ಮೈಸೂರಿನ ಕೆಆರ್ಎಸ್ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ನಾಮಕರಣ ಮಾಡಲು ಮುಂದಾಗಿರುವ ಮೈಸೂರು ಮಹಾನಗರ ಪಾಲಿಕೆಯ ನಿರ್ಧಾರ ಸೂಕ್ತವಲ್ಲ.
ಈ ರಸ್ತೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ‘ಪ್ರಿನ್ಸೆಸ್ ರಸ್ತೆ’ ಎಂದೇ ಪ್ರಸಿದ್ಧಿಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ರವರ ಸಹೋದರಿ ಕೃಷ್ಣಾಜಮ್ಮಣ್ಣಿ ಮತ್ತವರ ಮೂವರು ಹೆಣ್ಣುಮಕ್ಕಳು ಕ್ಷಯ ರೋಗಕ್ಕೆ ಬಲಿಯಾದಾಗ, ನಾಲ್ವಡಿ ಕೃಷ್ಣರಾಜ ಒಡೆಯರು ೧೦೦ ಎಕರೆ ಜಾಗ ನೀಡಿ ತಮ್ಮ ಸಹೋದರಿಯ ಹೆಸರಿನಲ್ಲಿ ದಕ್ಷಿಣ ಭಾರತದ ಮೊದಲ ಕ್ಷಯ ರೋಗ ಆಸ್ಪತ್ರೆ ‘ಪ್ರಿನ್ಸೆಸ್ ಕೃಷ್ಣಾಜಮ್ಮಣ್ಣಿ ಸ್ಯಾನಿಟೋರಿಯಂ’ ಕಟ್ಟಿಸಿದರು. ಇದಕ್ಕೆ ರಾಜಕುಮಾರಿ ಕೃಷ್ಣಾಜಮ್ಮಣ್ಣಿಯವರ ಪತಿ ಕರ್ನಲ್ ದೇಸ ರಾಜೇ ಅರಸ್ ಮತ್ತು ಕುಟುಂಬಸ್ಥರು ಎಪ್ಪತ್ತೈದು ಸಾವಿರ ರೂ.ಗಳನ್ನು ದೇಣಿಗೆ ನೀಡಿ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದಾರೆ.
ಇವರ ಸ್ಮರಣಾರ್ಥವಾಗಿ ಕೆಆರ್ಎಸ್ಗೆ ತೆರಳುವ ರಸ್ತೆಗೆ ಕೃಷ್ಣಾಜಮ್ಮಣ್ಣಿಯವರ ಹೆಸರಿಡಲಾಗಿದೆ. ಆದರೆ ಮಹಾನಗರ ಪಾಲಿಕೆ ಈ ಮಾರ್ಗಕ್ಕೆ ಈಗ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ಮರುನಾಮಕರಣ ಮಾಡಲು ಮುಂದಾಗಿರುವುದು ಮೈಸೂರಿನ ಇತಿಹಾಸ ಮತ್ತು ಪರಂಪರೆಗೆ ಧಕ್ಕೆಯುಂಟು ಮಾಡಲಿದೆ. ಅಲ್ಲದೆ ಪ್ರಿನ್ಸೆಸ್ ರಸ್ತೆಯ ಹೆಸರು ಬದಲಿಸಿದರೆ ಅದು ಮೈಸೂರಿನ ಜನತೆಯ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತದೆ. ಆದ್ದರಿಂದ ಮಹಾನಗರ ಪಾಲಿಕೆಯವರು ಪಾರಂಪರಿಕ ನಗರವನ್ನು ಪಾರಂಪರಿಕವಾಗಿಯೇ ಉಳಿಸಿಕೊಂಡು ಹೊಸ ಬಡಾವಣೆಯ ರಸ್ತೆಗಳಿಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ಹೆಸರಿಡಲಿ.
-ಲಕ್ಷಿ ಕಿಶೋರ್ ಅರಸ್, ಜಯಲಕ್ಷಿ ಪುರಂ, ಮೈಸೂರು.





