ಮುಂದಿನ ದಿನಗಳಲ್ಲಿ ಕ್ರಿಕೆಟ್ ಆಟಗಾರರಿಗೆ ಸಾಧನೆ ಆಧಾರದ ಮೇಲೆ ವೇತನ ನೀಡುವುದು ಹಾಗೂ ವಿದೇಶಿ ಪ್ರವಾಸದ ವೇಳೆ ಅವರ ಕುಟುಂಬದವರನ್ನು ಕರೆದುಕೊಂಡು ಹೋಗಲು ಅವಕಾಶ ನೀಡದಿರಲು ಭಾರತೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ ಎಂಬುದಾಗಿ ವರದಿಯಾಗಿದೆ.
ಇದು ಬಹು ಅಪೇಕ್ಷಿತ ಕ್ರಮವಾಗಿದ್ದು, ಕ್ರಿಕೆಟ್ ಪ್ರೇಮಿಗಳು ಈ ಕ್ರಮವನ್ನು ಸ್ವಾಗತಿಸುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಯಾವುದೇ ಸಾಧನೆ ಮಾಡದ ಆಟಗಾರರಿಗೂ ಲಕ್ಷ ರೂ. ಲೆಕ್ಕದಲ್ಲಿ ವೇತನ ನೀಡುತ್ತಿರುವ ಕ್ರಿಕೆಟ್ ಮಂಡಳಿಯ ಧೋರಣೆ ಬಹುಕಾಲ ದಿಂದಲೂ ಟೀಕೆಗೆ ಗುರಿಯಾಗಿತ್ತು. ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಕೋಟಿ ರೂ.ಲೆಕ್ಕದಲ್ಲಿ ಸಂಭಾವನೆ ನೀಡುತ್ತಾರೆ. ಇದನ್ನು ಕೇಳಿದಾಗ ಆಶ್ಚರ್ಯವಾಗುತ್ತದೆ. ಆದರೆ ಮಳೆ, ಚಳಿ, ಬಿಸಿಲು ಎಂಬುದನ್ನೂ ಲೆಕ್ಕಿಸದೆ ಗಡಿಯಲ್ಲಿ ದೇಶಕಾಯುವ ಸೈನಿಕರಿಗೆ ಸರಿಯಾದ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಮೀನಮೇಷ ಎಣಿಸುತ್ತದೆ. ಆದರೆ ಕ್ರಿಕೆಟ್ ಆಟಗಾರರಿಗೆ ಹಾಗೂ ಅವರ ಕುಟುಂಬದವರಿಗೆ ಹಣವನ್ನು ವ್ಯಯಿಸುತ್ತದೆ. ಇತ್ತ ಸೈನಿಕರು ಕುಟುಂಬವನ್ನು ಬಿಟ್ಟು ಗಡಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಆದರೆ ಕ್ರಿಕೆಟಿಗರು ಮಾತ್ರ ಕನಿಷ್ಠ ಎರಡು ತಿಂಗಳೂ ಕುಟುಂಬವನ್ನು ಬಿಟ್ಟಿರಲಾಗುವುದಿಲ್ಲವೇನೋ ಎಂಬಂತೆ ಅವರ ಕುಟುಂಬಕ್ಕೂ ಸಕಲ ಸೌಕರ್ಯವನ್ನು ಕಲ್ಪಿಸುತ್ತದೆ. ಇದು ಸರಿಯಾದ ಕ್ರಮವಲ್ಲ. ಸದ್ಯ ತಡವಾಗಿಯಾದರೂ ಕ್ರಿಕೆಟ್ ಆಡಳಿತ ಮಂಡಳಿಗೆ ಜ್ಞಾನೋದಯವಾಗಿದೆ.
-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು.