Mysore
21
overcast clouds

Social Media

ಶನಿವಾರ, 06 ಜೂನ್ 2026
Light
Dark

ಪ್ರವಾಸಿ ಕಂಡ ಅರಮನೆ ನಗರಿ ; ಪಕ್ಕದ ಕೊಡಗಿನ ಯುವಕನ ಮೈಸೂರು ಡೈರಿ

ಮೈಸೂರಿಗೊಂದು ಆಕರ್ಷಣೆಯಿದೆ. ದಸರಾ ಬಂತೆಂದರೆ ಇದು ದುಪ್ಪಟ್ಟಾಗುತ್ತದೆ. ವಿದೇಶಿಗಳು, ದೇಶಿಯರು, ನೆರೆಹೊರೆಯವರೆಲ್ಲಾ ಪ್ರವಾಸಿಗರಾಗಿ ಮೈಸೂರನ್ನು ಸುತ್ತು ಹಾಕುತ್ತಾರೆ. ಇಲ್ಲಿನ ಸೆಳೆತಕ್ಕೆ ಮನಸೋಲುತ್ತಾರೆ. ಇಂತಿಪ್ಪ ಮೈಸೂರನ್ನು ಪಕ್ಕದ ಕೊಡಗಿನ ಯುವಕನೊಬ್ಬ ಸುತ್ತುಹಾಕಿ ತನ್ನ ಅನುಭವ ದಾಖಲಿಸಿದ್ದಾನೆ ಇಲ್ಲಿ.

– ಚಂದನ್ ನಂದರಬೆಟ್ಟು, ಕೊಡಗು

ಅಲೆಮಾರಿ ಸುತ್ತಾಟದಲ್ಲಿ ಸಿಗುವ ಖುಷಿ ಯೋಜಿತ ಪ್ರವಾಸದಲ್ಲಿ ದಕ್ಕದು ಎಂದುಕೊಂಡವ ನಾನು. ಇದರಿಂದಾಗಿಯೇ ಬೇಬಿನ ಭಾರ, ಸಮಯದ ಲಭ್ಯತೆ ನೋಡಿಕೊಂಡು ದಾರಿ ಕಂಡಲ್ಲಿ ಜಿಗಿಯುವೆ. ಅದೇ ರೀತಿ ಈ ಭಾರಿ ಮೈಸೂರು ನನ್ನ ಆಯ್ಕೆಯಾಗಿ, ಅಲ್ಲೆಲ್ಲಾ ಸುತ್ತಾಡಿ ಬಂದೆ. ಮನಸ್ಸೂ ತುಂಬಿತು, ಮೈಸೂರಿನ ಬೆರಗು ನನ್ನೊಳಗೂ ಇಳಿಯಿತು. ಮೈಸೂರು ಎನ್ನುವ ಹೆಸರೇ ನನ್ನ ಪಾಲಿಗೆ ರೋಮಾಂಚನ. ಹಿರಿದಾದ ಸಾಲುಮರಗಳ ನಡುವಿನ ರಸ್ತೆ, ಬದಿಯ ಬೀದಿ ದೀಪಗಳು, ಕಿರು ಅಂಗಡಿಗಳು, ವಿಶಾಲ ಅರಮನೆ, ಮುಂದಿನ ಜಟಕಾಬಂಡಿಗಳು ಹೀಗೆ ಹೇಳುತ್ತಾ ಹೋದರೆ ಬರಿ ಸೊಬಗೇ.\

ಜಟಕಾ ಕುದುರೆಯನೇರಿ

ಮಡಿಕೇರಿಯಿಂದ ಯಾವ ಯೋಜನೆಗಳೂ ಇಲ್ಲದೆ, ಬೆಳಗ್ಗೆದ್ದು ಹೊಲಕ್ಕೆ ಹೊರಟಂತೆ ಹೊರಟು ಮೈಸೂರು ತಲುಪಿ ಕಣ್ಣು ಕಣ್ಣು ಬಿಡುವಾಗ ಭಯ್ಯಾ ಭಯ್ಯಾ ಎಂಬ ಸದ್ದಾಯಿತು. ಕಣ್ಣಗಲ ಮಾಡಿ ಹಿಂತಿರುಗಿದರೆ ಸುಮಾರು ಎಪ್ಪತ್ತೈದು ವರ್ಷದ ಆಸಾಮಿ. ನಮಸ್ಕಾರ ಭಯ್ಯಾ ಬನ್ನಿ ಕುದುರೆ ಗಾಡಿಗೆ ಬನ್ನಿ. ಮೈಸೂರು ತೋರಿಸುತ್ತೇನೆ ಎಂದರು. ಎಷ್ಟಾಗಬಹುದೋ ಏನೋ ಎಂಬ ಗೊಂದಲ, ಆತಂಕದಲ್ಲಿಯೇ ಇರಲಿ ಒಂದು ಚೆಂದದ ಅನುಭವಕ್ಕೆ ಇದು ಬಾಗಿಲಾಗುವುದಾದರೆ ಏಕೆ ಏರಬಾರದು ಎಂದು ಜಟಕಾ ಹತ್ತಿ ಕುಳಿತೆ. ಒಳಗಿದ್ದ ರಿಯಾಜ್ ಪಾಷಾಗೂ ನನಗೂ ಮೊದಲೇ ನಂಟಿತ್ತೆನೋ ಎಂಬಂತೆ ಆತ್ಮೀಯವಾಗಿ ಅವರು ಮಾತನಾಡುತ್ತಾ ಸ್ಥಳಗಳ ಪರಿಚಯ ಮಾಡುತ್ತಾ ಹೊರಟರು. ಹೊಸಬರಿಗೆ, ತಿಳಿಯಬೇಕು ಎನ್ನುವವರಿಗೆ ಈ ಸವಾರಿ ನಿಜಕ್ಕೂ ಭಾರವಾಗದು ಎಂದು ತಕ್ಷಣಕ್ಕೇ ಅನ್ನಿಸಿ ಗಾಡಿ ಏರಿದ್ದು ಸಾರ್ಥಕ ಎನ್ನಿಸಿತು. ಜೊತೆಗೆ ಅವರ ಪಾಷಾ ಅವರು ಈ ಹಿಂದೆ ನಮ್ಮ ಮಡಿಕೇರಿ ತಾಲ್ಲೂಕಿನ ಕಾಲೂರು ಎನ್ನುವಲ್ಲಿ ಈ ಹಿಂದೆ ಇದ್ದರು ಎನ್ನುವುದನ್ನು ಕೇಳಿ ನಿಜಕ್ಕೂ ಇವ ನಮ್ಮವ ಇವ ನಮ್ಮವ ಎನ್ನಿಸಿತ್ತು.

ನಂತರದ ಪ್ರವೇಶ ಅರಮನೆ, ಪ್ರಾಣಿ ಸಂಗ್ರಹಾಲಯ, ಸುತ್ತಮುತ್ತಲ ಬಯಲು, ಆಲಯ. ಅರಮನೆಯ ವಾಸ್ತುಶಿಲ್ಪಗಳ ಸೌಂದರ್ಯ, ರಾಜಾಲಯ, ಕೊಠಡಿಗಳು, ಸಭಾನಿಲಯ ಇವೆಲ್ಲವನ್ನೂ ಕಂಡ ನಾನು ಅಂದಿನ ಆಡಳಿತ ಎಷ್ಟು ವೈಭವದಿಂದ ಕೂಡಿದ್ದಿರಬಹುದು ಎನ್ನುವ ಲೆಕ್ಕ ಹಾಕುವುದಕ್ಕೇ ಕೆಲ ಸಮಯ ತೆಗೆದುಕೊಂಡೆ.

ಅಲ್ಲಿಂದ ಮುಂದೆ ಕೆಆರ್‌ಎಸ್ ಕಡೆ ಮುಖ ಮಾಡಿ ಅಲ್ಲಿನ ಹಸಿರ ಹಾಸಿನ ಮೇಲೆ ನಿಂತು ನೀರಿನ ನರ್ತನ, ಬಣ್ಣ ಬಣ್ಣದ ಪುಷ್ಪ ಸಂಕುಲ, ಪ್ರವಾಸಿಗರ ಉತ್ಸಾಹ, ಅಣೆಕಟ್ಟೆಯ ಹಿಂದಿನ ಇತಿಹಾಸ ಇವುಗಳೆಲ್ಲಾ ಮನ, ಮಂದಿರಗಳಲ್ಲಿ ಹಾದು ಹೋಗುತ್ತಾ ಮನಸ್ಸು ತಣಿಸಿದವು.

ಊಟಿ ಕಡೆಗೆ ಪ್ರಯಾಣ

ಅಲ್ಲಿಂದ ಮುಂದೆ ಏನು ಮಾಡುವುದೆಂದು ಅರಿಯದೆ ಸುಮ್ಮನೆ ಚಹಾ ಕುಡಿಯುತ್ತಾ ಕುಳಿತವನನ್ನು ಅದೇ ಹಾದಿಯಲ್ಲಿ ಸಾಗಿ ಹೋದ ಊಟಿಯ ಕೆಂಪು ಬಸ್ಸು ಹೊಸ ಹಾದಿ ತೋರಿತು. ಅದನ್ನೇ ಗುರಿಯಾಗಿಸಿಕೊಂಡು ರಿಕ್ಷಾ ಬಳಸಿ ಬಂಡೀಪುರ ಮಾರ್ಗ ಹಿಡಿದೆ. ಅದೇ ಹಾದಿಯಲ್ಲಿ ಸಿಕ್ಕ ಒಂದು ಚಿಕ್ಕ ನಗರದಲ್ಲಿ ಸಂಜೆಯ ಚಳಿಗೆ ಮತ್ತೊಂದು ಚಹಾ ಕುಡಿಯಬೇಕಾಯ್ತು. ನಂತರ ಟೆಂಪೋ ಏರಿ ಮತ್ತೊಂದು ಪಟ್ಟಣದಲ್ಲಿ ಇಳಿದಾಗ ಸಂಜೆಯ ಕಾರ್ಮೋಡ ಕವಿದಿತ್ತು. ಅಲ್ಲಿೆುೀಂ ಸ್ಥಳೀಯ ಲಾಡ್ಜ್ ನಲ್ಲಿ ಬಾಡಿಗೆ ಕೋಣೆ ಹಿಡಿದೆ. ರಾತ್ರಿ ಕಳೆದು ಮರುದಿನ ಲಾರಿಗೆ ಕೈ ಒಡ್ಡುವ ಮೂಲಕ ಪ್ರಯಾಣ ಆರಂಭವಾಯಿತು. ಲಾರಿಯೊಳಗೆ ಬೀಡಿ ಎಳೆಯುತ್ತಿದ್ದ ಚಾಲಕ ನನ್ನ ಮುಖ ನೋಡಿ ಹೆಸರೇನೆಂದು ತಮಿಳಿನಲ್ಲಿ ಕೇಳಿದರು. ನಾನು ನನ್ನ ಹೆಸರು ಹೇಳಿದೆ. ಮತ್ತೆ ಅವರೇ ಮಾತನಾಡಿ, ಬೀಡಿಯ ಹೊಗೆ ಆಗುವುದಿಲ್ಲವೇ ಎಂದು ಕೇಳಿ ನಾನು ಉತ್ತರಿಸುವ ಮುನ್ನವೇ ಹೊರಗೆಸೆದರು. ಚಾಲಕ ಸಭ್ಯಸ್ಥ ಎನಿಸಿತು ಮೊದಲ ನೋಟಕ್ಕೇ. ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ನಡುವಿನ ರಸ್ತೆಯಲ್ಲಿ ಮೂವತ್ತು ಕಿ.ಮೀ. ವೇಗದಲ್ಲಿ ಲಾರಿ ಚಲಿಸುತ್ತಿತ್ತು. ಚಾಲಕನ ಹೆಸರು ಮುರುಗನ್. ಲಾರಿಯ ಒಳಗೇ ಇವರ ವಾಸ. ಅದೇ ಮನೆ, ನಿಜಕ್ಕೂ ಇವರ ಬದುಕು ಬೆರಗಾಗಿಸುವಂತದ್ದು. ಪರಸ್ಪರ ಮಾತುಕತೆ ನಡೆಯುತ್ತಿರುವಾಗಲೇ ಗಮ್ಯ ಸಮೀಪಿಸಿತ್ತು. ಊಟಿ ಸೇರಿಯಾಗಿತ್ತು.

ಊಟಿಯಲ್ಲಿ ಬೈಕ್ ಏರಿ

ಇಲ್ಲೇನು ಮಾಡುವುದು ಎಂದುಕೊಂಡಿದ್ದ ನಾನು ಅಲ್ಲಿಯೇ ಇದ್ದ ಬಾಡಿಗೆ ಬೈಕ್‌ಅನ್ನು ಒಂದು ದಿನದ ಮಟ್ಟಿಗೆ ಪಡೆದು ಪ್ರಯಾಣಕ್ಕೆ ಚುರುಕು ಮುಟ್ಟಿಸಿದ್ದೆ. ಯಮಹಾ ಎಫ್ ಝೆಡ್ ಸವಾರಿ ಮಾಡುತ್ತಾ, ರಸ್ತೆಯ ಮೇಲೆ ಮಲಗಿದ್ದ ಹಸಿರು, ತಂಪಾಗಿ ಮೈ ಸವರುತ್ತಿದ್ದ ತಂಗಾಳಿಗಳನ್ನು ತುಂಬಿಕೊಳ್ಳುತ್ತಾ, ಕಡಿದಾದ ತಿರುವುಗಳಲ್ಲಿ ಹಾದು ಊಟಿಯ ಮೇಲೇರಿದೆ. ಅಲ್ಲಿನ ಮೈ ಕೊರೆಯುವ ಚಳಿ ಕೊಡಗಿನವನಾದ ನನ್ನನ್ನೂ ಕೊಂಚ ನಡುಗಿಸಿತು. ಅಲ್ಲೊಂದು ಕಪ್ ಕಾಫಿ ಹೀರಿ ಗೂಗಲ್ ಮ್ಯಾಪ್ ಬೆನ್ನು ಬಿದ್ದು ಬೊಟಾನಿಕಲ್ ಗಾರ್ಡನ್ ಸೇರಿದೆ. ಅಲ್ಲಿನ ಸುಂದರ ದೃಶ್ಯಗಳು, ಹೋಗಳ ಹೊಳಪು, ಸುಗಂಧ ಈಗಲೂ ನನ್ನೊಳಗೆ ಇಳಿದು ಮಾತನಾಡುತ್ತಿರುವಂತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!