ರಾಜ್ಯದ ೧೭೫ ತಾಲ್ಲೂಕುಗಳು ಭೀಕರ ಬರಕ್ಕೆ ತತ್ತರಿಸಿ, ಶೇಕಡಾ ೮೦ ಕ್ಕೂ ಹೆಚ್ಚು ಬೆಳೆ ನಷ್ಟದಿಂದ ಅನ್ನದಾತರು ಸಂಪೂರ್ಣ ಕಂಗಾಲಾಗಿದ್ದರೂ ಸರ್ಕಾರದ ಮಂದಗತಿಯ ಧೋರಣೆ ಸರಿಯಲ್ಲ.
ಬರ ಆವರಿಸಿ ೪ ತಿಂಗಳು ಕಳೆದ ನಂತರ ಎಚ್ಚೆತ್ತುಕೊಂಡಿರುವ ಸರ್ಕಾರ, ಕೇವಲ ೮೯ ತಾಲ್ಲೂಕುಗಳಲ್ಲಿ ತೀವ್ರ ಹಾಗೂ ೧೨ ತಾಲ್ಲೂಕುಗಳಲ್ಲಿ ಕಡಿಮೆ ಬರ ಎಂದು ಕಾಗದದ ಮೇಲೆ ವಿಂಗಡಿಸಿ ಕಾಲಹರಣ ಮಾಡುತ್ತಿರುವುದು ದುರಂತ. ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ, ಕೇವಲ ಅಂಕಿ-ಅಂಶಗಳ ನಾಟಕವಾಡಿದರೆ ರೈತನ ಖಾಲಿ ಹೊಟ್ಟೆ ತುಂಬುವುದಿಲ್ಲ.ಆಡಳಿತ ಮತ್ತು ವಿರೋಧ ಪಕ್ಷಗಳು ಕೇವಲ ರಾಜಕೀಯ ಬಾಣಗಳ ಬಿಡುವುದನ್ನು ಬಿಟ್ಟು, ಕಷ್ಟದಲ್ಲಿರುವ ರೈತರ ನೆರವಿಗೆ ತಕ್ಷಣ ಬರಬೇಕು.
ವಿಳಂಬವಿಲ್ಲದೆ ಸರ್ಕಾರ ೧೭೫ ತಾಲ್ಲೂಕುಗಳಿಗೆ ಸೂಕ್ತ ಪರಿಹಾರ ಹಣ ಬಿಡುಗಡೆ ಮಾಡಿ, ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು. ಅನ್ನದಾತನಿಗೆ ಜೀವದಾನ ನೀಡಲು ಸರ್ಕಾರ ತುರ್ತು ಕ್ರಮ ಕೈಗೊಳ್ಳುವುದು ಅತ್ಯಗತ್ಯ.
-ಡಾ. ಎಚ್.ಕೆ.ವಿಜಯಕುಮಾರ್, ಬೆಂಗಳೂರು



