ ಪಟ್ಟಿ ಸಣ್ಣದೇನಲ್ಲ. ಶಿಂಜಿಯಾ ಮುಸ್ತಫ ಪ್ರಕರಣವನ್ನೇ ನೋಡುವುದಾದರೆ, ಸ್ತ್ರೀಪರ ಕಾನೂನುಗಳನ್ನು ದಾಳವನ್ನಾಗಿಸಿ ಜಾಗೃತಿ ಮೂಡಿಸುವ ನೆಪದಲ್ಲಿ ಗಂಡಿನ ಮಾನ ಹರಾಜಾಗಿದೆ. ಹೆಣ್ಣು ಗಂಡು ಸಮಾನರು ಎಂಬ ಕಾಲಘಟ್ಟದಲ್ಲಿ ನಾವಿರುವಾಗ ಮಾನಕ್ಕೂ ಸಮಬೆಲೆಯಿದೆ ಎಂಬುದನ್ನು ಮರೆಯುವಂತಿಲ್ಲ. ಹೆಣ್ಣಾಗಲಿ, ಗಂಡಾಗಲಿ ತಪ್ಪು ಯಾರೇ ಮಾಡಿದ್ದರೂ ಒಪ್ಪಿಕೊಳ್ಳುವುದು ಮನುಷ್ಯ ಧರ್ಮವಾಗುತ್ತದೆ
” ರೀಲ್ ಹುಚ್ಚಾಟಕ್ಕೆ ಗಂಭೀರ ವಿಚಾರವೊಂದರ ಎಳೆಯನ್ನು ಉಪಯೋಗಿಸಿಕೊಂಡರೆ ಏನಾಗಬಹುದು ಎಂಬುದಕ್ಕೆ ಒಂದು ನಿದರ್ಶನ ಇತ್ತೀಚೆಗೆ ಕೇರಳದ ಕಣ್ಣೂರಿನಲ್ಲಿ ನಡೆದ ಪ್ರಕರಣ.”





