ಪ್ರಸಾದ್ ಲಕ್ಕೂರು
ಅಂತಿಮ ಹಂತದಲ್ಲಿ ಮೇಲ್ಸೇತುವೆ, ಲಿಫ್ಟ್, ಎಸ್ಕಲೇಟರ್ ಅಳವಡಿಕೆ; ಆಧುನೀಕರಣಗೊಂಡ ನಿಲ್ದಾಣ ೨ ತಿಂಗಳಲ್ಲಿ ಸೇವೆಗೆ
ಚಾಮರಾಜನಗರ: ಗಡಿ ಜಿಲ್ಲೆಯ ಕೊನೆಯ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಿ ಅಮೃತ್ ಭಾರತ್ ನಿಲ್ದಾಣವಾಗಿ ಪರಿವರ್ತಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ಸಾರ್ವಜನಿಕರ ಸೇವೆಗೆ ಸಮರ್ಪಣೆ ಆಗಲಿದೆ.
ನಗರದ ಹೊರಭಾಗದಲ್ಲಿರುವ ರೈಲು ನಿಲ್ದಾಣದ ಪ್ಲಾಟ್ ಫಾರಂ ವಿಸ್ತರಣೆ, ಸುಸಜ್ಜಿತ ಪ್ರಯಾಣಿಕರ ತಂಗುದಾಣ, ಆವರಣದಲ್ಲಿ ಉದ್ಯಾನ, ಮುಂಭಾಗದಲ್ಲಿ ಜೋಡಿ ಕಾಂಕ್ರಿಟ್ ರಸ್ತೆ, ವಾಹನಗಳ ನಿಲುಗಡೆ ಸೇರಿದಂತೆ ಹಲವು ಕಾಮಗಾರಿಗಳು ಮುಗಿದಿವೆ.
ನಿಲ್ದಾಣದ ೨ ಪ್ಲಾಟ್ ಫಾಂರಂಗಳಿಗೆ ಸಂಪರ್ಕ ಕಲ್ಪಿಸುವ ಪಾದಚಾರಿಗಳ ಮೇಲ್ಸೇತುವೆ, ೨ ಕಡೆ ಎಸ್ಕಲೇಟರ್, ಪ್ರಯಾಣಿಕರನ್ನು ಕರೆದೊಯ್ಯುವ ಲಿಫ್ಟ್ ಕಾಮಗಾರಿ ಭರದಿಂದ ಸಾಗಿದೆ. ೨ ವಾರಗಳಲ್ಲಿ ಹೊಸ ವಾಹನಗಳ ನಿಲುಗಡೆ ಜಾಗದಲ್ಲಿ ಬೈಕ್, ಕಾರು ಹಾಗೂ ಇತರೆ ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಆರಂಭವಾಗಲಿದೆ. ರೈಲು ನಿಲ್ದಾಣದ ಮುಂಭಾಗ ಪಾರ್ಕ್ ಈಗಾಗಲೇ ಅಭಿವೃದ್ಧಿಗೊಂಡಿದೆ.
೨೦೨೩ನೇ ವರ್ಷದ ಕೊನೇ ಭಾಗದಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿ ಆರಂಭಗೊಂಡಿತ್ತು. ಕಳೆದ ಎರಡೂವರೆ ವರ್ಷಗಳಿಂದ ಕಾಮಗಾರಿ ನಡೆದಿದೆ. ಆದರೆ, ಮೈಸೂರು- ಚಾಮರಾಜನಗರ ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಕೈಗೊಂಡ ಹಿನ್ನೆಲೆಯಲ್ಲಿ ಸ್ವಲ್ಪ ಕಾಲ ಕಾಮಗಾರಿ ವಿಳಂಬಗೊಂಡಿತ್ತು.
ಮಹಿಳೆಯರು ಮತ್ತು ಪುರುಷರ ನಿರೀಕ್ಷಣಾ ಕೊಠಡಿಗಳು, ಪಾರ್ಕ್, ರಸ್ತೆ, ಪ್ಲಾಟ್-ರಂ ವಿಸ್ತರಣೆ ಕಾಮಗಾರಿ ಮುಗಿದಿದೆ. ಸಣ್ಣ ಕುಡಿಯುವ ನೀರಿನ ಘಟಕ ಅಳವಡಿಕೆ ಕೆಲಸ ಮುಕ್ತಾಯಗೊಂಡಿದೆ. ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕ್ಯಾಂಟೀನ್ ಕೊಠಡಿ ಕೂಡ ನಿರ್ಮಾಣ ಮಾಡಲಾಗಿದೆ. ಶೀಘ್ರದಲ್ಲೇ ಟೆಂಡರ್ ಕರೆದು ಕ್ಯಾಂಟೀನ್ ಹಂಚಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಕಾಮಗಾರಿ ನಿರ್ವಹಣೆ ಹೊತ್ತಿರುವ ಬೆಂಗಳೂರು ಮೂಲದ ಎಂವಿವಿ ಸತ್ಯನಾರಾಯಣ ಗುತ್ತಿಗೆ ಸಂಸ್ಥೆ ಸಿಬ್ಬಂದಿ ತಿಳಿಸಿದ್ದಾರೆ.
ಮೈಸೂರು ಯದುವಂಶಸ್ಥರು (ಒಡೆಯರು) ಮೈಸೂರು ಪ್ರಾಂತ್ಯವನ್ನು ಆಳುತ್ತಿದ್ದ ಸಂದರ್ಭದಲ್ಲೇ ಗಡಿಜಿಲ್ಲೆಯಾದ ಚಾಮರಾಜನಗರಕ್ಕೆ ರೈಲು ಬಂದಿತ್ತು. ಆಗ ಮೀಟರ್ಗೇಜ್ ಆಗಿದ್ದ ಈ ಮಾರ್ಗವು, ೨೦೦೮ರಲ್ಲಿ ಬ್ರಾಡ್ಗೇಜ್ ಆಗಿ ಪರಿವರ್ತನೆಗೊಂಡಿತು. ಈಗ ಮಾರ್ಗ ವಿದ್ಯುದ್ದೀಕರಣಗೊಂಡಿದೆ. ಹಳೆಯ ಕಾಲದ ಈ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಿ ಆಧುನೀಕರಣಗೊಳಿಸಲು ಕೇಂದ್ರ ಸರ್ಕಾರ ೨೦ ಕೋಟಿ ರೂ. ಅನುದಾನ ನೀಡಿದೆ. ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಡಿ ೨೩ ಬೋಗಿಗಳ ರೈಲುಗಾಡಿ ನಿಲ್ಲುವಷ್ಟು ಪ್ಲಾಟ್ಫಾರಂ ಅನ್ನು ವಿಸ್ತರಣೆ ಮಾಡಿದೆ. ಅದಕ್ಕೆ ತಕ್ಕಂತೆಯೇ ಎಲ್ಲ ಸೌಲಭ್ಯಗಳು ಇವೆ.
ಬೆಂಗಳೂರು ಮೂಲದ ಎಂವಿವಿ ಸತ್ಯನಾರಾಯಣ ಗುತ್ತಿಗೆ ಸಂಸ್ಥೆಗೆ ಟೆಂಡರ್ ನೀಡಿದ್ದು ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಹಳೆಯ ಕಾಲದ ನಿಲ್ದಾಣ ಸದ್ಯ ಮದುವಣಿಗಿತ್ತಿಯಂತೆ ಕಂಗೊಳಿಸುತ್ತಿದ್ದು ಉತ್ತಮ ಸೌಲಭ್ಯಗಳೊಂದಿಗೆ ಸುಸಜ್ಜಿತ ನಿಲ್ದಾಣವಾಗಲಿದೆ.
ಚಾ.ನಗರ: ಒಂದು ಪ್ಲಾಟ್-ರಂನಿಂದ ಮತ್ತೊಂದು ಪ್ಲಾಟ್-ರಂಗೆ ಪ್ರಯಾಣಿಕರು, ನಿಲ್ದಾಣದ ಸಿಬ್ಬಂದಿ ಹೋಗಿಬರಲು ಪಾದಚಾರಿಗಳ ಮೇಲ್ಸೇತುವೆ ನಿರ್ಮಿಸಲಾಗಿದೆ. ಇದಕ್ಕೆ ಮೆಟ್ಟಿಲುಗಳಲ್ಲದೇ ಲಿಫ್ಟ್ ವ್ಯವಸ್ಥೆ ಹಾಗೂ ಎಸ್ಕಲೇಟರ್ ಕೂಡ ಇರಲಿದೆ. ರೈಲ್ವೆ ಇಲಾಖೆಯು ೨೦ ಕೋಟಿ ರೂ. ವೆಚ್ಚದಲ್ಲಿ ಹಳೆಯ ಕಾಲದ ಈ ರೈಲು ನಿಲ್ದಾಣವನ್ನು ಅಮೃತ್ ಭಾರತ್ ನಿಲ್ದಾಣವನ್ನಾಗಿ ಪರಿವರ್ತನೆ ಮಾಡುತ್ತಿದೆ.
” ಬಹುಶಃ ಇನ್ನು ೨ ಅಥವಾ ೩ ತಿಂಗಳಲ್ಲಿ ನಗರದ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಕಾಮಗಾರಿ ಶೇ.೯೫ರಷ್ಟು ಪೂರ್ಣಗೊಂಡಿದ್ದು, ಅಂತಿಮ ಹಂತದ ಕಾಮಗಾರಿಯಷ್ಟೇ ಬಾಕಿ ಇದೆ. ಅದನ್ನೂ ಬೇಗ ಪೂರ್ಣಗೊಳಿಸುತ್ತೇವೆ.”
ಶಫಿಕುಮಾರ್, ಮೇಲ್ವಿಚಾರಕರು, ಎಂವಿವಿ ಸತ್ಯನಾರಾಯಣ ಗುತ್ತಿಗೆ ಸಂಸ್ಥೆ




