Mysore
30
few clouds

Social Media

ಭಾನುವಾರ, 15 ಫೆಬ್ರವರಿ 2026
Light
Dark

ಓದುಗರ ಪತ್ರ| ಸಾಹಿತ್ಯ ಸಮ್ಮೇಳನಗಳ ಉದ್ದೇಶ ಈಡೇರಲಿ

ಈ ಬಾರಿ ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 100 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದ್ದು, 30 ಕೋಟಿ ರೂ.ಗಳ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಇಷ್ಟೊಂದು ಹಣ ವ್ಯಯಿಸಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಮಾಡುತ್ತಿದ್ದರೂ ಇದರಿಂದ ಕನ್ನಡ ಹಾಗೂ ಕನ್ನಡಿಗರಿಗೆ ಏನಾದರೂ ಉಪಯೋಗವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ.

ರಾಜ್ಯದಲ್ಲಿ ಅನ್ಯ ಭಾಷಿಗರ ಹಾವಳಿ ಹೆಚ್ಚಾಗಿದೆ. ಅದರಲ್ಲಿಯೂ ಬೆಂಗಳೂರಿನಂತಹ ನಗರದಲ್ಲಿ ಅನ್ಯಭಾಷಿಗರೇ ಹೆಚ್ಚಾಗಿದ್ದು, ಕನ್ನಡದಲ್ಲಿ ನಾಮಫಲಕ ಅಳವಡಿಸಬೇಕು ಎಂಬುದಕ್ಕೂ ಹೋರಾಟಗಳನ್ನು ಮಾಡಬೇಕಾಗಿದೆ. ಪ್ರತಿ ಬಾರಿ ಸಮ್ಮೇಳನಗಳು ನಡೆದಾಗಲೂ ಕನ್ನಡ ಭಾಷೆಯ ಸಮೃದ್ಧಿಗಾಗಿ ಹೊಸ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ. ಅವುಗಳನ್ನು ಜನರಿಗೆ ತಲುಪಿಸಲು ಯೋಜನೆಗಳನ್ನು ರೂಪಿಸಿಕೊಳ್ಳಲಾಗುತ್ತದೆ. ಆದರೆ, ಅವು ಎಚ್ಚರಮಟ್ಟಿಗೆ ಕನ್ನಡಿಗರ ಮೇಲೆ ಪರಿಣಾಮ ಬೀರುತ್ತಿವೆಯೋ ತಿಳಿಯದು.

ಇತ್ತೀಚೆಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ವಿಚಾರದಲ್ಲಿಯೂ ಭಾರಿ ವಿರೋಧಗಳು ಕೇಳಿಬಂದಿದ್ದವು. ಹೀಗೆ ಅನ್ಯಭಾಷೆಗಳ ಹಾವಳಿಯ ನಡುವೆ ಕರ್ನಾಟಕದಲ್ಲಿಯೇ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನೂರಾರು ಕೋಟಿ ರೂ. ವ್ಯಯಿಸಿ ಮಾಡುವ ಇಂತಹ ಸಾಹಿತ್ಯ ಸಮ್ಮೇಳನಗಳಿಂದ ಕನ್ನಡನಾಡಿಗೆ ಏನಾದರೂ ಪ್ರಯೋಜನವಾಗು ವಂತಾಗಲಿ.

-ಜಾಕೀರ್ ಖಾನ್, ಸಾತಗಳ್ಳಿ, ಮೈಸೂರು.

Tags:
error: Content is protected !!