Mysore
22
overcast clouds

Social Media

ಬುಧವಾರ, 19 ಆಗಸ್ಟ್ 2026
Light
Dark

ಬಸವನಹುಳು ಸಾಕಣೆಯೂ ಲಾಭದಾಯಕ

ಕೇಶವ್

ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಿಂದ ಅಚ್ಚರಿಯ ಸಂಶೋಧನೆ!

ಮೈಸೂರು: ಬಸವನಹುಳುಗಳನ್ನು ಜಮೀನುಗಳಲ್ಲಿ ರೈತರು ನೋಡಿದರೆ, ನಮ್ಮ -ಸಲಿಗೆ ಹಾನಿ ಎಂದು ಸಾಯಿಸುತ್ತಾರೆ. ತೇವಾಂಶ ಪ್ರದೇಶದಲ್ಲಿ ಜನ ನೋಡಿದರೆ, ಅಸಹ್ಯ ಪಟ್ಟುಕೊಂಡು ಮುಂದೆ ಸಾಗುತ್ತಾರೆ. ಆದರೆ, ಅದನ್ನು ಸಾಕಿದರೆ ಅದರಿಂದಲೂ ಲಾಭ ಪಡೆಯಬಹುದು ಎನ್ನುವ ವಿಚಾರಗೊತ್ತಿಲ್ಲ. ಅದನ್ನು ಸಾಕಣೆ ಮಾಡಿ ಲಾಭಗಳಿಸುವ ವಿಧಾನವನ್ನು ತಿಳಿಸಲು ದೇಶದಲ್ಲಿ ಪ್ರಥಮ ಬಾರಿಗೆ ಮೈಸೂರಿನ ಬಸವನಹುಳು ಸಾಕಣೆ ಕೇಂದ್ರ ಆರಂಭವಾಗಿದೆ.

ಕೇಂದ್ರ ಸರ್ಕಾರದ ಬಯೋಟೆಕ್ನಾಲಜಿ ಇಂಡಸ್ಟ್ರಿ ರೀಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್(ಬಿಐಆರ್‌ಎಸಿ), ಬಯೋ ಟೆಕ್ನಾಲಜಿ ಇಗ್ನಿಷನ್ ಗ್ರಾಂಟ್(ಬಿಐಜಿ), ಕರ್ನಾಟಕ ಸ್ಟಾರ್ಟ್ ಆಫ್ ಎಲಿವೆಟ್ ಅನುದಾನದಿಂದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ(ಜೆಎಸ್ಎಸ್ ಎಎಚ್‌ಇಆರ್)ಯ ಆವರಣದಲ್ಲಿರುವ ಜೀವ ವಿಜ್ಞಾನಗಳ ಶಾಲೆ ಹಾಗೂ ಔರಿಕ್ ಕಾಸ್ಮೊ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ಸಹಯೋಗದಲ್ಲಿ ಶಾಲೆಯ ಸಮೀಪ ಬಸವನಹುಳು ಸಾಕಣೆ (ಸ್ನೇಲ್ ಫಾರ್ಮ್) ಕೇಂದ್ರತೆರೆಯಲಾಗಿದ್ದು, ಇದು ದೇಶದಲ್ಲಿಯೇ ಪ್ರಪ್ರಥಮವಾಗಿ ತೆರೆದ ಬಸವನಹುಳು ಸಾಕಣೆ ಕೇಂದ್ರವಾಗಿದೆ.

ಬಸವನಹುಳು ಫಸಲನ್ನು ಹಾಳು ಮಾಡುತ್ತದೆ ಎನ್ನುವ ಭಾವನೆಯನ್ನು ಬಿಟ್ಟು, ಅದರ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆಯ ಮಾಹಿತಿಯನ್ನು ಪಡೆದವರು ಅಚ್ಚರಿಗೊಳ್ಳುತ್ತಾರೆ. ಈ ಸಾಕಾಣಿಕೆಯು ಪರ್ಯಾಯ ಕೃಷಿ ಚಟುವ ಟಿಕೆಯಾಗಿ ಬೆಳೆಯುತ್ತಿದ್ದು, ಹೊಸ ಅವಕಾಶಗಳಿಗೆ ನಾಂದಿ ಹಾಡಲಿದೆ. ಕಡಿಮೆ ಜಾಗ, ಕಡಿಮೆ ವೆಚ್ಚ, ಸರಳ ನಿರ್ವಹಣೆಯಿಂದ ಆದಾಯದ ಮೂಲಕ್ಕೆ ಮತ್ತೊಂದು ದಾರಿಯಾಗಲಿದೆ. ಈ ಹುಳುಗಳ ಸಾಕಣೆಗೆ ಹೆಚ್ಚಿನ ಜಾಗದ ಅಗತ್ಯವಿಲ್ಲ. ಸೂಕ್ತವಾದ ನೆರಳು, ತೇವಾಂಶ, ಶುದ್ಧ ನೀರು ಮತ್ತು ಪೌಷ್ಟಿಕ ಆಹಾರ(ಹಸಿರು ಆಹಾರ) ನೀಡಿದರೆ ಸಾಕು, ಉತ್ತಮವಾಗಿ ಬೆಳೆಯುತ್ತದೆ. ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ(ಜೆಎಸ್‌ಎಸ್ ಎಎಚ್‌ಇಆರ್)ಯ ಆವರಣದಲ್ಲಿರುವ ಜೀವ ವಿಜ್ಞಾನಗಳ ಶಾಲೆಯ ಸಮೀಪ ೨೦೨೨ರಲ್ಲಿ ಬಸವನಹುಳು ಫಾರ್ಮ್ ತೆರೆಯಲಾಗಿದ್ದು, ಈ ಹುಳುವಿನ ಬಗ್ಗೆ ೪ ವರ್ಷಗಳವರೆಗೆ ಡಾ.ಆಶಾ ಶ್ರೀನಿವಾಸನ್ ಹಾಗೂ ತಂಡದವರು ನಿರಂತರ ಅಧ್ಯಯನ, ಸಂಶೋಧನೆ ಮಾಡಿ, ೨೦೨೬ರ ಆಗಸ್ಟ್ ೧೧ರಂದು ರೈತರಿಗೆ, ಇದರ ಆಸಕ್ತ ಉದ್ಯಮಿಗಳಿಗೆ ಸಾಕಾಣಿಕೆಯ ಮಾಹಿತಿ ನೀಡಿದರು. ರೈತರು, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಬೇಕು ಎನ್ನುವವರಿಗೆ, ಸ್ವಸಹಾಯ ಸಂಘ ನಡೆಸುವವರಿಗೆ, ಕೃಷಿ ಉದ್ಯಮಿಗಳಿಗೆ ಮತ್ತೊಂದು ಆದಾಯದ ಮೂಲವಾಗಲಿದೆ.

ಬಸವನಹುಳುವಿನ ವಿಶೇಷತೆ: ಇವುಗಳು ಮೃದ್ವಂಗಿ ಗುಂಪಿಗೆ ಸೇರಿವೆ. ಅವು ಜೀವನಪೂರ್ತಿ ತಮ್ಮ ಚಿಪ್ಪನ್ನು ಹೊತ್ತುಕೊಂಡೇ ಇರುತ್ತವೆ. ತೇವಾಂಶ ಹೆಚ್ಚಿರುವಾಗ ಹೆಚ್ಚು ಚುರುಕಾಗಿರುತ್ತವೆ. ಲೋಳೆಯಂತಹ ದ್ರವವು ಅವುಗಳ ಚಲನೆಯನ್ನು ಸುಲಭಗೊಳಿಸುತ್ತದೆ. ಬಾಯಿಯಲ್ಲಿ ಸಾವಿರಾರು ಸಣ್ಣ ಹಲ್ಲುಗಳಿರುವ ರಾಡುಲಾ ಇರುತ್ತದೆ. ಇವುಗಳು ಸುಮಾರು ೪ ವರ್ಷ ಜೀವಿಸಬಲ್ಲವು. ಉಭಯಲಿಂಗ ಜೀವಿ ಆಗಿರುವುದರಿಂದ ಪ್ರತಿಯೊಂದು ಈ ಹುಳುವಿನಲ್ಲಿಯೂ ಗಂಡು ಮತ್ತು ಹೆಣ್ಣು ಸಂತಾನೋತ್ಪತ್ತಿ ಅಂಗಗಳು ಇರುತ್ತವೆ.

” ಬಸವನಹುಳುವಿನಲ್ಲಿ ೭೦ ಸಾವಿರ ತಳಿಗಳು ಇವೆ. ಸದ್ಯಕ್ಕೆ ನಾವು ನೆಲದ ಮೇಲೆ ತೆವಳು ತ್ತಿರುವ ಬಸವನಹುಳುವಿನ ಬಗ್ಗೆ ಹೆಚ್ಚು ಸಂಶೋಧನೆ ಮಾಡುತ್ತಿದ್ದೇವೆ. ಸಾಕಾಣೆ ಕೇಂದ್ರ ತೆರೆಯಲು ಅಧಿಕ ಬಂಡವಾಳ ಬೇಡ, ಅದನ್ನು ನಿರ್ವಹಣೆ ಮಾಡುವ ವಿಧಾನವನ್ನು ಕಲಿಯಬೇಕು. ಈ ಹುಳುವಿಗೆ ಹಸಿರಾಗಿ ರುವ ಆಹಾರ ಪದಾರ್ಥಗಳನ್ನು ನೀಡಬೇಕು.”

-ಎಸ್.ವಿಕ್ರಂ ಸಿಂಗ್, ಸಂಸ್ಥಾಪಕ, ಔರಿಕ್ ಕಾಸ್ಮೋ ಇಂಡಿಯಾ ಪ್ರೈವೇಟ್ ಲಿಮಿಟೆಡ್

” ಬಸವನಹುಳವನ್ನು ವಿದೇಶಗಳಲ್ಲಿ ಮಸಾಜ್ ಸೆಂಟರ್, ಚರ್ಮರೋಗಗಳ ಗುಣಕ್ಕೆ ಬಳಸಲಾಗುತ್ತದೆ.ಆದರೆ, ಮೈಸೂರಿನಲ್ಲಿ ಆರಂಭಗೊಂಡಿರುವ ಸಾಕಣೆ ಕೇಂದ್ರದಲ್ಲಿ ಸದ್ಯಕ್ಕೆ ಚರ್ಮರೋಗ ಚಿಕಿತ್ಸೆಗೆ ಸಂಶೋಧನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಸಂಶೋಧನೆ ನಡೆಯಲಿದೆ.”

” ಬಸವನಹುಳು ಸಾಕಣೆಯಿಂದ ಸೌಂದರ್ಯವರ್ಧಕ ವಸ್ತುಗಳ ತಯಾರಿಕೆಗೆ, ಸೋರಿಯಾಸಿಸ್ ಚರ್ಮರೋಗ ಗುಣಮುಖವಾಗಲು ಅನುಕೂಲವಾಗಲಿದೆ. ಪ್ರಸ್ತುತ ಚರ್ಮ ರೋಗ ವಾಸಿಮಾಡುವ ಸಂಬಂಧ ಸಂಶೋಧನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ವಿಧಾನದಲ್ಲಿ ಸಂಶೋಧನೆ ಮಾಡಲಾಗುವುದು. ಈ ಹುಳು ವಿನಿಂದ ತುಂಬಾ ಲಾಭ ಇದೆ. ಅದನ್ನು ಬಳಸಿಕೊಳ್ಳುವ ವಿಧಾನವನ್ನು ರೈತರು ತಿಳಿದುಕೊಳ್ಳ ಬೇಕು. ಗುಣಮಟ್ಟದ ಬಸವನ ಹುಳು ಗಳನ್ನು ತೆಗೆದುಕೊಂಡು ಬಂದರೆ, ನಾವು ಖರೀದಿ ಮಾಡುತ್ತೇವೆ. ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತೇವೆ.”

-ಡಾ.ಆಶಾ ಶ್ರೀನಿವಾಸನ್, ಸಹಾಯಕ ಪ್ರಾಧ್ಯಾಪಕಿ, ಸ್ಕೂಲ್ ಆಫ್ ಲೈಫ್ ಸೈನ್ಸ್, ಜೆಎಸ್‌ಎಸ್ ಎಎಚ್‌ಇಆರ್

 

 

Tags:
error: Content is protected !!