Mysore
29
light rain

Social Media

ಬುಧವಾರ, 05 ಆಗಸ್ಟ್ 2026
Light
Dark

ನಮ್ಮ ಕಥೆ ಮುಗಿದೇ ಹೋಯ್ತು ಅಂದುಕೊಂಡಿದ್ದೆವು…

ಅಣ್ಣನ ಸ್ಮರಣೆಗೆ ಕಾರ್ಯಕ್ಕೆ ಹೋಗಿದ್ದವ ಬದುಕಿ ಬಂದ ರೋಚಕ ಕಥೆ

ಚಾಮರಾಜನಗರ: ಅಂದು ರಾತ್ರಿ ನೀರು ಜೋರಾಗಿ ಬಾಗಿಲಿಗೆ ಬಡಿಯುತ್ತಿತ್ತು. ಮನೆಯಲ್ಲಿ 8 ಜನರು ಇದ್ದೆವು. ನಮ್ಮ ಕಥೆ ಮುಗಿದೇ ಹೋಯಿತು ಅಂದುಕೊಂಡಿದ್ದೆವು ಎಂದು ತಾಲ್ಲೂಕಿನ ಮಂಗಲ ಗ್ರಾಮದ ಸ್ವಾಮಿ ಅವರು ಚೂರಲ್‌ಮಲಾದಲ್ಲಿ ನಡೆದ ಭೀಕರ ಘಟನೆ ಬಗ್ಗೆ ಹೇಳುತ್ತ ಕಣ್ಣೀರಾದರು.

ನಮ್ಮ ಅಣ್ಣನ ಸ್ಮರಣೆ ಕಾರ್ಯ ಇತ್ತು. ಎಲ್ಲಾ ವ್ಯವಸ್ಥೆ ಮಾಡಬೇಕು ಅಂತಾ ಐದು ದಿನಗಳ ಮೊದಲೇ ಚೂರಲ್‌ಲಾಗೆ ಹೋಗಿದ್ವಿ. ಆ ರಾತ್ರಿ ಸೇತುವೆ ಹೊಡೆದು ಹೋದ ಮೇಲೆ ನೀರು ನುಗ್ಗಿತು. ಅದು ತುಂಬಾ ಹಳೆ ಸೇತುವೆ. ನೀರು ಮನೆಯತ್ತ ನುಗ್ಗುತ್ತಿದ್ದಂತೆ ಮನೆಯಿಂದ ಹೊರಬಂದ ನಾವು ತಂತಿಗಳನ್ನು ಕಟ್ಟಿ ಅದರ ಸಹಾಯದಿಂದ ಮೇಲೆ ಬಂದು ಬಚಾವ್ ಆದೆವು. ನಾನು ಅಲ್ಲಿಂದ ತಪ್ಪಿಸಿಕೊಂಡು ಬರುವಾಗ ನನ್ನ ಹಾಗೂ ನನ್ನ ಮಗಳ ಕಾಲಿಗೆ ಗಾಯವಾಯಿತು. ಬೆಳಿಗ್ಗೆ ಹೋಗಿ ನೋಡಿದರೆ ಒಂದು ಕಡ್ಡಿಯೂ ಇರಲಿಲ್ಲ. ಕೂಲಿ ಮಾಡಿ 6 ಹಸುಗಳನ್ನು ಸಾಕಿದ್ದೆವು. ಅವೂ ಕೊಚ್ಚಿ ಹೋಗಿವೆ. ಊರೇ ಇಲ್ಲ ಅಂದ್ದೇಲೆ ದನಕರು ಎಲ್ಲಿ ಇರುತ್ತೆ ಹೇಳಿ ಎಂದು ನೊಂದು ನುಡಿದರು.

ಕೇರಳದ ಚೂರಲ್ ಮಲಾದಲ್ಲಿ ನೀರು ತುಂಬಿದೆ, ಎಲ್ಲರೂ ಕೊಚ್ಚಿಕೊಂಡು ಹೋಗಿದ್ದಾರೆಂದು ಕೇಳಿದಾಗ ಗಾಬರಿಯಾಗಿತ್ತು. ನಮ್ಮ ಮಾವ ಬೇರೆಯವರಿಂದ ನಮಗೆ ಕರೆ ಮಾಡಿಸಿ ‘ನಮಗೆ ಏನೂ ಆಗಿಲ್ಲ ಅಂತಾ ಹೇಳಿದ ಮೇಲೆ ನಾವು ನಿಟ್ಟುಸಿರು ಬಿಡುವಂತಾಯಿತು ಎಂದು ಸೊಸೆ ನಂದಿನಿ ಘಟನೆಯ ಸಂದರ್ಭವನ್ನು ನೆನಪಿಸಿಕೊಂಡರು.

ಗರ್ಭಿಣಿ ಪತ್ನಿ, ಗಂಡ ಕೈಹಿಡಿದುಕೊಂಡೇ ಕೊಚ್ಚಿ ಹೋದರು
ನಾವಿದ್ದ ಸ್ಥಳದಲ್ಲಿ ತುಂಬಾ ಜನರು ಕೊಚ್ಚಿ ಹೋಗಿದ್ದಾರೆ. ಈಗ 10ರಿಂದ 12 ಜನರು ಬದುಕಿದ್ದಾರಷ್ಟೆ. ನಮ್ಮ ಮನೆ ಪಕ್ಕದಲ್ಲಿ 9 ತಿಂಗಳ ಗರ್ಭಿಣಿ ಹಾಗೂ ಅವಳ ಗಂಡ ವಾಸವಿದ್ದರು. ಒಬ್ಬರಿಗೊಬ್ಬರು ಕೈ ಹಿಡಿದುಕೊಂಡೇ ಕೊಚ್ಚಿ ಹೋದರು. ಯಾರನ್ನು ಕೂಡ ರಕ್ಷಣೆ ಮಾಡಲೂ ಆಗಲಿಲ್ಲ ಎಂದು ಸ್ವಾಮಿ ಘಟನೆ ಬಗ್ಗೆ ವಿವರಿಸಿದರು.

 

Tags:
error: Content is protected !!