Mysore
30
few clouds

Social Media

ಗುರುವಾರ, 19 ಫೆಬ್ರವರಿ 2026
Light
Dark

ಕಳಾಹೀನವಾದ ತೋಟಗಾರಿಕೆ ಇಲಾಖೆ ಆವರಣ

dasaea flower show ground

ಅರಮನೆಗೆ ಹೊಂದಿಕೊಂಡಂತಿರುವ ಇಲಾಖೆ ಕಚೇರಿ; ನಳನಳಿಸುತ್ತಿರುವ ಜಿಪಂ ಕಚೇರಿ ಉದ್ಯಾನ

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ  ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿ ಆವರಣ ಹಸಿರು ಹಾಗೂ ಅಲಂಕಾರಿಕ ಹೂ ಗಿಡಗಳಿಂದ ಕಂಗೊಳಿಸುತ್ತಿದೆ. ಆದರೆ, ಫಲಪುಷ್ಪ ಪ್ರದರ್ಶನದ ರೂವಾರಿ ಎಂದು ಹೇಳಿಕೊಳ್ಳುವ ತೋಟಗಾರಿಕೆ ಇಲಾಖೆ ಆವರಣ ಮಾತ್ರ ಕಳಾಹೀನವಾಗಿದೆ.

ದಸರಾ ಪ್ರಯುಕ್ತ ಸಾಕಷ್ಟು ಶ್ರಮವಹಿಸುವ ಮೂಲಕ ಜಿಪಂ ಸಿಬ್ಬಂದಿ ಕಚೇರಿ ಮುಂಭಾಗದ ಉದ್ಯಾನವನವನ್ನು ನಳನಳಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಜಿಪಂ ವ್ಯಾಪ್ತಿ ತೋಟಗಾರಿಕೆ ಇಲಾಖೆ ಸಿಬ್ಬಂದಿಗೆ ಮಾತ್ರ ತಮ್ಮ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಕಾಳಜಿ ಏಕೆ ಬಂದಿಲ್ಲ ಎಂಬುದೇ ಸೋಜಿಗದ ಸಂಗತಿ. ದಸರಾ ಬಂತೆಂದರೆ ಸಾಕು ಮೈಸೂರಿನ ಸುತ್ತಮುತ್ತ ಒಂದಲ್ಲ ಒಂದು ವಿಶೇಷತೆಗಳು ಕಾಣಸಿಗುತ್ತವೆ. ಹಬ್ಬದ ಸಂದರ್ಭದಲ್ಲಿ ಜನರನ್ನು ಸೆಳೆಯಲು ಅನೇಕ ಜನರು ಸಾಕಷ್ಟು ಕಸರತ್ತು ನಡೆಸುತ್ತಾರೆ. ಇಂತಹವುಗಳಲ್ಲಿ ಸರ್ಕಾರಿ ಕಚೇರಿಗಳೂ ಸೇರುತ್ತವೆ. ಮೈಸೂರು ನಗರಪಾಲಿಕೆ, ಜಿಪಂ, ತೋಟಗಾರಿಕೆ ಇಲಾಖೆ ಹೀಗೆ ಸಾಕಷ್ಟು ಇಲಾಖೆಗಳ ಆವರಣಗಳಲ್ಲಿ ಗಿಡಗಳನ್ನು ಬೆಳೆಸುವ ಮೂಲಕ ಜನಾಕರ್ಷಣೆಯನ್ನಾಗಿಸಲಾಗುತ್ತದೆ.

ಅದರಲ್ಲಿ ಜಿಲ್ಲಾ ಪಂಚಾಯಿತಿ ಕೂಡ ಒಂದು, ದಸರಾ ಹಬ್ಬದ ಸಂದರ್ಭದಲ್ಲಿ ಪ್ರತೀ ವರ್ಷ ಕೂಡ ಜಿಪಂ ಸಿಬ್ಬಂದಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಚೇರಿಯ ಆವರಣವನ್ನು ಒಪ್ಪ-ಓರಣವಾಗಿ ಸಿಂಗರಿಸುತ್ತಾರೆ. ಅದರಂತೆ ಈ ಬಾರಿ ಕೂಡ ಕಚೇರಿಯ ಆವರಣದ ಎರಡೂ ಭಾಗಗಳಲ್ಲಿ ಸಾಕಷ್ಟು ಅಲಂಕಾರಿಕ ಗಿಡಗಳನ್ನು ಬೆಳೆಸುವ ಮೂಲಕ ಹಸಿರಿನಿಂದ ಕಂಗೊಳಿಸುವಂತೆ ಮಾಡಲಾಗಿದೆ.

ಇದನ್ನು ಓದಿ : ರಂಗೇರಿದ ದಸರಾ ಮಹೋತ್ಸವ

ಕಚೇರಿ ಮುಂಭಾಗದ ಆವರಣದಲ್ಲಿ ಹಸಿರು ಹುಲ್ಲಿನ ಲಾನ್ ಸಿದ್ಧಗೊಳಿಸಲಾಗಿದೆ. ಎರಡೂ ಭಾಗಗಳಲ್ಲಿ ಹೂವುಗಳಿಂದ ವೃತ್ತಾಕಾರವನ್ನು ನಿರ್ಮಾಣ ಮಾಡಲಾಗಿದೆ. ಚೆಂಡು ಮಲ್ಲಿಗೆಯ ಗಿಡಗಳನ್ನು ಹೆಚ್ಚು ಬಳಸಿರುವುದರಿಂದ ಹಸಿರಿನ ಮಧ್ಯೆ ಹಳದಿ ಹೂವುಗಳು ಕಣ್ಮನ ಸೆಳೆಯುತ್ತವೆ. ಇದರ ಜೊತೆಗೆ ಹಲವಾರು ಬಗೆಯ ಅಲಂಕಾರಿಕ ಗಿಡಗಳು ನೋಡುಗರನ್ನು ಸೆಳೆಯುತ್ತಿವೆ. ಆದರೆ, ವಿವಿಧ ಇಲಾಖೆಗಳ ಆವರಣವನ್ನು ಸ್ವಚ್ಛಗೊಳಿಸುವ ಹೊಣೆ ಹೊತ್ತಿರುವ ತೋಟಗಾರಿಕೆ ಇಲಾಖೆ ಮಾತ್ರ ತನ್ನ ಆವರಣವನ್ನೇ ಉತ್ತಮವಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ.

ಅರಮನೆಗೆ ಹೊಂದಿಕೊಂಡಂತೆ ಇರುವ ಈ ಆವರಣದ ಬಳಿಯೇ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಒಂದು ವೇಳೆ ಅವರು ‘ತೋಟಗಾರಿಕೆ ಇಲಾಖೆ’ ಎಂಬ ನಾಮಫಲಕವನ್ನು ಗಮನಿಸಿದರೆ ಹೌಹಾರುವುದು ಖಚಿತ.

” ತೋಟಗಾರಿಕೆ ಇಲಾಖೆ ಆವರಣದ ಅನೈರ್ಮಲ್ಯತೆಯನ್ನು ಮುಚ್ಚಿಡುವ ಸಲುವಾಗಿ ಅಲ್ಲಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ದಸರಾ ವೇಳೆ ಪ್ರವಾಸಿಗರನ್ನು ತನ್ನ ಸೌಂದರ್ಯದಿಂದ ಮುದಗೊಳಿಸಬೇಕಾಗಿದ್ದ ತೋಟಗಾರಿಕೆ ಇಲಾಖೆ ಕಳಾಹೀನವಾಗಿದೆ. ಇದರ ಹೊಣೆಯನ್ನು ಅಽಕಾರಿಗಳೇ ಹೊರಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.”

-ಎಚ್.ಎಸ್.ದಿನೇಶ್‌ಕುಮಾರ್

Tags:
error: Content is protected !!