ಸಮರ್ಪಕ ರಸ್ತೆ ಇಲ್ಲ, ವಾಹನ ಸೌಲಭ್ಯವಿಲ್ಲ, ಶುದ್ಧ ನೀರಿಗೂ ತತ್ವಾರ; ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಲು ಆಗ್ರಹ
ಮಹಾದೇಶ್ ಎಂ.ಗೌಡ
ಹನೂರು: ಗ್ರಾಮಕ್ಕೆ ಸಮರ್ಪಕ ರಸ್ತೆ ಇಲ್ಲ, ರಸ್ತೆ ಇಲ್ಲದೆ ವಾಹನ ಸಂಚಾರವಿಲ್ಲ, ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ… ಇದು ತಾಲ್ಲೂಕಿನ ಮೆದಗನಾಣೆ ಗ್ರಾಮದ ನಿವಾಸಿಗಳು ಪ್ರತಿದಿನ ಎದುರಿಸುತ್ತಿರುವ ಸಮಸ್ಯೆಯ ಚಿತ್ರಣ.
ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಮೆದಗನಾಣೆ ಗ್ರಾಮದಲ್ಲಿ ಕನಿಷ್ಠ ಮೂಲಸೌಲಭ್ಯಗಳು ಇಲ್ಲದೆ ಗ್ರಾಮಸ್ಥರು ಪ್ರತಿನಿತ್ಯ ಪರಿತಪಿಸುತ್ತಿದ್ದಾರೆ. ಸರ್ಕಾರದ ಶಕ್ತಿ, ಗೃಹಜ್ಯೋತಿ ಯೋಜನೆಗಳು ಈ ಗ್ರಾಮಕ್ಕೆ ಮರೀಚಿಕೆಯಾಗಿವೆ. ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ತಲಾ ಹತ್ತು ಕೆಜಿ ಅಕ್ಕಿ ವಿತರಣೆ ಮಾಡುತ್ತಿದೆ. ಅದರಂತೆ ಮೆದಗನಾಣೆ ಗ್ರಾಮಸ್ಥರಿಗೂ ನೀಡಲಾಗುತ್ತಿದೆ. ಆದರೆ, ಈ ಅನ್ನಭಾಗ್ಯದ ಪಡಿತರ ಅಕ್ಕಿ ಪಡೆಯಲು 5 ಕಿ.ಮೀ. ದೂರದಲ್ಲಿರುವ ಮಲೆ ಮಹದೇಶ್ವರ ಬೆಟ್ಟದ ನ್ಯಾಯಬೆಲೆ ಅಂಗಡಿಗೆ ತೆರಳಿ ತರಬೇಕಿದೆ.
ಮೆದಗನಾಣೆ ಗ್ರಾಮಕ್ಕೆ ಯಾವುದೇ ವಾಹನದ ಸೌಲಭ್ಯ ಇಲ್ಲ. ಈ ನಿವಾಸಿಗಳಿಗೆ ಮೂರು ವರ್ಷ ಕಳೆದರೂ ಶಕ್ತಿ ಯೋಜನೆ ತಲುಪಿಲ್ಲ. ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಹಲವಾರು ವರ್ಷಗಳ ಹೋರಾಟದ ನಂತರ 3 ದಿನಗಳ ಹಿಂದೆ ವಿದ್ಯುತ್ ಸಂಪರ್ಕ ನೀಡಲಾಗಿದೆ.
ಸರ್ಕಾರ ಪ್ರತಿಯೊಂದು ಕುಟುಂಬಕ್ಕೂ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದೆ. ಗ್ರಾಮಕ್ಕೆ ಇದೀಗ ವಿದ್ಯುತ್ ಸಂಪರ್ಕ ಕಲ್ಪಿಸಿರುವುದರಿಂದ ಗೃಹಜ್ಯೋತಿ ಯೋಜನೆ ಈ ಗ್ರಾಮಸ್ಥರಿಗೆ ತಲುಪಿಲ್ಲ.
ಕುಡಿಯಲು ಸಮರ್ಪಕ ನೀರಿಲ್ಲ
ಮೆದಗನಾಣೆ ಗ್ರಾಮದಲ್ಲಿ ಜಲ್ ಜೀವನ್ ಯೋಜನೆ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಸಮರ್ಪಕ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ತೆರೆದ ಬಾವಿಯ ನೀರನ್ನು ಬಳಸು ತಿದ್ದಾರೆ. ಸಮರ್ಪಕ ಮಳೆಯಾಗದೆ ಇರುವ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿತ್ತು.ಬಾವಿಯಲ್ಲಿ ನೀರು ಬತ್ತಿದರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಈ ಈ ಗ್ರಾಮಕ್ಕೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕೆಂಬ ಆಗ್ರಹ ಕೇಳಿಬಂದಿದೆ.
ಒಟ್ಟಾರೆ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಿಗೆ ಸರ್ಕಾರ ಕೂಡಲೇ ವಿಶೇಷ ಅನುದಾನ ನೀಡಿ ಅಗತ್ಯ ಮೂಲಸೌಲಭ್ಯ ಒದಗಿಸಬೇಕು ಎಂದು ನಿವಾಸಿಗಳು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಹಿಂದೆ ಗ್ರಾಮಕ್ಕೆ ಆಗಮಿಸಿ ಪಡಿತರ ವಿತರಣೆ ಮಾಡಲಾಗುತ್ತಿತ್ತು. 2 ತಿಂಗಳುಗಳಿಂದ ಪಡಿತರ ವಾಹನ ಬಾರದೆ ಇರುವುದರಿಂದ ಮ.ಬೆಟ್ಟಕ್ಕೆ ನಡೆದುಕೊಂಡು ಹೋಗಿ ತರಬೇಕಿದೆ. ಆಹಾರ ನಾಗರಿಕ ಸರಬರಾಜು ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಪಡಿತರ ಅಕ್ಕಿಯನ್ನು ಗ್ರಾಮದಲ್ಲಿಯೇ
ವಿತರಿಸಬೇಕು. • ಪ್ರವೀಣ್ ಕುಮಾರ್, ಆದಿವಾಸಿ ಸಮುದಾಯದ ಮುಖಂಡ, ವಕೀಲ
ಮೆದಗನಾಣೆ ಗ್ರಾಮದಲ್ಲಿಯೇ ಪ್ರತಿ ತಿಂಗಳು ಪಡಿತರ ಅಕ್ಕಿ ವಿತರಣೆ ಮಾಡಲಾಗುತ್ತಿತ್ತು. ಆದರೆ ಕಾರಣಾಂತರದಿಂದ ಏಪ್ರಿಲ್ ತಿಂಗಳಿನಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಪಡಿತರ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ತೊಂದರೆಯಾಗದಂತೆ ಗ್ರಾಮದಲ್ಲಿಯೇ ಪಡಿತರ ವಿತರಿಸಲು ಕ್ರಮ ವಹಿಸಲಾಗಿದೆ.
• ವಿಷ್ಣುಮೂರ್ತಿ, ಆಹಾರ ನಿರೀಕ್ಷಕರು, ಹನೂರು ತಾ.





