Mysore
18
scattered clouds

Social Media

ಗುರುವಾರ, 19 ಫೆಬ್ರವರಿ 2026
Light
Dark

ಹದಗೆಟ್ಟ ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿ

ಕೃಷ್ಣ ಸಿದ್ದಾಪುರ

ತೇಪೆ ಹಚ್ಚುವ ಕಾರ್ಯಕ್ಕೆ ಸೀಮಿತವಾದ ರಸ್ತೆಯಲ್ಲಿ ವಾಹನ ಸವಾರರಿಗೆ ಕಿರಿಕಿರಿ

ಸಿದ್ದಾಪುರ: ೧೫ ವರ್ಷಗಳಿಂದ ಡಾಂಬರು ಕಾಣದೆ ಕೇವಲ ತೇಪೆ ಹಚ್ಚುವ ಕಾರ್ಯಕ್ಕೆ ಸೀಮಿತವಾದ ಕೊಣನೂರು- ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ನಿರ್ಮಾಣಗೊಂಡು ಸವಾರರು ಸಂಚರಿಸಲು ಪರದಾಡುವಂತಾಗಿದೆ. ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯ ಸಿದ್ದಾಪುರದಿಂದ ನೆಲ್ಯಹುದಿಕೇರಿವರೆಗಿನ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ. ರಸ್ತೆಯಲ್ಲಿ ಬೃಹತ್ ಗುಂಡಿಗಳು ಸೃಷ್ಟಿಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕಳೆದ ಮೂರು ತಿಂಗಳ ಹಿಂದೆ ಈ ರಸ್ತೆಗೆ ತೇಪೆ ಹಚ್ಚುವ ಕಾರ್ಯ ನಡೆದಿತ್ತು.

ಬಳಿಕ ಮಳೆಗಾಲ ಆರಂಭವಾಗುತ್ತಿದ್ದಂತೆ ರಸ್ತೆ ಮಧ್ಯೆ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿ ಸಂಚರಿಸಲು ಹರಸಾಹಸ ಪಡುವಂತಾಗಿದೆ. ಸಿದ್ದಾಪುರದಿಂದ ಚೆಟ್ಟಳ್ಳಿ, ಮಡಿಕೇರಿ, ಮರಗೋಡು, ಕುಶಾಲನಗರಕ್ಕೆ ತೆರಳಲು ಇರುವ ಏಕೈಕ ರಸ್ತೆ ಇದಾಗಿದ್ದು, ಪ್ರತಿ ದಿನ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಕಳೆದ ೧೫ ವರ್ಷಗಳ ಹಿಂದೆ ಕಾವೇರಿ ನದಿಗೆ ಸೇತುವೆ ನಿರ್ಮಾಣ ಸಂದರ್ಭದಲ್ಲಿ ರಸ್ತೆಗೆ ಡಾಂಬರು ಹಾಕಲಾಗಿತ್ತು. ನಂತರದ ಪ್ರತಿ ವರ್ಷ ಕೇವಲ ಗುಂಡಿ ಇದ್ದಲ್ಲಿ ಮಾತ್ರ ಸಣ್ಣದಾಗಿ ಕಾಮಗಾರಿ ನಡೆಸಲಾಗುತ್ತಿರುವುದರಿಂದ ಗುಂಡಿಗಳು ಸೃಷ್ಟಿಯಾಗಿವೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

ವಿದ್ಯಾರ್ಥಿಗಳು, ವಯೋವೃದ್ಧರು, ಸಾರ್ವಜನಿಕರು ದಿನಂಪ್ರತಿ ಸಂಚರಿಸುವ ಈ ರಸ್ತೆಯಲ್ಲಿ ನಡೆದಾಡಲುಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಆಟೋ ಚಾಲನೆ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿರುವ ಬಡಪಾಯಿಗಳು ದುಡಿದ ಹಣವನ್ನು ಗ್ಯಾರೇಜ್‌ಗೆ ಖರ್ಚು ಮಾಡುವಂತಾಗಿದೆ. ಕಲ್ಲು ಮಿಶ್ರಣವನ್ನಾದರೂ ಹಾಕಿ ತಾತ್ಕಾಲಿಕ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ವಾಹನ ಸವಾರರು ಮನವಿ ಮಾಡಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಈ ಬಗ್ಗೆ ಕ್ರಮವಹಿಸುತ್ತಿಲ್ಲ. ವೋಟ್ ಬ್ಯಾಂಕ್ ದೃಷ್ಟಿಯಿಂದ ಖಾಸಗಿ ರಸ್ತೆ ಅಭಿವೃದ್ಧಿಪಡಿಸುವ ಜನಪ್ರತಿನಿಧಿಗಳು, ಮುಖ್ಯ ರಸ್ತೆಯ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಆಡಳಿತ ವ್ಯವಸ್ಥೆ ಜಾಣ ನಿದ್ರೆಗೆ ಜಾರಿರುವುದಕ್ಕೆ ಇದು ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ರಸ್ತೆಯಲ್ಲಿ ಸೃಷ್ಟಿಯಾಗಿರುವ ಬೃಹತ್ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕಾಮಗಾರಿ ನಡೆಸಬೇಕು. ಮಳೆಗಾಲ ಮುಗಿದ ಬಳಿಕ ರಸ್ತೆಗೆ ಸಂಪೂರ್ಣ ಡಾಂಬರೀಕರಣ ಮಾಡುವ ಮೂಲಕ ಸಮಸ್ಯೆಗೆ ಹರಿಹಾರ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

” ಆಟೋ ಚಾಲನೆ ಮಾಡಿ ಬಾಡಿಗೆ ಹಣದಲ್ಲಿ ಜೀವನ ಸಾಗಿಸುತ್ತಿದ್ದೇನೆ. ಹದಗೆಟ್ಟ ರಸ್ತೆಯಲ್ಲಿ ಆಟೋ ಹೊಡಿಸುವುದರಿಂದ ಬಾಡಿಗೆ ಹಣವನ್ನೆಲ್ಲಾ ರಿಪೇರಿಗೆ ಹಾಕುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ರಸ್ತೆಯಲ್ಲಿರುವ ಬೃಹತ್ ಗುಂಡಿಗಳನ್ನು ಮುಚ್ಚಲು ಕೂಡಲೇ ಕ್ರಮ ಕೈಗೊಳ್ಳಬೇಕು.”

ಮುಸ್ತಫಾ, ಆಟೋ ಚಾಲಕ, ಸಿದ್ದಾಪುರ

” ಕಾವೇರಿ ಸೇತುವೆ ನಿರ್ಮಾಣದ ನಂತರ ಈ ರಸ್ತೆ ಡಾಂಬರೀಕರಣ ಮಾಡಿಲ್ಲ. ಕಳೆದ ಏಪ್ರಿಲ್ ತಿಂಗಳಲ್ಲಿ ತೇಪೆ ಹಚ್ಚುವ ಕೆಲಸ ಮಾಡಲಾಗಿತ್ತು. ಆ ಕಾಮಗಾರಿ ಮೂರು ತಿಂಗಳಲ್ಲಿ ಕಿತ್ತು ಹೋಗಿದ್ದು, ರಸ್ತೆಯಲ್ಲಿ ಮತ್ತೆ ಬೃಹತ್ ಗುಂಡಿಗಳು ಸೃಷ್ಟಿಯಾಗಿವೆ. ಕೂಡಲೇ ಗುಂಡಿ ಮುಚ್ಚುವ ಕಾರ್ಯ ಮಾಡಬೇಕು.”

ಸುರೇಶ್, ಚಾಲಕರ ಒಕ್ಕೂಟದ ಜಿಲ್ಲಾ ಸಂಚಾಲಕ

” ರಾಜ್ಯ ಹೆದ್ದಾರಿ ತೀರ ಹದಗೆಟ್ಟಿದ್ದು, ವಾಹನ ಸವಾರರಿಗೆ ತುಂಬಾ ತೊಂದರೆ ಆಗಿದೆ. ಕಳೆದ ೨-೩ ತಿಂಗಳ ಹಿಂದೆಯಷ್ಟೇ ದುರಸ್ತಿ ಮಾಡಿದ ರಸ್ತೆ ಇದಾಗಿದ್ದು, ರಸ್ತೆ ತೆರಿಗೆ ಅಂತ ಸಾವಿರಾರು ರೂ. ಕಿತ್ತುಕೊಳ್ಳುವ ಸರ್ಕಾರಗಳು ಇದರ ಬಗ್ಗೆ ಗಮನಹರಿಸುತ್ತಿಲ್ಲ, ಖಾಸಗಿ ರಸ್ತೆ ಅಭಿವೃದ್ಧಿಗೆ ಲಕ್ಷಾಂತರ ರೂ. ಬಿಡುಗಡೆ ಮಾಡುವ ಜನಪ್ರತಿ ನಿಽಗಳಿಗೆ ಸಾರ್ವಜನಿಕ ರಸ್ತೆಯ ಸ್ಥಿತಿ ಕಾಣದಿರುವುದು ವಿಪರ್ಯಾಸ.”

ಅನ್ವೇಶ್ ಭಟ್, ಸ್ಥಳೀಯ ನಿವಾಸಿ

Tags:
error: Content is protected !!