ಮೈಸೂರಿನ ಕುವೆಂಪುನಗರ ಎಂ ಬ್ಲಾಕ್ನ ಗಣಪತಿ ದೇವಾಲಯಕ್ಕೆ ಹೊಂದಿಕೊಂಡಂತಿರುವ ಉದ್ಯಾನವನದಲ್ಲಿ ಕಸದ ರಾಶಿಯೇ ಸಂಗ್ರಹವಾಗಿದ್ದು, ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದೆ.
ಈ ಉದ್ಯಾನವನಕ್ಕೆ ಸೂಕ್ತ ರಕ್ಷಣೆ ಒದಗಿಸದ ಪರಿಣಾಮ ವಾತಾವರಣವೇ ಹಾಳಾಗಿದ್ದು, ಕೆಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಮದ್ಯವ್ಯಸನಿಗಳು ಪಾರ್ಕ್ನಲ್ಲಿಯೇ ಧೂಮಪಾನ, ಮದ್ಯಪಾನ ಮಾಡುತ್ತಿದ್ದಾರೆ. ಅಲ್ಲದೆ ಕುಡಿದ ಬಳಿಕ ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಬೀಸಾಡಿ ಹೋಗುತ್ತಿದ್ದಾರೆ.
ಇನ್ನು ಈ ಉದ್ಯಾನವನದ ತುಂಬೆಲ್ಲ ಪ್ಲಾಸ್ಟಿಕ್ ಬಾಟಲಿಗಳು, ಕವರ್ಗಳು ಹರಡಿಕೊಂಡಿದ್ದು, ಕಸದ ರಾಶಿಯೇ ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದೆ. ಇದರಿಂದಾಗಿ ಪಾರ್ಕ್ಗೆ ವಾಯುವಿಹಾರಕ್ಕೆಂದು ಬರುವವರಿಗೆ ಕಿರಿಕಿರಿಯಾಗುತ್ತಿದೆ.
ಪಾರ್ಕ್ ನಿರ್ವಹಣೆಯ ಗುತ್ತಿಗೆ ಪಡೆದಿರುವವರು ಇತ್ತ ಗಮನ ಹರಿಸದ ಪರಿಣಾಮ ಪಾರ್ಕ್ನಲ್ಲಿ ಗಿಡಗಂಟಿಗಳು ಬೆಳೆದುಕೊಂಡಿದ್ದು, ವಿಷ ಜಂತುಗಳ ಕಾಟವೂ ಹೆಚ್ಚಾಗಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಈ ಪಾರ್ಕ್ ಅನ್ನು ಸ್ವಚ್ಛಗೊಳಿಸಲು ಕ್ರಮವಹಿಸಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.





