ಫುಟ್ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟಿನ ಆದೇಶವು ಕಾರಣವಾಗಿದೆ, ನಿಜ. ಆದರೆ ತೆರವಿಗೆ ಮುನ್ನ ಇಂತಹ ವ್ಯಾಪಾರಿಗಳಿಗೆ ಬದಲಿ ಶಾಶ್ವತ ವ್ಯವಸ್ಥೆ ಕಲ್ಪಿಸುವುದು ಸ್ಥಳೀಯ ಆಡಳಿತದ ಕರ್ತವ್ಯ. ಇಲ್ಲಿ ಮಾನವೀಯತೆಯೂ ಇರಬೇಕಾಗುತ್ತದೆ.
ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಫುಟ್ ಪಾತ್ ವ್ಯಾಪಾರಿಗಳ ತೆರವು ಕಾರ್ಯಾಚರಣೆ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಇತ್ತೀಚೆಗೆ ಮೈಸೂರಿನಲ್ಲಿ ಇದು ನಡೆಯುತ್ತಿದೆ. ಪಾದಚಾರಿಗಳ ಹಿತದೃಷ್ಟಿಯಿಂದ ಈ ಕಾರ್ಯಸ್ತುತ್ಯಾರ್ಹ. ಇದು ಕೇವಲ ಬೆಂಗಳೂರು, ಮೈಸೂರಿನ ಸಮಸ್ಯೆಯಲ್ಲ. ರಾಜ್ಯದ ನಾನಾ ಕಡೆ ಫುಟ್ಪಾತ್ ವ್ಯಾಪಾರಿಗಳನ್ನು ಕಾಣಬಹುದಾಗಿದೆ. ಈ ಸಮಸ್ಯೆ ಮರುಕಳಿಸಬಾರದೆಂದರೆ ಫುಟ್ಪಾತ್ ವ್ಯಾಪಾರಿಗಳಿಗೆ ಸೂಕ್ತ ಕಡೆ ಶಾಶ್ವತ ವ್ಯವಸ್ಥೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಸ್ವಲ್ಪ ದಿನಗಳ ನಂತರ ಮತ್ತೆ ಹಿಂದಿನ ಜಾಗದಲ್ಲೇ ವ್ಯಾಪಾರ ಚಟುವಟಿಕೆ ನಡೆಯುವುದನ್ನು ಕಾಣಬಹುದು. ಹಾಗಾಗಿ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಪಾದಚಾರಿಗಳ ರಸ್ತೆ ಅತಿಕ್ರಮಣವಾಗದಂತೆ ನೋಡಿಕೊಳ್ಳಬೇಕು. ಹಾಗೆಯೇ ಫುಟ್ಪಾತ್ ವ್ಯಾಪಾರಿಗಳು ನೆಮ್ಮದಿಯ ಜೀವನ ನಡೆಸುವಂತಾಗಬೇಕು.
-ಎ.ಎಸ್.ಗೋಪಾಲಕೃಷ್ಣ, ಮೈಸೂರು



