Mysore
21
overcast clouds

Social Media

ಶುಕ್ರವಾರ, 13 ಮಾರ್ಚ್ 2026
Light
Dark

ಓದುಗರ ಪತ್ರ: ಗೋಲ್ಡ್ ಪಾಸ್ ಕೊಂಡವರಿಗೆ ಹಣ ಹಿಂದಿರುಗಿಸಿ

ಓದುಗರ ಪತ್ರ

೨೦೨೫ರ ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ದಸರಾ ಸಮಿತಿ ಪರಿಚಯಿಸಿದ್ದ ಗೋಲ್ಡ್ ಪಾಸ್ ಅನ್ನು ೬,೫೦೦ರೂ. ಕೊಟ್ಟು ಖರೀದಿಸಿದ ಹಲವು ಮಂದಿಗೆ ತೀರ ನಿರಾಸೆ ಉಂಟಾಗಿದೆ. ಹಣ ತೆತ್ತು ಗೋಲ್ಡ್ ಪಾಸ್ ಖರೀದಿಸಿದವರಿಗೆ ನಿಗದಿಪಡಿಸಿದ ಸ್ಥಳದಲ್ಲಿ ಜಂಬೂಸವಾರಿ ವೀಕ್ಷಿಸಲು ಪೊಲೀಸರು ಅನುಮತಿ ನೀಡದೆ ಮಧ್ಯಾಹ್ನ ೧೨ ಗಂಟೆಗೇ ಅರಮನೆ ಪ್ರವೇಶಿಸುವ ಎಲ್ಲ ಗೇಟ್‌ಗಳನ್ನು ಬಂದ್ ಮಾಡಿದ್ದರು. ದೊಡ್ಡಗಡಿಯಾರ, ಕೆ.ಆರ್. ವೃತ್ತ ಸೇರಿದಂತೆ ಇತರ ಸ್ಥಳಗಳಲ್ಲಿ ರಸ್ತೆಯ ಬದಿಯಲ್ಲಿ ನಿಂತು ಜಂಬೂ ಸವಾರಿ ನೋಡಿ ಎಂದು ಪುಕ್ಕಟೆ ಸಲಹೆಯನ್ನು ಬೇರೆ ನೀಡುತ್ತಿದ್ದರು. ಇದು ನ್ಯಾಯವೇ? ಮಾಧ್ಯಮಗಳ ಮುಂದೆ ಪೊಲೀಸ್ ಆಯುಕ್ತರು ದಸರಾ ವೀಕ್ಷಣೆಗೆ ಬರುವವರಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದರು. ಇವರ ಮಾತನ್ನು ನಂಬಿ ಪಾಸ್ ಪಡೆದ ಅನೇಕ ಮಂದಿಗೆ ಪ್ರವೇಶ ನಿರಾಕರಿಸಿದ್ದು ಖಂಡನೀಯ. ಬಹುತೇಕ ಜನರು ನಿರಾಸೆಯೊಂದಿಗೆ ದಸರಾ ನೋಡಲು ಹರಸಾಹಸಪಟ್ಟರೆ, ಮತ್ತೆ ಕೆಲವರು ಜಂಬೂ ಸವಾರಿ ಮೆರವಣಿಗೆಯನ್ನೇ ನೋಡದೆ ಮನೆಯತ್ತ ಹೊರಟರು. ದಸರಾ ಅಚ್ಚುಕಟ್ಟಾಗಿ ನಡೆಯಲು ಕರ್ತವ್ಯ ನಿರ್ವಹಿಸಿದ ಮೈಸೂರು ಜಿಲ್ಲಾಧಿಕಾರಿಗಳು ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತರು ಗೋಲ್ಡ್ ಪಾಸ್ ಪಡೆದು ದಸರಾ ವೀಕ್ಷಣೆ ಮಾಡಲು ಅವಕಾಶ ಸಿಗದಿರುವವರನ್ನು ಗುರುತಿಸಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರದೊಡನೆ ಚರ್ಚಿಸಿ ಹಣ ಹಿಂದಿರುಗಿಸಲು ಕ್ರಮ ಕೈಗೊಳ್ಳಬೇಕು.

– ನಾಗೇಶ್ ,ಮಾನಸಗಂಗೋತ್ರಿ, ಮೈಸೂರು

Tags:
error: Content is protected !!