Mysore
23
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಮಳೆ ಕೊರತೆ ನಡುವೆಯೂ ತರಕಾರಿ ಅಗ್ಗ

ದಿನೇಶ್ ಕುಮಾರ್ ಎಚ್.ಎಸ್.

ಮೈಸೂರು: ಮಳೆ ಕೊರತೆಯಿಂದ ಬರ ಪರಿಸ್ಥಿತಿ ನಡುವೆಯೂ ಕೆಂಪು ಸುಂದರಿ ಟೊಮ್ಯಾಟೋ ಬೆಲೆ ಪಾತಾಳಕ್ಕಿಳಿದಿದೆ. ಕಳೆದ ಕೆಲ ದಿನಗಳ ಹಿಂದೆ ೪೦ ರೂ. ಗಡಿ ದಾಟಿದ್ದ ಟೋಮ್ಯಾಟೋ ಬೆಲೆ ಇದೀಗ ಒಂದು ಕೆಜಿಗೆ ೧೦ ರೂ. ಗೂ ಕೇಳುವವರಿಲ್ಲದಂತಾಗಿದೆ. ಇದರ ಜೊತೆಗೆ ಸಾಕಷ್ಟು ತರಕಾರಿಗಳ ಬೆಲೆ ಇಳಿಕೆ ಕಂಡಿದ್ದು, ಗ್ರಾಹಕರ ಮೊಗದಲ್ಲಿ ಸಂತಸ ಮೂಡಿಸಿದೆ.

ಜಿಲ್ಲೆಯಾದ್ಯಂತ ಸಮರ್ಪಕವಾಗಿ ಮಳೆಯಾಗದಿದ್ದರೂ ಉಪ ಬೆಳೆಗಳಾದ ತರಕಾರಿ ಯನ್ನು ಬೆಳೆಯುವ ರೈತರಿಗೆ ನೀರಿನ ಕೊರತೆ ಅಷ್ಟಾಗಿ ಕಂಡುಬಂದಿಲ್ಲ. ಹೀಗಾಗಿ ಮಾರುಕಟ್ಟೆಗೆ ಬರುವ ತರಕಾರಿಗಳ ಪ್ರಮಾಣ ಕಡಿಮೆಯಾಗಿಲ್ಲ.

ಎರಡು ತಿಂಗಳ ಹಿಂದೆ ಇದ್ದ ಬೆಲೆಗಳು ಕಳೆದ ತಿಂಗಳು ಸ್ವಲ್ಪಮಟ್ಟಿಗೆ ಇಳಿಕೆಯಾಗಿ ಮತ್ತೆ ಏರಿಕೆಯನ್ನು ಕಂಡಿತ್ತು. ಕೆಲ ತರಕಾರಿ ಬೆಲೆಗಳು ಯಥಾಸ್ಥಿತಿಯನ್ನು ಕಾಯ್ದುಕೊಂಡಿರುವುದರಿಂದ ತರಕಾರಿ ಬೆಲೆಗಳು ಗ್ರಾಹಕರ ಕೈ ಸುಡುತ್ತಿಲ್ಲ.

ಸಾರ್ವಜನಿಕರು ಕೂಡ ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿ ನಿತ್ಯ ತರಕಾರಿ ಯನ್ನು ಬಳಸಲೇಬೇಕು. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ದೊರಕುವ ತರಕಾರಿಗೆ ಬೇಡಿಕೆ ಹೆಚ್ಚಾಗುತ್ತದೆ. ಆದರೆ ಮಾರುಕಟ್ಟೆಗೆ ಯಥೇಚ್ಛವಾಗಿ ಬಂದಿರುವ ಟೊಮ್ಯಾಟೋ ಬೆಲೆ ದಿಢೀರ್ ಕುಸಿತ ಕಂಡಿದೆ.

ಜಿಲ್ಲೆಯ ಹುಣಸೂರು, ಕೆ.ಆರ್.ನಗರ, ಬನ್ನೂರು, ಬೋಗಾದಿ, ಜಯಪುರ, ಪಿ.ಪಟ್ಟಣ, ಎಚ್.ಡಿ.ಕೋಟೆ ಮತ್ತಿತರ ಸ್ಥಳಗಳಿಂದ ಮೈಸೂರು ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆಯಾಗುತ್ತದೆ. ಕೆಲ ರೈತರು ಮಳೆ ಆಶ್ರಯದಲ್ಲಿ ತರಕಾರಿಗಳನ್ನು ಬೆಳೆದರೆ, ಮತ್ತೆ ಕೆಲ ರೈತರು ಪಂಪ್ ಸೆಟ್ ನೀರು ಬಳಸಿ ತರಕಾರಿ ಬೆಳೆಯುತ್ತಾರೆ.

ಹುರುಳಿಕಾಯಿ, ಪಡುವಲ ಕಾಯಿ, ಸೌತೆಕಾಯಿ, ನುಗ್ಗೆ ಕಾಯಿ, ಕ್ಯಾರೆಟ್, ಹೂಕೋಸು, ಮೆಣಸಿನ ಕಾಯಿ, ಬದನೇ ಕಾಯಿ, ಹೀರೇಕಾಯಿ, ಕುಂಬಳಕಾಯಿ, ಹಸಿ ಬಟಾಣಿ ಮತ್ತಿತರತರಕಾರಿಗಳ ಬೆಲೆಗಳಲ್ಲಿ ಕಳೆದ ೨ ತಿಂಗಳಿನಿಂದ ಮೂರ‍್ನಾಲ್ಕು ಬಾರಿ ಏರಿಳಿತ ಕಂಡು ಬಂದಿದೆ.

ಕೆಜಿ ಹಸಿ ಬಟಾಣಿ ಬೆಲೆ ೭೦ ರೂ.ದಾಟಿದ್ದರೆ, ನುಗ್ಗೆಕಾಯಿ ೬೦ ರೂ.ಗೆ ದೊರಕುತ್ತಿದೆ. ಉಳಿ ದಂತೆ ಹೀರೇಕಾಯಿ, ಎಲೆಕೋಸು. ಬೀಟ್ ರೂಟ್, ದಪ್ಪ ಮೆಣಸಿನಕಾಯಿ, ಬೂದು ಗುಂಬಳ, ತೊಗರಿಕಾಯಿ, ಸೌತೆಕಾಯಿ, ಮತ್ತಿತರ ತರಕಾರಿಗಳು ೩೦ ರೂ. ನಿಂದ ೪೦ ರೂ. ವರೆಗೆ ಮಾರಾಟವಾಗುವ ಮೂಲಕ ಬೆಲೆಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿವೆ. ಸಿಹಿ ಕುಂಬಳವನ್ನಂತೂ ಕೇಳುವವರೇ ಇಲ್ಲದಂತಾಗಿದೆ. ಸಿಹಿಗುಂಬಳ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟವಾಗದ ಕಾರಣ ಕೆಲ ರೈತರು ರಸ್ತೆ ಬದಿಯಲ್ಲಿ ನಿಂತು ತೂಕವನ್ನೂ ಹಾಕದೆ ಒಂದು ಕುಂಬಳಕ್ಕೆ ತಲಾ ೧೦ ರಿಂದ ೨೦ ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮಾತ್ರ ಕೆಜಿ ಸಿಹಿಗುಂಬಳ ೭ ರೂ.ಗೆ ಮಾರಾಟವಾಗುತ್ತಿದೆ.

ವಿಪರ್ಯಾಸವೆಂದರೆ ಕಳೆದ ತಿಂಗಳು ೬ ರಿಂದ ೮ ರೂ.ಗೆ ಏರಿಕೆಯಾಗಿದ್ದ ಕೊತ್ತಂಬರಿ ಹಾಗೂ ಕರಿಬೇವು ಇಂದು ೩ ರಿಂದ ೪ ರೂ.ಗೆ ದೊರಕುತ್ತಿದೆ. ಉಳಿದಂತೆ ಸಬ್ಬಸಿಗೆ, ದಂಟು, ಪಾಲಕ್, ಕೀರೆ ಮತ್ತಿತರ ಸೊಪ್ಪುಗಳ ಬೆಲೆ ಒಂದು ಕಟ್ಟಿಗೆ ೩ ರಿಂದ ೪ ರೂ.ಗೆ ದೊರಕುತ್ತಿದೆ.

” ಎರಡು ತಿಂಗಳಿನಿಂದ ತರಕಾರಿ ದರಗಳಲ್ಲಿ ಏರಿಕೆ ಇಳಿಕೆ ಸಾಮಾನ್ಯ ಎಂಬಂತಾಗಿದೆ. ನೀರಿನ ಕೊರತೆ ಹೆಚ್ಚಾಗಿ ಕಂಡುಬಾರದ ಪರಿಣಾಮ ರೈತರು ಹೆಚ್ಚು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಮಾರುಕಟ್ಟೆಗೆ ತರಕಾರಿ ಹೆಚ್ಚು ಬಂದಲ್ಲಿ ಸಹಜವಾಗಿ ಬೆಲೆ ಕೂಡ ಇಳಿಮುಖವಾಗುತ್ತದೆ.”

-ಉಮೇಶ್, ತರಕಾರಿ ಮಾರಾಟಗಾರರು, ಎಪಿಎಂಸಿ

 

 

Tags:
error: Content is protected !!