ಬಿಜೆಪಿ ಮತ್ತು ಜಾ.ದಳ ಮೈತ್ರಿಕೂಟದ ಮೈಸೂರು ಚಲೋ ಪಾದಯಾತ್ರೆ, ಕಾಂಗ್ರೆಸ್ನವರ ಜನಾಂದೋಲನ ಸಮಾವೇಶ ಮುಗಿಯುತ್ತಿರುವಂತೆಯೇ ಹಾಗೂ ಪಾದಯಾತ್ರೆಯ ವೇಳೆ ಚುನಾಯಿತ ಪ್ರತಿನಿಧಿಗಳು ಪರಸ್ಪರ ನಿಂದಿಸಿಕೊಂಡು ಮಾಡಿದ ವಾಗ್ದಾಳಿಗಳು ಜನರ ಮನಸ್ಸಿನಿಂದ ಮರೆಯಾಗುವ ಮುನ್ನವೇ ಮತ್ತಷ್ಟು ಪಾದಯಾತ್ರೆಗಳು ರಾಜ್ಯದಲ್ಲಿ ನಡೆಯುವ ಸೂಚನೆಗಳಿವೆ.
ಬಸನಗೌಡ ಪಾಟೀಲ್ ಯತ್ನಾಳರ ಬೀದ ನಿಂದ ಬಳ್ಳಾರಿವರೆಗಿನ ಪಾದಯಾತ್ರೆ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ನ್ಯಾಯಯಾತ್ರೆ ಮತ್ತು ಬಿಜೆಪಿಯ ತಿರಂಗ ಯಾತ್ರೆ ಸದ್ಯದಲ್ಲೇ ಆರಂಭವಾಗಲಿದೆ.
ಈ ಪಾದಯಾತ್ರೆಗಳಿಂದ ಜನರಿಗೇನು ಲಾಭವಾಗಿದೆಯೋ ತಿಳಿಯದು. ಈ ರಾಜಕೀಯ ಪಕ್ಷಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೂ ಪಾದಯಾತ್ರೆಗಳ ಮೂಲಕ ಪರಸ್ಪರ ನಿಂದಿಸಿಕೊಳ್ಳುತ್ತಾ, ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಾ ಕಾಲಕಳೆಯುತ್ತಿದ್ದು, ಈ ನಡವಳಿಕೆ ರಾಜಕೀಯ ಮೌಲ್ಯ ಕುಂದುವಂತೆ ಮಾಡಿರುವುದಂತೂ ನಿಜ. ಈ ಪಾದಯಾತ್ರೆಗಳ ಅಜೆಂಡಾವನ್ನು ಸೂಕ್ಷ್ಮ ವಾಗಿ ಗಮನಿಸಿದರೆ, ಈ ರಾಜಕೀಯ ಪಕ್ಷಗಳಿಗೆ ಸರ್ಕಾರಗಳನ್ನು ಉರುಳಿಸುವುದು ಮತ್ತು ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವುದು ಮಾತ್ರ ಮುಖ್ಯವೇನೋ ಅನಿಸುತ್ತದೆ.
ಪ್ರಸ್ತುತ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಬದುಕು ಹೈರಾಣಾಗಿದೆ. ಸಾಕಷ್ಟು ಕಡೆ ಭೂಕುಸಿತ-ಜಲಪ್ರವಾಹಗಳು ಉಂಟಾಗಿ ಸಾಕಷ್ಟು ಸಾವು-ನೋವುಗಳು ಸಂಭವಿಸಿದೆ. ಇವುಗಳ ಅರಿವೇ ಇಲ್ಲದೇ ರಾಜಕೀಯ ಪಕ್ಷಗಳು ತಮ್ಮ ಹಿತಕ್ಕಾಗಿ ಪಾದಯಾತ್ರೆಗಳನ್ನು ಮಾಡಿಕೊಂಡು ಸುಖಾಸುಮ್ಮನೆ ಕಾಲಹರಣ ಮಾಡುತ್ತಿರುವುದು ಸರಿಯೇ? ಮುಂದಾದರೂ ಚುನಾಯಿತ ಪ್ರತಿನಿಧಿಗಳು ಜವಾಬ್ದಾರಿಯಿಂದ ವರ್ತಿಸಿ ಜನಸಾಮಾನ್ಯರ ಬವಣೆಗಳನ್ನು ಆಲಿಸಿ ಪರಿಹರಿಸಲು ಶ್ರಮಿಸಲಿ.
-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು.





