Mysore
25
moderate rain

Social Media

ಭಾನುವಾರ, 20 ಸೆಪ್ಟೆಂಬರ್ 2026
Light
Dark

ಮಹಾರಾಷ್ಟ್ರ | ಮುಸ್ಲಿಮರಿಗೆ ನೀಡಲಾಗಿದ್ದ ಶೇ.5ಮೀಸಲಾತಿ ರದ್ದು

ಮುಂಬೈ : ಮಹಾರಾಷ್ಟ್ರದ ಮಹಾಯುತಿ ಸರ್ಕಾರವು ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇಕಡಾ 5ರಷ್ಟು ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಸಾಮಾಜಿಕ ನ್ಯಾಯ ಇಲಾಖೆಯು ಮಂಗಳವಾರ (ಫೆ.17) ಹೊರಡಿಸಿದ ಸರ್ಕಾರಿ ಆದೇಶ ಮೂಲಕ 2014ರಲ್ಲಿ ಜಾರಿಗೆ ತರಲಾಗಿದ್ದ ಎಲ್ಲಾ ಆದೇಶಗಳು, ಸುಗ್ರೀವಾಜ್ಞೆಗಳು ಮತ್ತು ಸಂಬಂಧಿತ ನಿರ್ಧಾರಗಳನ್ನು ರದ್ದುಪಡಿಸಲಾಗಿದೆ.

ಈ ಮೀಸಲಾತಿಯು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದವರಿಗೆ (ವಿಶೇಷ ಹಿಂದುಳಿದ ವರ್ಗ-ಎ ಅಡಿಯಲ್ಲಿ) ಸರ್ಕಾರಿ, ಅರೆ-ಸರ್ಕಾರಿ ಉದ್ಯೋಗಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ನೀಡಲಾಗಿತ್ತು. ಆದರೆ ಈ ಮೀಸಲಾತಿ ಕಾನೂನು ಅಡ್ಡಿಗಳಿಂದಾಗಿ 2014ರಿಂದಲೇ ಜಾರಿಯಾಗಿರಲಿಲ್ಲ.

2014ರಲ್ಲಿ ಕಾಂಗ್ರೆಸ್-ಎನ್‌ಸಿಪಿ ಸರ್ಕಾರವು ಚುನಾವಣೆಗೂ ಮೊದಲು ಮುಸ್ಲಿಮರನ್ನು ವಿಶೇಷ ಹಿಂದುಳಿದ ವರ್ಗ-ಎ (SBC-A) ಅಡಿಯಲ್ಲಿ ವರ್ಗೀಕರಿಸಿ ಶೇ.5 ಮೀಸಲಾತಿ ಘೋಷಿಸಿತ್ತು. ಬಾಂಬೆ ಹೈಕೋರ್ಟ್ ನವೆಂಬರ್ 2014ರಲ್ಲಿ ಈ ಆದೇಶಕ್ಕೆ ತಡೆ ನೀಡಿತ್ತು. ಡಿಸೆಂಬರ್ 2014ರಲ್ಲಿ ರಾಜ್ಯ ಶಾಸಕಾಂಗವು ನಿಗದಿತ ಗಡುವಿನೊಳಗೆ ಕಾನೂನು ಜಾರಿಗೊಳಿಸದ ಕಾರಣ ಸುಗ್ರೀವಾಜ್ಞೆ ಸ್ವಯಂಚಾಲಿತವಾಗಿ ರದ್ದಾಗಿತ್ತು. ಸುಪ್ರೀಂ ಕೋರ್ಟ್ ಹಿಂದೆಯೇ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದನ್ನು ಅಂಗೀಕರಿಸಿರಲಿಲ್ಲ ಎಂದು ಹಲವು ರಾಜ್ಯಗಳ ಮೀಸಲಾತಿ ಆದೇಶಗಳನ್ನು ರದ್ದುಗೊಳಿಸಿತ್ತು. ಈಗ ಹೊಸ ಆದೇಶದ ಮೂಲಕ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಸಂಬಂಧಿತ ಜಾತಿ ಪ್ರಮಾಣಪತ್ರಗಳ ನೀಡಿಕೆಯ ಪ್ರಕ್ರಿಯೆಯನ್ನೂ ರದ್ದು ಮಾಡಲಾಗಿದೆ.

ಧರ್ಮದ ಆಧಾರದ ಮೇಲಿನ ಮೀಸಲಾತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಇದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

 

Tags:
error: Content is protected !!