ಜಲಮಂಡಳಿಯ ಬಿಲ್ ಬಾಕಿ ಇರಿಸಿಕೊಂಡವರಿಗೆ ‘ಏಕಬಾರಿ ತೀರುವಳಿ ವ್ಯವಸ್ಥೆ’ ಅಡಿಯಲ್ಲಿ ದಂಡ ಮತ್ತು ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆಯಂತೆ. ಟ್ರಾಫಿಕ್ ಅಪರಾಧಗಳಿಗೆ ವಿಧಿಸಿದ ದಂಡವನ್ನು ಬಾಕಿ ಇರಿಸಿ ಕೊಂಡವರಿಗೆ ಅರ್ಧ ದಂಡವನ್ನು ಮನ್ನಾಮಾಡುವ ಯೋಜನೆ ಭಾರೀ ಯಶಸ್ಸು ಪಡೆದಿರುವುದನ್ನು ನೋಡಿ, ಇದೇ ಮಾದರಿ ಯಲ್ಲಿ ಜಲಮಂಡಳಿ ಕೂಡ ಬಾಕಿ ವಸೂಲಿಗೆ ಮುಂದಾಗಿದೆ.
ನಗರ ಪಾಲಿಕೆಯ ಮನೆ ತೆರಿಗೆ ವಸೂಲಿಯಲ್ಲೂ ಇದೇ ಮಾದರಿ ಜಾರಿಯಲ್ಲಿದೆ. ಅಕಸ್ಮಾತ್ ಇದು ನಿರೀಕ್ಷೆಯಷ್ಟು ಯಶಸ್ಸು ಪಡೆಯದಿದ್ದರೆ, ಜಲಮಂಡಳಿ ಬಾಕಿ ಇರುವ ಬಿಲ್ನಲ್ಲಿ ಸ್ವಲ್ಪ ಮೊತ್ತವನ್ನು ಮುಂದಿನ ದಿನಗಳಲ್ಲಿ ಮನ್ನಾ ಮಾಡಬಹುದೇನೋ? ಬ್ಯಾಂಕ್ ಸಾಲ ವಸೂಲಾತಿಯಲ್ಲೂ ಏಕಬಾರಿ ತೀರುವಳಿ ಮತ್ತು ದಿವಾಳಿ ಕಾನೂನಿನಡಿಯಲ್ಲಿ ಇಂತಹ ವಿನಾಯಿತಿಯನ್ನು ನೀಡಲಾಗುತ್ತದೆ. ಅಂತಿಮವಾಗಿ ಈ ವಿನಾಯಿತಿಯಿಂದ ‘ಬಾಕಿ’ ವಸೂಲಾಗಬಹುದು. ಆದರೆ ಮುಂದಿನ ದಿನಗಳಲ್ಲಿ ನಿಯತ್ತಾಗಿ ಶುಲ್ಕ ಪಾವತಿಸುವವರು ಕೂಡ ಬಾಕಿ ಪಾವತಿಸುವಲ್ಲಿ ವಿಳಂಬಮಾಡಿ ವಿನಾಯಿತಿ ನಿರೀಕ್ಷಿಸುವುದನ್ನು ಅಲ್ಲಗಳೆಯಲಾಗದು. ಪ್ರಾಮಾಣಿಕವಾಗಿ ನಿಗದಿತ ಸಮಯಕ್ಕೆ ಶುಲ್ಕ ಪಾವತಿಸುವವರಿಗೆ ಯಾವುದೇ ರೀತಿಯ ವಿನಾಯಿತಿಯನ್ನು ನಿರಾಕರಿಸಿ ಬಾಕಿ ಇರಿಸಿಕೊಳ್ಳುವವರಿಗೆ ಮಾತ್ರ ಈ ರೀತಿ ವಿನಾಯಿತಿ ಕೊಡುವುದು ಯಾವ ಸೀಮೆ ನ್ಯಾಯ? ಎಂದು ಪ್ರಜ್ಞಾವಂತರು ಪ್ರಶ್ನಿಸುವಂತಾಗಿದೆ.
-ರಮಾನಂದ ಶರ್ಮಾ,ಜೆ.ಪಿ.ನಗರ, ಬೆಂಗಳೂರು





