ಸರಗೂರು ಭಾಗಕ್ಕೆ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಲು ಸಾರ್ವಜನಿಕರ ಆಗ್ರಹ
ಸರಗೂರು: ಎಚ್.ಡಿ ಕೋಟೆಯಲ್ಲಿರುವ ಕೆಎಸ್ಆರ್ಟಿಸಿ ಘಟಕದಿಂದ ಇತ್ತೀಚಿನ ವರೆಗೂ ಸರಗೂರು-ಹೆಚ್.ಡಿ.ಕೋಟೆ ಮಾರ್ಗವಾಗಿ ರಾಜ್ಯದ ವಿವಿಧ ಭಾಗಗಳಿಗೆ ಹಲವಾರು ಬಸ್ಗಳು ಸಂಚಾರ ನಡೆಸುತ್ತಿ ದ್ದವು. ಈಗ ಇವುಗಳಲ್ಲಿ ಅನೇಕ ಮಾರ್ಗಗಳನ್ನು ರದ್ದುಪಡಿಸಲಾಗಿದ್ದು ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.
ಮಹದೇಶ್ವರ ಬೆಟ್ಟ, ಸೇಲಂ, ಶಿವಮೊಗ್ಗ, ಚಿಕ್ಕಮಗಳೂರು, ಸಿಗಂದೂರು, ದಾವಣಗೆರೆ, ಮಾನಂದವಾಡಿ, ಊಟಿ, ಬಾಳೆಲೆ, ಕುಟ್ಟ, ವಿರಾಜಪೇಟೆ, ಕೋಲಾರ ಮಾರ್ಗಗಳಿಗೆ ನೇರ ಹಾಗೂ ಮಧ್ಯಂತರ ಬಸ್ಗಳ ಸಂಚಾರವಿತ್ತು. ಆದರೆ ಇತ್ತೀಚೆಗೆ ಆದಾಯ ಇಲ್ಲವೆಂಬ ನೆಪದಲ್ಲಿ ಈ ಮಾರ್ಗಗಳನ್ನು ಬೇರೆ ಘಟಕಗಳಿಗೆ ಹಂಚಿಕೊಡಲಾಗಿದೆ. ಆದರೆ, ಬೇರೆ ಘಟಕಗಳಿಗೆ ನೀಡಿದ ಮಾರ್ಗಗಳಲ್ಲಿ ಈಗ ಉತ್ತಮ ಆದಾಯ ಬರುತ್ತಿದೆ ಎನ್ನಲಾಗಿದೆ.
ಹೆಚ್.ಡಿ ಕೋಟೆಗೆ ಅರ್ಧ ಗಂಟೆಗೊಮ್ಮೆ ಬಸ್ ಬರುತ್ತಿದ್ದರೆ, ಸರಗೂರಿಗೆ ಒಂದು ಗಂಟೆಗೆ ಒಮ್ಮೆ ಮಾತ್ರ ಬಸ್ ಇದೆ. ಅದರಲ್ಲಿ ಕೂಡ ಕೆಲವು ಬಸ್ಗಳು ನಿಗದಿತ ವೇಳೆಗೆ ಬರುವುದಿಲ್ಲ. ಮೈಸೂರಿನಿಂದ ಸರಗೂರಿಗೆ ಸಂಜೆ ೫ ಗಂಟೆ ಯಿಂದ ೭ ಗಂಟೆಯೊಳಗೆ ಬರುವ ಬಸ್ಗಳಲ್ಲಿ ಹೆಚ್ಚು ಜನಸಂದಣಿ ಇರುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎನ್ನುವುದು ಹಲವರ ಆರೋಪ.
ಇದನ್ನು ಓದಿ: ಕಣ್ಣಿಗೆ ಕಾಣದ ೧ ಕೋಟಿ ರೂ. ಅಭಿವೃದ್ಧಿ ಕೆಲಸ!
ಸರಗೂರು ತಾಲ್ಲೂಕಿನ ವಿಸ್ತೀರ್ಣ, ಗ್ರಾಮಗಳ ಸಂಖ್ಯೆ, ಬಸ್ ಪ್ರಯಾಣದಿಂದ ಬರುವ ಆದಾಯವನ್ನು ಪರಿಗಣಿಸಿ ಬೆಳಿಗ್ಗೆ, ಸಂಜೆ ವೇಳೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಸರಗೂರು ಮತ್ತು ಹೆಚ್.ಡಿ ಕೋಟೆ ವೇಗದೂತ ಬಸ್ ಗಳಲ್ಲಿ ಪ್ರಯಾಣ ದರ ೬೬ ರೂ.ಗಳನ್ನು ಪಡೆಯುತ್ತಾರೆ. ಪ್ರತಿಯೊಂದು ಗ್ರಾಮದಲ್ಲೂ ನಿಲ್ಲಿಸುತ್ತಾರೆ. ಆದ್ದರಿಂದ ಪ್ರಯಾಣ ದರವನ್ನು ಸಾಮಾನ್ಯ ಬಸ್ ಪ್ರಯಾಣ ದರಕ್ಕೆ ಇಳಿಸಬೇಕೆಂಬುದು ಜನರ ಆಗ್ರಹವಾಗಿದೆ.
ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಹೆಚ್.ಡಿ.ಕೋಟೆ ಹಾಗೂ ಸರಗೂರು ಪ್ಲಾಟ್ಫಾರ್ಮ್ನಲ್ಲಿ ರಾತ್ರಿ ವೇಳೆ ಕೊನೆಯ ಬಸ್ ೧೦ ಗಂಟೆಗೆ ಇದೆ. ಇದನ್ನು ಬಿಟ್ಟರೆ ಮರುದಿನ ಮುಂಜಾನೆ ೫ ಗಂಟೆಯವರೆಗೂ ಬಸ್ ಇಲ್ಲ. ಆದರೆ, ಬೇರೆ ಪ್ಲಾಟ್ ಫಾರ್ಮ್ಗಳಲ್ಲಿ ರಾತ್ರಿ ೧೧, ೧೨ ಗಂಟೆ ತನಕವೂ ಬಸ್ ಇರುತ್ತವೆ ಎನ್ನುತ್ತಾರೆ ಪ್ರಯಾಣಿಕರು. ಈ ಹಿಂದೆ ಮೈಸೂರಿನ ನಗರ ಸಾರಿಗೆ ಘಟಕಗಳಿಂದ ಮೈಸೂರು, ಹ್ಯಾಂಡ್ ಪೋಸ್ಟ್ಗೆ ಹತ್ತಕ್ಕೂ ಹೆಚ್ಚು ಬಸ್ಗಳನ್ನು ಬಿಡಲಾಗಿತ್ತು. ಈಗ ಅವುಗಳನ್ನು ಸ್ಥಗಿತ ಗೊಳಿಸಲಾಗಿದೆ. ಈ ಬಗ್ಗೆ ವಿಚಾರಿಸಿದರೆ ಅಧಿಕಾರಿಗಳು ಸಬೂಬು ಹೇಳುತ್ತಾರೆ ಎನ್ನುವುದು ಹಲವು ಪ್ರಯಾಣಿಕರ ಆರೋಪ.
ಕೆಲ ಬಸ್ಗಳನ್ನು ಮೈಸೂರಿನಿಂದ ಹೊಮ್ಮರಗಳ್ಳಿ ಹಾಗೂ ಹೆಚ್.ಡಿ.ಕೋಟೆಯಿಂದ ಹಂಪಾಪುರ ಮಾರ್ಗದಲ್ಲಿ ಬಿಟ್ಟರೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಅದರಲ್ಲೂ ಕಾಡಂಚಿನ ಪ್ರದೇಶಗಳಿಗೆ ಹೋಗಲು ಸಹಾ ಯಕವಾಗಲಿದೆ. ಈ ಬಗ್ಗೆ ಮೈಸೂರು ಸಾರಿಗೆ ವಿಭಾಗದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಪ್ರಯಾಣಿಕರ ಒತ್ತಾಯ.
” ವೇಗದೂತ ಬಸ್ಗಳನ್ನು ಸಾಮಾನ್ಯ ಬಸ್ನಂತೆ ಮಾರ್ಪಡಿಸಿ ಫಲಕಗಳನ್ನು ನವೀಕರಿಸಿದರೆ ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಪ್ರಯಾಣಿಕರಿಗೆ ಹಣ ಉಳಿತಾಯವಾಗುತ್ತದೆ.”
-ಜನಾರ್ಧನ್, ಪ್ರಯಾಣಿಕರು
–ದಾಸೇಗೌಡ





