ಮೈಸೂರಿನ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯು ಪಾರಂಪರಿಕ ಸಂಗ್ರಹಾಲಯವಾಗುತ್ತಿದ್ದು, 23ನೇ ಮೈಸೂರು ಮಹಾರಾಜರಾಗಿದ್ದ 10ನೇ ಚಾಮರಾಜ ಒಡೆಯರ್ ಆಡಳಿತದಲ್ಲಿ ನಿರ್ಮಿಸಿದ್ದ 129 ವರ್ಷಗಳ ಹಳೆಯ ಕಟ್ಟಡವನ್ನು ಪಾರಂಪರಿಕ ಸಂಗ್ರಹಾಲಯವನ್ನಾಗಿ ರೂಪಿಸುತ್ತಿರುವುದು ಶ್ಲಾಘನೀಯ.
ಕೇಂದ್ರ ಸರ್ಕಾರದ ಸ್ವದೇಶ್ 20 ಯೋಜನೆಯಡಿ ರಾಜಮನೆತನದ ಆಡಳಿತವನ್ನು ಬಿಂಬಿಸುವ ಪಾರಂಪರಿಕ ಸಂಗ್ರಹಾಲಯವನ್ನಾಗಿ ರೂಪುಗೊಳಿಸುವ ಕಾಮಗಾರಿಗೆ ಡಿಪಿಆರ್ ಅನುಮೋದನೆಯಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆಗೆ 80 ಕೋಟಿ ರೂ. ಅನುದಾನ ಮಂಜೂರು ಮಾಡಿರುವುದು ಅಭಿನಂದನಾರ್ಹ. ಕರ್ನಾಟಕ ಪ್ರವಾಸೋದ್ಯರು ಮೂಲಸೌಕರ್ಯ ಅಭಿವೃದ್ಧಿ ನಿಗಮವು ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಏಜೆನ್ಸಿಯಾಗಿದ್ದು, ಕೃಷ್ಣರಾಜ ಬುಲೇ ವಾರ್ಡ್ ರಸ್ತೆಯನ್ನು ಪಾರಂಪರಿಕ ರಸ್ತೆಯನ್ನಾಗಿ ಹಾಗೂ ಡಿ.ದೇವರಾಜ ಅರಸು ರಸ್ತೆಯ ಜೆಎಲ್ಬಿ ರಸ್ತೆ ಜಂಕ್ಷನ್ ನಿಂದ ಹಳೆಯ ಜಿಲ್ಲಾಧಿಕಾರಿ ಕಚೇರಿವರೆಗೆ ದಾಹನ ಸಂಚಾರವನ್ನು ನಿಷೇಧಿಸಿ ಪಾದಾಚಾರಿ ಮಾರ್ಗಗಳನ್ನಾಗಿ ರೂಪಿಸುವ ಕೆಲಸವೂ ಮೆಚ್ಚುವಂತದ್ದು. ಈ ಯೋಜನೆಯಡಿ ಮೈಸೂರಿನ ಹೆರಿಟೇಜ್ ಟಾಂಗಾ ರೈಡ್, ಮೈಸೂರಿನ ಸಾಂಪ್ರದಾಯಿಕ ತಿನಿಸು, ತಿಂಡಿ ಹಾಗೂ ಪಾನೀಯಗಳು ಸಿಗುವುದರ ಜೊತೆಗೆ ಸಾಂಸ್ಕೃತಿಕ ನಗರಿಯ ಹಿನ್ನೆಲೆ, ಇತಿಹಾಸ ಹಾಗೂ ಗತವೈಭವದ ಮಾಹಿತಿಯೊಂದಿಗೆ ಅನನ್ಯ ಅನುಭವಗಳನ್ನು ತಮ್ಮದಾಗಿಸುವ ಅವಕಾಶ ಕಲ್ಪಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ ತಿಳಿಸಿರುವುದು ಸ್ವಾಗತಾರ್ಹ. ಸ್ವದೇಶ್ 2.0 ಯೋಜನೆಯಡಿ ಮಂಜೂರಾಗಿರುವ 80 ಕೋಟಿ ರೂ. ಅನುದಾನವನ್ನು ಸದುಪಯೋಗಪಡಿಸಿಕೊಂಡು ಗುಣಮಟ್ಟದ ಕಾಮಗಾರಿಯಾಗುವಂತೆ ನೋಡಿಕೊಳ್ಳಬೇಕು ಎಂಬುದು ಮೈಸೂರಿನ ಜನತೆಯ ಆಶಯ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.





