ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಪಾರಂಪರಿಕ ಕ್ರೀಡೆ ಕುಸ್ತಿ ಪಂದ್ಯಾವಳಿ ಪ್ರೋತ್ಸಾಹವಿಲ್ಲದೆ ವರ್ಷದಿಂದ ವರ್ಷಕ್ಕೆ ಕಳೆಗುಂದುತ್ತಿದೆ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬ ಗಾದೆ ಮಾತಿನಂತೆ ಕೆಲವರು ದಸರಾ ಕುಸ್ತಿಯಲ್ಲಿ ಭಾಗವಹಿಸುವ ಪೈಲ್ವಾನರಿಗೆ ಪ್ರೋತ್ಸಾಹ ಧನ ನೀಡುವಲ್ಲಿ ತಾರತಮ್ಯ ಮಾಡಿ, ಆನ್ ಲೈನ್ ಪೇಮೆಂಟ್ ಮಾಡುತ್ತೇವೆ ಎಂದು ಹೇಳಿ ಎಷ್ಟೋ ಪೈಲ್ವಾನರಿಗೆ ಪ್ರೋತ್ಸಾಹಧನ ನೀಡದೇ ವಂಚಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.
ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣಕ್ಕೆ ಚಾವಣಿ ಇಲ್ಲದೆ ಬಿಸಿಲಿನ ತಾಪ ತಾಳಲಾರದೆ ಹಾಗೂ ಮಳೆ ಬಂದಾಗ ಪ್ರೇಕ್ಷಕರು ಪಡುವ ಕಷ್ಟ ಅಷ್ಟಿಷ್ಟಲ್ಲ. ದಶಕಗಳ ಹಿಂದೆ ಕುಸ್ತಿ ಪಂದ್ಯಾವಳಿಗಳಿಗೆ ವ್ಯಾಪಕ ಪ್ರಚಾರ ಮಾಡಲಾಗುತ್ತಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಪ್ರಚಾರವಿಲ್ಲದೆ ನೋಡುಗರ ಸಂಖ್ಯೆ ಕ್ಷೀಣಿಸುತ್ತಿದೆ. ಈ ವರ್ಷದ ದಸರಾ ಮಹೋತ್ಸವ ಪ್ರಾರಂಭವಾಗಲು ಸಮಯವಿರುವುದರಿಂದ ಪ್ರೋತ್ಸಾಹ ಧನ ಹೆಚ್ಚಿಸಿ, ವ್ಯಾಪಕ ಪ್ರಚಾರ ನಡೆಸಿ, ಪಾರದರ್ಶಕತೆಗೆ ಆದ್ಯತೆ ನೀಡಿ ಪಾರಂಪರಿಕ ಕ್ರೀಡೆಯನ್ನು ಉಳಿಸುವುದು ಅಗತ್ಯ.
– ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





