ಮೈಸೂರಿನ ಮಹಾರಾಜ ಕಾಲೇಜು ತನ್ನದೇ ಆದ ಇತಿಹಾಸ, ಗೌರವವನ್ನು ಹೊಂದಿದೆ. ಇಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಈ ಕಾಲೇಜು ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಆದರೆ ಇತ್ತೀಚೆಗೆ ಈ ಕಾಲೇಜಿನಲ್ಲಿ ಪದವಿ ಮುಗಿಸಿರುವ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ.
ಕಾಲೇಜಿಗೆ ಸೇರುವ ಮುನ್ನ ವಿದ್ಯಾರ್ಥಿಗಳಿಂದ ಮೂಲ ದಾಖಲೆಗಳನ್ನು ಪಡೆದುಕೊಳ್ಳುತ್ತಾರೆ. ಪದವಿ ಮುಗಿದ ನಂತರ ವಿದ್ಯಾರ್ಥಿಗಳು ಆ ದಾಖಲೆಗಳನ್ನು ವಾಪಸ್ ಪಡೆದುಕೊಳ್ಳಬೇಕಾಗಿರುತ್ತದೆ. ಈ ಕಾಲೇಜಿನಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳ ಉನ್ನತ ಶೈಕ್ಷಣಿಕ ವ್ಯಾಸಂಗಕ್ಕಾಗಿ, ಉದ್ಯೋಗಗಳಿಗಾಗಿ, ದಾಖಲೆಗಳು ಅತ್ಯವಶ್ಯಕವಾಗಿರುತ್ತವೆ. ಮೂಲ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿ ತಿಂಗಳುಗಳೇ ಕಳೆದರೂ ವಾಪಸ್ ನೀಡುತ್ತಿಲ್ಲ. ಸಂಬಂಧಪಟ್ಟವರಿಂದ ಸರಿಯಾದ ಮಾಹಿತಿಯೂ ದೊರಕುತ್ತಿಲ್ಲ. ನಾಳೆ ಬಾ, ಅವರನ್ನು ಕೇಳು, ಇವರನ್ನು ಕೇಳು ಎಂದು ಸಬೂಬು ಹೇಳಿ ವಿದ್ಯಾರ್ಥಿಗಳನ್ನು ಪ್ರತಿದಿನ ಅಲೆದಾಡಿಸುತ್ತಿದ್ದಾರೆ.
ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳು, ಬಡ ವಿದ್ಯಾರ್ಥಿಗಳು ಹಾಗೂ ದೂರದ ಹಳ್ಳಿಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಾಗಿರುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಕೊಂಡು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ನೆರವಾಗಬೇಕು.
– ಅಭಿಷೇಕ್, ನೊಂದ ವಿದ್ಯಾರ್ಥಿ,ಕಲ್ಲಂಬಾಳು





