ಕಾಂಗೀರ ಬೋಪಣ್ಣ
ವಿರಾಜಪೇಟೆ : ಪುರಸಭೆ ವ್ಯಾಪ್ತಿಗೆ ಒಳಪಡುವ ೨ ಐತಿಹಾಸಿಕ ಕೆರೆಗಳು ಒತ್ತುವರಿಯಾಗಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಪುರಸಭೆಗೆ ನೋಟಿಸ್ ಜಾರಿ ಮಾಡಿದೆ.
ಗೌರಿ ಕೆರೆಯು ಐತಿಹಾಸಿಕ ಗೌರಿ-ಗಣೇಶೋತ್ಸವದ ವೇಳೆ ಮೂರ್ತಿಗಳ ವಿಸರ್ಜನೆಗೆ ಬಳಕೆಯಾಗುತ್ತಿದೆ. ಇನ್ನೊಂದು ರಾಜರ ಆಡಳಿತದಲ್ಲಿ ಅಂದು ದಣಿದು ಬರುವ ಜನರಿಗೆ ಛತ್ರ ನಿರ್ಮಿಸಿ ಪಕ್ಕದಲ್ಲಿ ಒಂದು ಕರೆ ಕಟ್ಟಿಸಲಾಗಿತ್ತು. ಅದೇ ಇಂದಿನ ಛತ್ರ ಕೆರೆಯಾಗಿ ಕರೆಯಲ್ಪಡುತ್ತಿದೆ. ಆದರೆ ಈ ಎರಡೂ ಕೆರೆಗಳು ಒತ್ತುವರಿಯಾಗಿರುವ ರೋಪ ಹಿಂದಿನಿಂದಲೂ ಕೇಳಿ ಬರುತ್ತಿದೆ.
ಈ ಸಂಬಂಧ ವಿರಾಜಪೇಟೆ ಸಾಮಾಜಿಕ ಕಾರ್ಯಕರ್ತ ಮಾಳೇಟಿರ ಕಾಳಯ್ಯ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದಾರೆ. ಖಾಸಗಿ ವ್ಯಕ್ತಿಗಳು ಐತಿಹಾಸಿಕ ಕೆರೆಗಳ ಜಾಗವನ್ನು ಕಬಳಿಕೆ ಮಾಡಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ೨ ಕೆರೆಗಳ ಒತ್ತುವರಿ ಸಂಬಂಧ ಸಮಗ್ರ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದೆ.
ಈ ಹಿಂದೆ ಪುರಸಭೆಯ ಆಡಳಿತ ಮಂಡಳಿಯ ಮಾಸಿಕ ಕಲಾಪದಲ್ಲಿ ಐತಿಹಾಸಿಕ ಗೌರಿ ಕೆರೆಯ ಜಾಗವನ್ನು ಪಕ್ಷವೊಂದರ ಪ್ರಮುಖ ಮತ್ತು ಪ. ಪಂ. ಹಿರಿಯ ಸದಸ್ಯರು ಒತ್ತುವರಿ ಮಾಡಿದ ಕುರಿತು ಭಾರೀ ಚರ್ಚೆ ನಡೆದಿತ್ತಲ್ಲದೆ, ಅವರು ಅದರ ಸರ್ವೆ ಕಾರ್ಯಕ್ಕೆ ಅಡ್ಡಿ ಪಡಿಸುತ್ತಿರುವ ಕುರಿತು ಇತರ ಸದಸ್ಯರು ಆಕ್ಷೇಪಿಸಿದ್ದರು. ಸರ್ವೆ ಸಂಖ್ಯೆ ೩೮ರಲ್ಲಿ ಆರ್ಟಿಸಿಯಲ್ಲಿ ೧. ೩೦ ಎಕರೆ ಜಾಗ ಇದ್ದರೂ ಅರ್ಧ ಭಾಗ ಒತ್ತುವರಿ ಆಗಿರುವ ಶಂಕೆ ಇದೆ. ಇದನ್ನು ತೆರವುಗೊಳಿಸಲು ಪುರಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತಾದರೂ ಬಳಿಕ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಅದೇ ರೀತಿ ರಾಜರ ಆಡಳಿತದಲ್ಲಿ ಕೊಳವಂಡ ಕುಟುಂಬದವರು ಆ ಕಾಲದಲ್ಲಿ ಛತ್ರ ಕೆರೆಯ ಸಮೀಪದಲ್ಲಿ ಛತ್ರದಲ್ಲಿ ಅನ್ನದಾನ ನಡೆಸುತ್ತಿದ್ದರು. ಈಗ ಕೆರೆಯ ಜಾಗವನ್ನು ಹಾಗೂ ಅದರ ಬಫರ್ ಜೋನ್ ಜಾಗವನ್ನು ಉಳ್ಳವರು ಒತ್ತುವರಿ ಮಾಡಿ ಮನೆ, ವಾಣಿಜ್ಯ ಸಂಕಿರಣ ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪಟ್ಟಣದ ಕೆರೆಗಳು ಒತ್ತುವರಿಯಾಗುತ್ತಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಪ್ರಾಧಿಕಾರದಿಂದ ಪುರಸಭೆಗೆ ನೋಟಿಸ್ ನೀಡಲಾಗಿದ್ದು, ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.





