Mysore
20
overcast clouds
Light
Dark

ಆದೇಶ ಪಾಲಿಸಲು ಕಬಿನಿಯಿಂದ ನೀರು ಬಿಡುಗಡೆ?

ಮಂಜು ಕೋಟೆ

ಎಚ್.ಡಿ.ಕೋಟೆ: ಕಬಿನಿ ಜಲಾಶಯದ ಭದ್ರತೆಯ ದೃಷ್ಟಿಯಿಂದ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶ ಪಾಲಿಸಲು ಜಲಾಶಯದ ಎರಡು ಗೇಟ್‌ಗಳ ಮೂಲಕ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.

ತಾಲ್ಲೂಕಿನ ಕಬಿನಿ ಜಲಾಶಯ ಭರ್ತಿಯಾಗಿ ಗರಿಷ್ಟ ಮಟ್ಟ 84 ಅಡಿಗಳನ್ನು ತಲುಪಲು ಒಂದೂವರೆ ಅಡಿ ಬಾಕಿ ಇರುತ್ತಿದ್ದಂತೆ ಒಳಹರಿವು ಹೆಚ್ಚಾಗಿ ಜಲಾಶಯದಲ್ಲಿ ಸಮಸ್ಯೆ ಉದ್ಭವಿಸಬಾರದು ಎಂಬ ಉದ್ದೇಶದಿಂದ ಅಧಿಕಾರಿ ಗಳು ಗುರುವಾರ ರಾತ್ರಿಯಿಂದ ಸುಭಾಷ್ ಪವ‌ ವಿದ್ಯುತ್ ಘಟಕ ಮತ್ತು ಜಲಾಶಯದ ನಾಲ್ಕು ಗೇಟ್‌ಗಳ ಪೈಕಿ ಎರಡು ಗೇಟ್‌ಗಳ ಮೂಲಕ ನೀರನ್ನು ಹರಿಸುತ್ತಿದ್ದಾರೆ.

2-3 ದಿನಗಳಿಂದ ಕೇರಳದ ವಯನಾಡು ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕುಸಿತ ಕಂಡಿದೆ. ಜಲಾಶಯಕ್ಕೂ ಒಳಹರಿವಿನ ಪ್ರಮಾಣ ಕೇವಲ 4,500 ಕ್ಯೂಸೆಕ್ಸ್‌ನಷ್ಟು ಹರಿದುಬರುತ್ತಿದೆ. ಆದರೆ, ಜಲಾಶಯ ದಿಂದ ಹೊರಗೆ ಬಿಡುತ್ತಿರುವುದು 5 ಸಾವಿರ ಕ್ಯೂಸೆಕ್ಸ್ ನೀರು ಮಾತ್ರ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಪವರ್ ವಿದ್ಯುತ್ ಘಟಕದ ಮೂಲಕವೇ 5 ಸಾವಿರ ಕ್ಯೂಸೆಕ್ಸ್‌ನಷ್ಟು ನೀರು ಹರಿಬಿಡುತ್ತಿದ್ದು, ಜಲಾಶಯದ ಎರಡು ಗೇಟ್‌ಗಳ ಮೂಲಕ ಹೆಚ್ಚಿನ ನೀರನ್ನು ನದಿಗೆ ಹರಿಬಿಡುತ್ತಿದ್ದು, ಕಾವೇರಿ ನದಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ನೀರಾವರಿ ಇಲಾಖೆಯ ಮೇಲಧಿಕಾರಿಗಳು, ಜನಪ್ರತಿನಿಧಿಗಳು ಗುರುವಾರ ರಾತ್ರಿಯಿಂದಲೇ ಪಾಲಿಸುತ್ತಿದ್ದಾರೆ.

ಕಳೆದ ಬಾರಿ ಇದೇ ಸಂದರ್ಭದಲ್ಲಿ ಜಲಾಶಯದಲ್ಲಿ 69 ಅಡಿಗಳಷ್ಟು ಮಾತ್ರ ನೀರು ಸಂಗ್ರಹವಾಗಿ, ಜುಲೈ ಕೊನೆಯ ವಾರದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯ ಭರ್ತಿಯಾಗಿತ್ತು. ಆದರೆ ಈ ಬಾರಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಕುಸಿದಿದ್ದ ಕಬಿನಿ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪುತ್ತಿದೆ.

ಆದರೆ ಈ ತಿಂಗಳ ಕೊನೆಯವರೆಗೆ ಇದೇ ರೀತಿ ಜಲಾಶಯದಿಂದ ನೀರು ಹರಿಸಿದರೆ ನೀರಿನ ಮಟ್ಟ ಮತ್ತಷ್ಟು ಕುಸಿಯಲಿದೆ.

ಉತ್ತಮ ಮಳೆಯಾದರೆ ಕೇವಲ ಎರಡು ದಿನಗಳೊಳಗೆ ಜಲಾಶಯ ಭರ್ತಿಯಾಗಲಿದೆ. ಈಗಾಗಲೇ ಟಿಎಂಸಿ ನೀರು ಜಲಾಶಯದಲ್ಲಿ 18.2 ಟಿಎಂಸಿ ನೀರು ಶೇಖರಣೆಯಾಗಿದ್ದು, 82 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ 2 ಅಡಿ ಮಾತ್ರ ಬಾಕಿ ಇದೆ.

ಕೊಟ್ಸ್‌:

ಜಲಾಶಯದ ಹಿತದೃಷ್ಟಿಯಿಂದ ಸುಭಾಷ್ ಪವರ್‌ ವಿದ್ಯುತ್‌ ಘಟಕ ಮತ್ತು 2 ಗೇಟ್ ಗಳ ಮೂಲಕ 5,000 ಕ್ಯೂಸೆಕ್ಸ್ ನೀರನ್ನು ಮಾತ್ರ ಉನ್ನತ ಮಟ್ಟದ ಅಧಿಕಾರಿಗಳ ನಿರ್ದೇಶನದಂತೆ ಹೊರ ಬಿಡಲಾಗುತ್ತಿದೆ. ತಾಲ್ಲೂಕಿನ ಗಡಿ ಭಾಗ ಮತ್ತು ವಯನಾಡು ಪ್ರದೇಶದಲ್ಲಿ ದಿಢೀರ್ ಮಳೆ ಪ್ರಾರಂಭವಾಗಿ ಜಲಾಶಯಕ್ಕೆ ಒಳಹರಿವು ಬರುತ್ತದೆ ಎಂಬ ನಿರೀಕ್ಷೆಯಿಂದ ನೀರು ಹರಿಸಲಾಗುತ್ತಿದೆಯೇ ಹೊರತು ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶ ಪಾಲಿಸಲು ಅಲ್ಲ.
-ಚಂದ್ರಶೇಖರ್, ಇಇ, ಕಬಿನಿ ಜಲಾಶಯ

ಅಧಿಕಾರಿಗಳು ಪವರ್ ವಿದ್ಯುತ್‌ ಘಟಕದಿಂದ 3 ಸಾವಿರ ಮತ್ತು ಕ್ರಸ್ಟ್ ಗೇಟ್ ಮೂಲಕ 2 ಸಾವಿರ ಕ್ಯೂಸೆಕ್ಸ್ ಸೇರಿ ಒಟ್ಟು 5 ಸಾವಿರ ಕ್ಯೂಸೆಕ್ಸ್‌ನಷ್ಟು ನೀರನ್ನು ಹರಿಸಲಾಗುತ್ತಿದೆ ಎನ್ನುತ್ತಿದ್ದಾರೆ. ಆದರೆ, 5000 ಕ್ಯೂಸೆಕ್ಸ್‌ ನೀರನ್ನು ಜಲಾಶಯದ ಪಕ್ಷದ ಸುಭಾಷ್ ವಿದ್ಯುತ್‌ ಘಟಕದ ಮೂಲಕವೇ ಬಿಡುತ್ತಿದ್ದಾರೆ. ಎರಡೂವರೆ ಸಾವಿರ ಕ್ಯೂಸೆಕ್ಸ್ ನೀರನ್ನು ಕ್ರಸ್ಟ್ ಗೇಟ್ ಮೂಲಕ ಹರಿಸುತ್ತಿದ್ದಾರೆ.
-ಬೀರಂಬಳ್ಳಿ ಪ್ರಭಾಕರ್, ರೈತ ಮುಖಂಡ