ಮೈಸೂರಿನ ಪ್ರಮುಖ ಬಡಾವಣೆಗಳಲ್ಲಿ ಒಂದಾದ ಪಡುವಾರಹಳ್ಳಿ-ಮುಕ್ತ ವಿಶ್ವವಿದ್ಯಾನಿಲಯ ಮುಂಭಾಗದ ಸಿಗ್ನಲ್ ಬಳಿ ಪ್ರತಿದಿನವೂ ಸಂಚಾರ ದಟ್ಟಣೆಯಿರುತ್ತದೆ. ಅಂತೆಯೇ, ಅದೇ ಸಿಗ್ನಲ್ ಬಳಿಯಿರುವ ಶ್ರೀ ಆದಿಚುಂಚನಗಿರಿ ವಿದ್ಯಾರ್ಥಿನಿಲಯದ ಕಾಂಪೌಂಡ್ ಬಳಿಯ ಮ್ಯಾನ್ಹೋಲ್ ಒಳಗೆ ಕಸ-ಕಡ್ಡಿ ಸಿಲುಕಿಕೊಂಡಿದ್ದು, ಮ್ಯಾನ್ ಹೋಲ್ ಮುಚ್ಚಳದಿಂದ ಚರಂಡಿ ನೀರು ಕಳೆದ ಐದು-ಆರು ದಿನಗಳಿಂದ ಉಕ್ಕಿ ರಸ್ತೆಗೆ ಹರಿಯುತ್ತಿದ್ದು, ಎಲ್ಲೆಡೆ ದುರ್ನಾತ ಬೀರುತ್ತಿದೆ. ಅದಲ್ಲದೇ ಈ ರಸ್ತೆಯಲ್ಲಿಯೇ ಕೊಂಚ ದೂರದಲ್ಲಿ ಬಸ್ ತಂಗುದಾಣವಿದ್ದು, ಅಲ್ಲಿ ಬಸ್ಸಿಗಾಗಿ ಕಾಯುವ ಪ್ರಯಾಣಿಕರಿಗೆ ವಾಹನ ಸಂಚಾರದಿಂದ ಚರಂಡಿ ನೀರು ರಾಚುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಿದೆ.
– ಆರ್.ಯಶಸ್, ಮೈಸೂರು





