Mysore
15
clear sky

Social Media

ಭಾನುವಾರ, 18 ಜನವರಿ 2026
Light
Dark

ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ಸಿಎಂ-ಡಿಸಿಎಂ ಸೇರಿ ಹಲವು ಗಣ್ಯರಿಂದ ಸಂತಾಪ

ಬೆಂಗಳೂರು : ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. ಸ್ಪಂದನಾ ಅವರು ಬ್ಯಾಂಕಾಕ್‌ಗೆ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಯೇ ಅವರಿಗೆ ಲೋ ಬಿಪಿಯಿಂದಾಗಿ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು, ಸ್ಪಂದನಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಸಿಎಂ ಸಿದ್ದರಾಮಯ್ಯ, ಸ್ಪಂದನಾ ಅವರ ನಿಧನ ಆಘಾತವನ್ನು ಉಂಟುಮಾಡಿದೆ ಎಂದಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ಅವರು, ‘ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಕಾಲಿಕ ನಿಧನದ ವಾರ್ತೆ ಆಘಾತವನ್ನು ಉಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಸ್ಪಂದನಾ ಅವರ ಅಗಲಿಕೆಯಿಂದ ನೊಂದಿರುವ ವಿಜಯ ರಾಘವೇಂದ್ರ ಹಾಗೂ ಬಿ ಕೆ ಶಿವರಾಂ ಅವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಹೇಳಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಹೀಗಾಗಿದ್ದು ನೋವು ತಂದಿದೆ-ಡಿಕೆಶಿ

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಕ್ಕೆ ಡಿಸಿಎಂ‌ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಹಳ ಚಿಕ್ಕ ವಯಸ್ಸು ಇಷ್ಟು ವಯಸ್ಸಲ್ಲಿ ಹೀಗಾಗಿದ್ದು ಬಹಳ ದುಃಖ ಆಗಿದೆ. ಭಗವಂತ ಏಕೆ ಹೀಗೆ ಮಾಡಿದನೋ ಗೊತ್ತಾಗ್ತಿಲ್ಲ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ. ಚುನಾವಣೆಯಲ್ಲಿ ಅವರ ಸಹೋದರ ನಮ್ಮ ಪಕ್ಷದ ಅಭ್ಯರ್ಥಿ ಆಗಿದ್ದರು. ಅವರ ತಂದೆಯೂ ಅಭ್ಯರ್ಥಿ ಆಗಿದ್ರು. ಅವರ ಪಾರ್ಥಿವ ಶರೀರ ತರುವ ವಿಚಾರದಲ್ಲಿ ಏನು ಮಾಡಬೇಕೋ ಎಂದು ನೋಡೋಣ ‘ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

‘ಕೋವಿಡ್ ಬಳಿಕ ಸಾವು ನೋವು ಹೆಚ್ಚಾಗ್ತಿದೆ’- ಎಚ್‌ಡಿಕೆ

‘ಕೋವಿಡ್ ಬಳಿಕ ಇಂತಹ ಸಾವು ನೋವುಗಳು ಹೆಚ್ಚಾಗುತ್ತಿವೆ’ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ನಿಧನ ಹಿನ್ನಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿ ಮಾತನಾಡಿದ್ದಾರೆ. ‘ವಿದೇಶ ಪ್ರವಾಸದಲ್ಲಿ ಹೃದಯಾಘಾತ ಆಗಿದ್ದು, ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿರೋದು ಎಲ್ಲರಿಗೂ ಆಘಾತಕಾರಿ. ಆರೋಗ್ಯಯುತವಾಗಿ ಇದ್ದರು, ಯಾರೂ ಕೂಡ ನಿರೀಕ್ಷೆ ಮಾಡಿಲ್ಲ. ಕುಟುಂಬ ಸಹ ನಿರೀಕ್ಷೆ ಮಾಡಿರಲ್ಲಿಲ್ಲ. ಇತ್ತೀಚಿನ ದಿನಗಳಲ್ಲಿ ಕೋವಿಡ್ ನಂತರ ಅಪಾರ ಸಾವು ನೋವು ಆಗ್ತಾ ಇದೆ‌.
ಅದರಲ್ಲೂ ಕೋವಿಡ್ ನಂತರ ಎಲ್ಲರ ಮೇಲೂ ಪರಿಣಾಮ ಬೀರಿದೆ. ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಮಾಜಿ ಸಿಎಂ ಬೊಮ್ಮಾಯಿ ಸಂತಾಪ

ಸ್ಪಂದನಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಕನ್ನಡದ ಖ್ಯಾತ ಚಲನಚಿತ್ರ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಮೃತರ ಆತ್ಮಕ್ಕೆ ಆ ದೇವರು ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ‌. ನಟ ವಿಜಯ ರಾಘವೇಂದ್ರ ಹಾಗೂ ಬಿ ಕೆ ಶಿವರಾಮ್ ಕುಟುಂಬಕ್ಕೆ ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿ ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ‌’ ಅಂತ ಟ್ವೀಟ್ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!